ಅವರು ಕುಹಕೋಪಾಯದಲಿ ಕೌ
ರವರ ಕೆಡಿಸದೆ ಮಾಣರರ್ಜುನ
ಪವನಜರ ಭಾಷೆಗಳ ಮರೆದಿರೆ ಜೂಜು ಸಭೆಯೊಳಗೆ
ಅವರು ಸುಜನರು ನಿಮ್ಮವರು ಖಳ
ರವರು ಸದಮಲ ಸಾಧುಗಳು ಕೌ
ರವರಸಾಧುಗಳೆಂದು ತೋರಿತೆ ನಿಮ್ಮ ಚಿತ್ತದಲಿ (ಅರಣ್ಯ ಪರ್ವ, ೧೮ ಸಂಧಿ, ೧೨ ಪದ್ಯ)
ತಾತ್ಪರ್ಯ:
ಎಲೈ ರಾಜ, ಪಾಂಡವರು ಮೋಸದಿಂದ ಕೌರವರನ್ನು ಹಾಳು ಮಾಡದೆ ಬಿಡುವುದಿಲ್ಲ. ಜೂಜಿನ ಸಭೆಯಲ್ಲಿ ಅವರು ಮಾಡಿದ ಪ್ರತಿಜ್ಞೆಯನ್ನು ಮರೆತಿರಾ? ಅವರು ಸಜ್ಜನರು, ಸಾಧುಗಳು, ನಿಮ್ಮ ಮಕ್ಕಳು ದುಷ್ಟರು, ಅಸಾಧುಗಳೆಂದು ನಿಮ್ಮ ಮನಸ್ಸಿನಲ್ಲಿ ತೋರಿತೇ ಎಂದು ಶಕುನಿಯು ಧೃತರಾಷ್ಟ್ರನನ್ನು ಕೇಳಿದನು.
ಅರ್ಥ:
ಕುಹಕ: ಮೋಸ, ವಂಚನೆ; ಉಪಾಯ: ಯುಕ್ತಿ, ಹಂಚಿಕೆ; ಕೆಡಿಸು: ಹಾಳುಮಾಡು; ಮಾಣು: ನಿಲ್ಲು; ಪವನಜ: ಭೀಮ; ಭಾಷೆ: ಮಾತು, ನುಡಿ; ಮರೆ: ನೆನಪಿನಿಂದ ದೂರತಳ್ಳು; ಜೂಜು: ಜುಗಾರಿ, ಸಟ್ಟ; ಸಭೆ: ದರ್ಬಾರು; ಸುಜನ: ಒಳ್ಳೆಯ ಜನ; ಖಳ: ದುಷ್ಟ; ಅಮಲ: ನಿರ್ಮಲ; ಸಾಧು: ಒಳ್ಳೆಯ ಜನ; ಅಸಾಧು: ಕೆಟ್ಟಜನ; ತೋರು: ಗೋಚರಿಸು; ಚಿತ್ತ: ಮನಸ್ಸು;
ಪದವಿಂಗಡಣೆ:
ಅವರು +ಕುಹಕ+ಉಪಾಯದಲಿ +ಕೌ
ರವರ +ಕೆಡಿಸದೆ +ಮಾಣರ್+ಅರ್ಜುನ
ಪವನಜರ +ಭಾಷೆಗಳ +ಮರೆದಿರೆ+ ಜೂಜು +ಸಭೆಯೊಳಗೆ
ಅವರು +ಸುಜನರು +ನಿಮ್ಮವರು +ಖಳರ್
ಅವರು +ಸದಮಲ+ ಸಾಧುಗಳು+ ಕೌ
ರವರ್+ಅಸಾಧುಗಳೆಂದು +ತೋರಿತೆ +ನಿಮ್ಮ +ಚಿತ್ತದಲಿ
ಅಚ್ಚರಿ:
(೧) ಸಾಧು, ಅಸಾಧು; ಸುಜನ, ಖಳ – ವಿರುದ್ಧ ಪದಗಳು