ಪದ್ಯ ೧೮: ಧೃತರಾಷ್ಟ್ರನ ಮನಸ್ಸು ಹೇಗೆ ಬದಲಾಯಿತು?

ಸೊಗಸು ತಳಿತುದು ತರಳಮನ ತಳ
ಮಗುಚಿದಂತಾಯ್ತವರೊಲವು ಕಾ
ಡಿಗೆಯ ಕೆಸರೊಳಗದ್ದ ನೀಲದ ಸರಿಗೆ ಸರಿಯಾಯ್ತು
ಮುಗುಳುಗಂಗಳ ಬಾಷ್ಪ ಬಿಂದುವ
ನುಗುರು ಕೊನೆಯಲಿ ಮಿಡಿದು ಕರ್ಣನ
ಹೊಗಳಿದನು ಬಳಿಕೇನು ಸಿಂಗಿಯಲುಂಟೆ ಸವಿಯೆಂದ (ಅರಣ್ಯ ಪರ್ವ, ೧೮ ಸಂಧಿ, ೧೮ ಪದ್ಯ)

ತಾತ್ಪರ್ಯ:
ಶಕುನಿ ಕರ್ಣರ ಮಾತುಗಳನ್ನು ಕೇಳಿ ಧೃತರಾಶ್ಟ್ರನ ಮನಸ್ಸಿನಲ್ಲಿದ್ದ ಕರುಣೆಯು ಪಾತ್ರೆಯನ್ನು ಬೋರಲು ಹಾಕಿದಾಗ ಎಲ್ಲವೂ ಹೊರಚೆಲ್ಲುವಂತೆ, ಅವನ ಒಲವು, ಪ್ರೀತಿಯು ಬಿದ್ದು ಹೋಯಿತು. ಪಾಂಡವರ ಮೇಲಿನ ಪ್ರೀತಿ ಕಾಡಿಗೆಯಲ್ಲಿ ಕಲಸಿದ ನೀಲಿಯ ನೂಲಿನಂತೆ ಕಪ್ಪಾಯಿತು. ಅರೆ ತೆರೆದ ಕಣ್ಣುಗಳಲ್ಲಿದ್ದ ಕಣ್ಣೀರನ್ನು ಬೆರಳ ತುದಿಯಿಂದ ಒರೆಸಿ, ಕರ್ಣನನ್ನು ನೀನು ಹೇಳುವುದೇ ಸರಿ. ಭಯಂಕರವಾದ ವಿಷವು ರುಚಿಯಾಗಬಹುದೇ ಎಂದು ಹೊಗಳಿದನು.

ಅರ್ಥ:
ಸೊಗಸು: ಅಂದ; ತಳಿತ: ಚಿಗುರಿದ; ತರಳ: ಚಂಚಲವಾದ; ತಳ: ಕೆಳಭಾಗ, ನೆಲ; ಮಗುಚು: ಅಡಿಮೇಲು ಮಾಡು; ಒಲವು: ಪ್ರೀತಿ; ಕಾಡಿಗೆ: ಅಂಜನ, ಕಪ್ಪು; ಕೆಸರು: ರಾಡಿ, ಪಂಕ; ಅದ್ದು: ಮುಳುಗಿಸು; ಸರಿಗೆ: ನೂಲು; ನೀಳ: ವಿಸ್ತಾರ, ಹರಹು; ಸರಿ: ಸಮಾನ; ಮುಗುಳು: ಮೊಗ್ಗು, ಚಿಗುರು; ಕಂಗಳು: ನಯನ; ಬಾಷ್ಪ: ನೀರು; ಬಿಂದು: ಹನಿ, ತೊಟ್ಟು; ಉಗುರು: ನಖ; ಕೊನೆ: ತುದಿ; ಮಿಡಿ: ತವಕಿಸು; ಹೊಗಳು: ಪ್ರಶಂಶಿಸು; ಬಳಿಕ: ನಂತರ; ಸಿಂಗಿ: ಒಂದು ಬಗೆಯ ಘೋರ ವಿಷ; ಸವಿ: ರುಚಿ, ಸ್ವಾದ;

ಪದವಿಂಗಡಣೆ:
ಸೊಗಸು +ತಳಿತುದು +ತರಳಮನ+ ತಳ
ಮಗುಚಿದಂತಾಯ್ತ್+ಅವರ್+ಒಲವು +ಕಾ
ಡಿಗೆಯ +ಕೆಸರೊಳಗ್+ಅದ್ದ+ ನೀಲದ +ಸರಿಗೆ+ ಸರಿಯಾಯ್ತು
ಮುಗುಳು+ಕಂಗಳ +ಬಾಷ್ಪ +ಬಿಂದುವನ್
ಉಗುರು +ಕೊನೆಯಲಿ +ಮಿಡಿದು +ಕರ್ಣನ
ಹೊಗಳಿದನು +ಬಳಿಕೇನು+ ಸಿಂಗಿಯಲುಂಟೆ +ಸವಿಯೆಂದ

ಅಚ್ಚರಿ:
(೧) ಉಪಮಾನಗಳ ಪ್ರಯೋಗ – ಸಿಂಗಿಯಲುಂಟೆ ಸವಿ; ತರಳಮನ ತಳ
ಮಗುಚಿದಂತಾಯ್ತವರೊಲವು; ಕಾಡಿಗೆಯ ಕೆಸರೊಳಗದ್ದ ನೀಲದ ಸರಿಗೆ ಸರಿಯಾಯ್ತು
(೨) ಪಾಂಡವರ ಮೇಲಿನ ಪ್ರೀತಿ ಎಳ್ಳಷ್ಟು ಇಲ್ಲವೆಂದು ತೋರಿಸುವ ಪರಿ – ಮುಗುಳುಗಂಗಳ ಬಾಷ್ಪ ಬಿಂದುವ ನುಗುರು ಕೊನೆಯಲಿ ಮಿಡಿದು
(೩) ತ ಕಾರದ ತ್ರಿವಳಿ ಪದ – ತಳಿತುದು ತರಳಮನ ತಳಮಗುಚಿದಂತಾಯ್ತ
(೪) ಅಲಂಕಾರಗಳಿಂದ ತುಂಬಿರುವ ಸೊಗಸಾದ ರಚನೆ

ನಿಮ್ಮ ಟಿಪ್ಪಣಿ ಬರೆಯಿರಿ