ಪದ್ಯ ೧೧: ಪಾಂಡವರಿಗೆ ಅಳುವುದೇಕೆ ವ್ಯರ್ಥವೆಂದು ಶಕುನಿ ಹೇಳಿದನು?

ವಿಷಯಲಂಪಟರಕ್ಷಲೀಲಾ
ವ್ಯಸನಕೋಸುಗವೊತ್ತೆಯಿಟ್ಟರು
ವಸುಮತಿಯನನ್ಯಾಯವುಂಟೇ ನಿನ್ನ ಮಕ್ಕಳಲಿ
ಉಸುರಲಮ್ಮದೆ ಸತ್ಯವನು ಪಾ
ಲಿಸಲು ಹೊಕ್ಕರರಣ್ಯವನು ತ
ದ್ವ್ಯಸನ ಫಲಭೋಗಿಗಳಿಗಳಲುವಿರೇಕೆ ನೀವೆಂದ (ಅರಣ್ಯ ಪರ್ವ, ೧೮ ಸಂಧಿ, ೧೧ ಪದ್ಯ)

ತಾತ್ಪರ್ಯ:
ಶಕುನಿಯು ತನ್ನ ಮಾತನ್ನು ಮುಂದುವರೆಸುತ್ತಾ, ವಿಷಯ ಲಂಪಟತೆಯನ್ನು ಉಳಿಸಿ ಬೆಳೆಸಲು, ಭೂಮಿಯನ್ನೇ ಜೂಜಿನಲ್ಲಿ ಪಣವಾಗಿ ಒಡ್ಡಿದರು. ನಿನ್ನ ಮಕ್ಕಳು ಮಾಡಿದ ಅನ್ಯಾಯವೇನು? ಪಾಂಡವರು ಜೂಜಿನಲ್ಲಿ ಸೋತು ಸತ್ಯಪಾಲನೆಗಾಗಿ ಕಾಡಿಗೆ ಹೋದರು. ತಾವೇ ತಂದುಕೊಂಡ ಕಷ್ಟವನ್ನು ಅನುಭವಿಸುತ್ತಾರೆ, ಅವರಿಗಾಗಿ ನೀವೇಕೆ ದುಃಖ ಪಡುತ್ತೀರಿ ಎಂದು ಧೃತರಾಷ್ಟ್ರನಿಗೆ ಹೇಳಿದನು.

ಅರ್ಥ:
ವಿಷಯ: ಭೋಗಾಭಿಲಾಷೆ; ಲಂಪಟ: ವಿಷಯಾಸಕ್ತ, ಕಾಮುಕ; ಅಕ್ಷ: ಪಗಡೆ ಆಟದ ದಾಳ; ಲೀಲಾ: ಕ್ರೀಡೆ; ವ್ಯಸನ: ಚಟ; ಒತ್ತೆಯಿಡು: ಜೂಜಿನಲ್ಲಿ ಇಡತಕ್ಕ ಹಣ; ವಸುಮತಿ: ಭೂಮಿ; ಅನ್ಯಾವ: ಸರಿಯಿಲ್ಲದ; ಉಸುರು: ಹೇಳು, ಮಾತನಾಡು; ಸತ್ಯ: ದಿಟ; ಪಾಲಿಸು: ರಕ್ಷಿಸು, ಕಾಪಾಡು; ಹೊಕ್ಕು: ಸೇರು; ಅರಣ್ಯ: ಕಾದು; ಫಲ: ಪ್ರಯೋಜನ, ಫಲಿತಾಂಶ; ಭೋಗಿ: ವಿಷಯಾಸಕ್ತ ; ಅಳು: ಕೊರಗು;

ಪದವಿಂಗಡಣೆ:
ವಿಷಯ+ಲಂಪಟರ್+ಅಕ್ಷ+ಲೀಲಾ
ವ್ಯಸನಕ್+ಓಸುಗವ್+ಒತ್ತೆ+ಯಿಟ್ಟರು
ವಸುಮತಿಯನ್+ಅನ್ಯಾಯವುಂಟೇ+ ನಿನ್ನ+ ಮಕ್ಕಳಲಿ
ಉಸುರಲಮ್ಮದೆ +ಸತ್ಯವನು+ ಪಾ
ಲಿಸಲು +ಹೊಕ್ಕರ್+ಅರಣ್ಯವನು+ ತ
ದ್ವ್ಯಸನ +ಫಲಭೋಗಿಗಳಿಗ್+ಅಳಲುವಿರೇಕೆ+ ನೀವೆಂದ

ಅಚ್ಚರಿ:
(೧) ಪಾಂಡವರನ್ನು ಹಂಗಿಸುವ ಪರಿ – ವಿಷಯಲಂಪಟರಕ್ಷಲೀಲಾವ್ಯಸನಕೋಸುಗವೊತ್ತೆಯಿಟ್ಟರು
ವಸುಮತಿಯನ

ನಿಮ್ಮ ಟಿಪ್ಪಣಿ ಬರೆಯಿರಿ