ಪದ್ಯ ೧೯: ಕರ್ಣ ಶಕುನಿಗಳ ಉಪಾಯವೇನು?

ಹೋಗಲಾ ಪಾಂಡವರ ಚಿಂತೆಯ
ನೀಗಿದೆನು ನೀವಿನ್ನು ನೆನೆವು
ದ್ಯೋಗವೇನೆನೆ ನಗುತ ನುಡಿದರು ಕರ್ಣ ಶಕುನಿಗಳು
ಈಗಳೀ ವಿಭವದ ವಿಲಾಸದ
ಭೋಗದಗ್ಗಳಿಕೆಗಳ ಭುಜದ
ರ್ಪಾಗಮವನವರಿದ್ದ ವನದಲಿ ತೋರಬೇಕೆಂದ (ಅರಣ್ಯ ಪರ್ವ, ೧೮ ಸಂಧಿ, ೧೯ ಪದ್ಯ)

ತಾತ್ಪರ್ಯ:
ಕರ್ಣನ ಮಾತುಗಳಿಗೆ ಮರುಳಾದ ಧೃತರಾಷ್ಟ್ರನು, ಪಾಂಡವರ ಚಿಂತೆಯನ್ನು ನಾನೀಗ ಬಿಟ್ಟೆ, ನೀವೀಗ ಏನು ಮಾಡಬೇಕೆಂದಿರುವಿರಿ ಎಂದು ಕೇಳಲು, ನಮ್ಮ ವೈಭವ, ಸಂಭ್ರಮ, ಭೋಗಗಳನ್ನು ನಮ್ಮ ಬಾಹುಬಲದ ದರ್ಪದೊಂದಿಗೆ ಪಾಂಡವರಿರುವ ವನಕ್ಕೇ ಹೋಗಿ ತೋರಿಸಬೇಕು ಎಂದು ಕರ್ಣ ಶುಕುನಿಗಳು ಉತ್ತರಿಸಿದರು.

ಅರ್ಥ:
ಹೋಗು: ತೆರಳು; ಚಿಂತೆ: ಯೋಚನೆ; ನೀಗು: ನಿವಾರಿಸು; ನೆನೆ: ಸ್ಮರಿಸು; ಉದ್ಯೋಗ: ಕೆಲಸ; ನಗು: ಸಂತಸ; ನುಡಿ: ಮಾತಾಡು; ವಿಭವ: ಸಿರಿ, ಸಂಪತ್ತು; ವಿಲಾಸ: ಕ್ರೀಡೆ, ವಿಹಾರ; ಭೋಗ: ಸುಖವನ್ನು ಅನುಭವಿಸುವುದು; ಅಗ್ಗಳಿಕೆ: ಸಾಮರ್ಥ್ಯ; ಭುಜ: ತೋಳು, ಬಾಹು; ದರ್ಪ: ಠೀವಿ, ಗತ್ತು; ವನ: ಕಾಡು; ತೋರು: ಪ್ರದರ್ಶಿಸು;

ಪದವಿಂಗಡಣೆ:
ಹೋಗಲ್+ಆ+ ಪಾಂಡವರ+ ಚಿಂತೆಯ
ನೀಗಿದೆನು +ನೀವಿನ್ನು +ನೆನೆವ್
ಉದ್ಯೋಗವೇನ್+ಎನೆ+ ನಗುತ+ ನುಡಿದರು +ಕರ್ಣ +ಶಕುನಿಗಳು
ಈಗಳ್+ಈ+ ವಿಭವದ +ವಿಲಾಸದ
ಭೋಗದ್+ಅಗ್ಗಳಿಕೆಗಳ+ ಭುಜ+ದ
ರ್ಪಾಗಮವನ್+ಅವರಿದ್ದ +ವನದಲಿ +ತೋರಬೇಕೆಂದ

ಅಚ್ಚರಿ:
(೧) ನ ಕಾರದ ಸಾಲು ಪದ – ನೀಗಿದೆನು ನೀವಿನ್ನು ನೆನೆವುದ್ಯೋಗವೇನೆನೆ ನಗುತ ನುಡಿದರು

ನಿಮ್ಮ ಟಿಪ್ಪಣಿ ಬರೆಯಿರಿ