ಪದ್ಯ ೯: ಧೃತರಾಷ್ಟ್ರನೇಕೆ ವ್ಯಥೆಪಟ್ಟನು?

ಖೇದವೇಕೆಂದೇನು ಮಕ್ಕಳು
ಬೀದಿಗರುವಾದರು ವನಾಂತದ
ಲಾದ ಚಿತ್ತವ್ಯಥೆಯ ಕೇಳಿದು ಬೆಂದುದೆನ್ನೊಡಲು
ಆ ದಿವಾಕರನಂತೆ ನಿಚ್ಚಲು
ಕಾದುದುದಯಾಸ್ತಂಗಳಲಿದನು
ಜಾದಿ ಖಳರೊಡನಟವಿಗೋಟಲೆಯೆಂದು ಬಿಸುಸುಯ್ದ (ಅರಣ್ಯ ಪರ್ವ, ೧೮ ಸಂಧಿ, ೯ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು ತನ್ನ ನೋವನ್ನು ಹೇಳುತ್ತಾ, ದುಃಖವೇಕೆಂದು ಕೇಳುವಿರಾ? ಮಕ್ಕಳು ಬೀದಿಯಲ್ಲಿ ಅಲೆಯುವ ಬಿಟ್ಟಿ ಕರುಗಳಂತೆ ಅನಾಥರಾದರು. ಕಾಡಿನಲ್ಲಿ ಅವರಿಗೊದಗಿದ ಸಂಕಟವನ್ನು ಕೇಳಿ ನನ್ನ ದೇಹ ಸಂಕಟಪಟ್ಟಿತು. ಉದಯ ಮತ್ತು ಮುಳುಗುವ ಪ್ರತಿದಿನವೂ ಮಂದೇಹರೊಡನೆ ಹೋರವ ಸೂರ್ಯನಂತೆ ಇವರು ಬೆಳಗಾದರೆ ಬೈಗಾದರೆ ರಾಕ್ಷಸರೊಡನೆ ಹೋರಾಡಬೇಕಾಗಿ ಬಂದಿದೆ ಎಂದು ನಿಟ್ಟುಸಿರಿಟ್ಟನು.

ಅರ್ಥ:
ಖೇದ: ದುಃಖ; ಮಕ್ಕಳು: ತನುಜ; ಬೀದಿ: ದಾರಿ; ಕರು: ಹಸುವಿನ ಮರಿ; ವನ: ಕಾಡು; ಅಂತ: ಅಂಚು, ಸಮೀಪ; ಚಿತ್ತ: ಮನಸ್ಸು; ವ್ಯಥೆ: ದುಃಖ; ಕೇಳು: ಆಲಿಸು; ಬೇಯು: ಸಂಕಟಕ್ಕೊಳಗಾಗು; ಒಡಲು: ದೇಹ; ದಿವಾಕರ: ಸೂರ್ಯ; ನಿಚ್ಚ: ನಿತ್ಯ; ಕಾದು: ಹೋರಾಡು; ಉದಯ: ಹುಟ್ಟು; ಅಸ್ತಂಗತ: ಮುಳುಗು; ಜಾದಿ: ಜಾಜಿಗಿಡ ಮತ್ತು ಅದರ ಹೂವು; ಖಳ: ದುಷ್ಟ; ಅಟವಿ: ಕಾದು; ಕೋಟಲೆ: ತೊಂದರೆ; ಬಿಸುಸುಯ್: ನಿಟ್ಟುಸಿರು;

ಪದವಿಂಗಡಣೆ:
ಖೇದವೇಕೆಂದೇನು+ ಮಕ್ಕಳು
ಬೀದಿ+ಕರುವಾದರು+ ವನಾಂತದ
ಲಾದ +ಚಿತ್ತ+ವ್ಯಥೆಯ +ಕೇಳಿದು +ಬೆಂದುದ್+ಎನ್ನೊಡಲು
ಆ +ದಿವಾಕರನಂತೆ +ನಿಚ್ಚಲು
ಕಾದುದ್+ಉದಯ+ಅಸ್ತಂಗಳಲ್+ಇದನು
ಜಾದಿ +ಖಳರೊಡನ್+ಅಟವಿ+ಕೋಟಲೆಯೆಂದು +ಬಿಸುಸುಯ್ದ

ಅಚ್ಚರಿ:
(೧) ಮಕ್ಕಳು ಅನಾಥರಾದರು ಎಂದು ಹೇಳುವ ಪರಿ – ಮಕ್ಕಳು ಬೀದಿಗರುವಾದರು
(೨) ಉಪಮಾನದ ಪ್ರಯೋಗ – ಆ ದಿವಾಕರನಂತೆ ನಿಚ್ಚಲು ಕಾದುದುದಯಾಸ್ತಂಗಳಲಿದನು
ಜಾದಿ ಖಳರೊಡನಟವಿಗೋಟಲೆ

ನಿಮ್ಮ ಟಿಪ್ಪಣಿ ಬರೆಯಿರಿ