ಪದ್ಯ ೧೩: ಧರ್ಮಜನ ಸ್ವಭಾವವನ್ನು ಶಕುನಿ ಹೇಗೆ ವಿವರಿಸಿದನು?

ಗಳಹನನಿಲಜ ಗಾಢಗರ್ವದ
ಹುಳುಕನರ್ಜುನನವರ ದೇಹದ
ನೆಳಲು ಮಾದ್ರೀಸುತರು ಮಕ್ಕಳು ವಿಪುಳ ಸಾಹಸರು
ಅಳಲಬಹುದರಸಂಗೆ ಘಳಿಗೆಗೆ
ತಿಳಿವನವದಿರ ಸಂಗದಲಿ ಮನ
ಮುಳಿವನೆರಡಿಟ್ಟಿಹನು ಧರ್ಮಜನೆಂದನಾ ಶಕುನಿ (ಅರಣ್ಯ ಪರ್ವ, ೧೮ ಸಂಧಿ, ೧೩ ಪದ್ಯ)

ತಾತ್ಪರ್ಯ:
ಭೀಮನು ಬಾಯ್ಬಡುಕ, ಅರ್ಜುನನು ಮಹಾಗರ್ವದ ನೀಚನು, ನಕುಲ ಸಹದೇವರು ಇವರಿಬ್ಬರ ನೆರಳಿದ್ದಮ್ತೆ, ಅವರ ಮಕ್ಕಳು ಮಹಾಸಾಹಸಿಗಳು, ನಿಮ್ಮ ನಿಮ್ಮ ಮಕ್ಕಳ ಬಗೆಗೆ ಧರ್ಮಜನಲ್ಲಿ ಅನುಕಂಪವಿದ್ದೀತು, ಆದರೆ ತಮ್ಮಂದಿರ ಮತ್ತು ಮಕ್ಕಳ ಜೊತೆ ಸೇರಿ ವಿರೋಧಿಯಾಗುತ್ತಾನೆ, ಧರ್ಮಜನು ದ್ವಂದ್ವ ಸ್ವಭಾವದವನು, ದ್ರೋಹಿ ಎಂದು ಶಕುನಿ ದೂರಿದನು.

ಅರ್ಥ:
ಗಳಹ: ಅತಿಯಾಗಿ ಮಾತಾಡುವುದು; ಅನಿಲಜ: ವಾಯುಪುತ್ರ; ಗಾಢ: ತುಂಬ; ಗರ್ವ: ಅಹಂಕಾರ; ಹುಳು: ಕ್ರಿಮಿ; ದೇಹ: ಕಾಯ; ನೆಳಲು: ನೆರಳು; ಸುತ: ಮಕ್ಕಳು; ಮಕ್ಕಳು: ಪುತ್ರರು; ವಿಪುಳ: ತುಂಬ; ಸಾಹಸ: ಪರಾಕ್ರಮಿ; ಅಳಲು: ದುಃಖ; ಅರಸ: ರಾಜ; ಘಳಿಗೆ: ಸಮಯ; ತಿಳಿ: ಗೊತ್ತುಪಡಿಸು; ಸಂಗ: ಜೊತೆ; ಮನ: ಮನಸ್ಸು; ಮುಳಿ: ಸಿಟ್ಟು, ಕೋಪ;

ಪದವಿಂಗಡಣೆ:
ಗಳಹನ್+ಅನಿಲಜ +ಗಾಢ+ಗರ್ವದ
ಹುಳುಕನ್+ಅರ್ಜುನನ್+ಅವರ +ದೇಹದ
ನೆಳಲು+ ಮಾದ್ರೀಸುತರು +ಮಕ್ಕಳು +ವಿಪುಳ +ಸಾಹಸರು
ಅಳಲಬಹುದ್+ಅರಸಂಗೆ +ಘಳಿಗೆಗೆ
ತಿಳಿವನ್+ಅವದಿರ +ಸಂಗದಲಿ +ಮನ
ಮುಳಿವನ್+ಎರಡಿಟ್ಟಿಹನು +ಧರ್ಮಜನೆಂದನಾ +ಶಕುನಿ

ಅಚ್ಚರಿ:
(೧) ಪಾಂಡವರನ್ನು ಬಯ್ಯುವ ಪರಿ – ಗಳಹನನಿಲಜ ಗಾಢಗರ್ವದಹುಳುಕನರ್ಜುನನವರ ದೇಹದ
ನೆಳಲು ಮಾದ್ರೀಸುತರು

ನಿಮ್ಮ ಟಿಪ್ಪಣಿ ಬರೆಯಿರಿ