ಪದ್ಯ ೧೭: ಕರ್ಣನು ಧೃತರಾಷ್ಟ್ರನಿಗೆ ಏನು ಹೇಳಿದ?

ಈ ಸುಖದ ಸುಗ್ಗಿಯಲಿ ನಿನ್ನವ
ರೇಸು ಹೆಚ್ಚುಗೆಯಾಗಿ ಬದುಕಿದ
ರೈಸುವನು ನೆರೆನೋಡಿ ಹಿಗ್ಗದೆ ಪಾಂಡುನಂದನರು
ಘಾಸಿಯಾದರು ಘಟ್ಟಬೆಟ್ಟದ
ಪೈಸರದಲೆಂದಳಲಿ ಮರುಗುತ
ಸೂಸಿದೈ ಸಾಹಿತ್ಯ ಭಾಷೆಯನೆಂದನಾ ಕರ್ಣ (ಅರಣ್ಯ ಪರ್ವ, ೧೮ ಸಂಧಿ ೧೭ ಪದ್ಯ)

ತಾತ್ಪರ್ಯ:
ನಿನ್ನ ಮಕ್ಕಳಿಗೆ ಈಗ ಸುಖದ ಸುಗ್ಗಿ, ಈಗ ನಿನ್ನ ಮಕ್ಕಳು ಎಷ್ಟು ಹೆಚ್ಚಿನ ಸುಖದಿಂದ ಬದುಕುತ್ತಿರ್ವರೋ ಎಂದು ನೋಡಿ ಹಿಗ್ಗದೆ, ಪಾಂಡವರು ಬೆಟ್ಟ ಗುಡ್ಡಗಳ ಸಾಲಿನಲ್ಲಿ ಎಷ್ಟು ನಲುಗುತ್ತಿರುವರೋ ಎಂದು ಮರುಗುತ್ತಾ ಅಲಂಕಾರದ ಮಾತುಗಳನ್ನು ಹೇಳುತ್ತಿರುವೆ ಎಂದು ಕರ್ಣನು ಧೃತರಾಷ್ಟ್ರನಿಗೆ ಹೇಳಿದನು.

ಅರ್ಥ:
ಸುಖ: ನೆಮ್ಮದಿ, ಸಂತಸ; ಸುಗ್ಗಿ: ಹಬ್ಬ, ಪರ್ವ, ಹೆಚ್ಚಳ; ಹೆಚ್ಚು: ಅಧಿಕ; ಬದುಕು: ಜೀವಿಸು; ನೆರೆ: ಸಮೀಪ, ಹತ್ತಿರ; ನೋಡು: ವೀಕ್ಷಿಸು; ಹಿಗ್ಗು: ಆನಂದ; ನಂದನ: ಮಕ್ಕಳು; ಘಾಸಿ: ಆಯಾಸ, ದಣಿವು; ಘಟ್ಟ: ಬೆಟ್ಟಗಳ ಸಾಲು; ಬೆಟ್ಟ: ಗಿರಿ; ಪೈಸರ: ಇಳಿಜಾರಾದ ಪ್ರದೇಶ; ಅಳಲು: ಕೊರಗು; ಮರುಗು: ತಳಮಳ, ಸಂಕಟ; ಸೂಸು: ಎರಚುವಿಕೆ, ಚಲ್ಲುವಿಕೆ; ಸಾಹಿತ್ಯ: ಸಂಬಂಧ, ಸೃಜನಾತ್ಮಕ ಬರವಣಿಗೆ; ಭಾಷೆ: ಮಾತು, ನುಡಿ;

ಪದವಿಂಗಡಣೆ:
ಈ+ ಸುಖದ +ಸುಗ್ಗಿಯಲಿ +ನಿನ್ನವರ್
ಏಸು +ಹೆಚ್ಚುಗೆಯಾಗಿ +ಬದುಕಿದರ್
ಐಸುವನು +ನೆರೆನೋಡಿ +ಹಿಗ್ಗದೆ +ಪಾಂಡು+ನಂದನರು
ಘಾಸಿಯಾದರು +ಘಟ್ಟ+ಬೆಟ್ಟದ
ಪೈಸರದಲೆಂದ್+ಅಳಲಿ +ಮರುಗುತ
ಸೂಸಿದೈ +ಸಾಹಿತ್ಯ +ಭಾಷೆಯನೆಂದನಾ +ಕರ್ಣ

ಅಚ್ಚರಿ:
(೧) ಧೃತರಾಷ್ಟ್ರನ ಕೊರಗನ್ನು ಅಲ್ಲಗಳೆಯುವ ಪರಿ – ಮರುಗುತ ಸೂಸಿದೈ ಸಾಹಿತ್ಯ ಭಾಷೆಯನೆಂದನಾ ಕರ್ಣ

ನಿಮ್ಮ ಟಿಪ್ಪಣಿ ಬರೆಯಿರಿ