ಪದ್ಯ ೫: ಬ್ರಾಹ್ಮಣನು ಧೃತರಾಷ್ಟ್ರಂಗೆ ಏನು ಹೇಳಿದನು?

ವಿವಿಧ ವನ ಪರಿಯಟಣದಾಯಾ
ಸವನು ತತ್ಪರಿಸರದ ಕಂಟಕ
ನಿವಹವನು ದಾನವರ ದಕ್ಕಡತನದ ದಟ್ಟಣೆಯ
ಅವಚಿದಾಪತ್ತಿನ ಮನಃ ಖೇ
ದವನು ಖೋಡಿಯ ಖತಿಯ ಲಜ್ಜಾ
ವಿವರಣವನರುಹಿದನು ಧೃತರಾಷ್ಟ್ರಾವನೀಶಂಗೆ (ಅರಣ್ಯ ಪರ್ವ, ೧೮ ಸಂಧಿ, ೫ ಪದ್ಯ)

ತಾತ್ಪರ್ಯ:
ಹಲವಾರು ಕಾಡುಗಳಲ್ಲಿ ತಿರುಗಾಡಿದ ಆಯಾಸ, ಅಲ್ಲಿ ಒದಗಿದ ತೊಂದರೆಗಳು, ರಾಕ್ಷಸರ ಪರಾಕ್ರಮ ಮತ್ತು ಅವರಿಂದೊದಗಿದ ಕಾಟ, ಆಪತ್ತು ಬಂದು ಅವಚಿದಾಗ ಉಂಟಾದ ದುಃಖ, ತಮಗೊದಗಿದ ದುಸ್ಥಿತಿಗೆ ಉಂಟಾದ ಕೋಪ, ಲಜ್ಜೆ, ಇವುಗಳಿಂದ ಪಾಂಡವರು ಬೆಂಡಾದುದನ್ನು ಬ್ರಾಹ್ಮಣನು ಧೃತರಾಷ್ಟ್ರಂಗೆ ಹೇಳಿದನು.

ಅರ್ಥ:
ವಿವಿಧ: ಹಲವಾರು; ವನ: ಕಾಡು; ಪರಿಯಟಣ: ತಿರುಗಾಡು; ಆಯಾಸ; ದಣಿವು; ಪರಿಸರ: ಆವರಣ, ಪ್ರದೇಶ; ಕಂಟಕ: ತೊಂದರೆ; ನಿವಹ: ಗುಂಪು; ದಾನವ: ರಾಕ್ಷಸ; ದಕ್ಕಡ: ಸಮರ್ಥ, ಬಲಶಾಲಿ; ದಟ್ಟಣೆ: ಸಾಂದ್ರತೆ; ಅವಚು: ಅಪ್ಪಿಕೊಳ್ಳು, ಆವರಿಸು; ಆಪತ್ತು: ತೊಂದರೆ; ಮನ: ಮನಸ್ಸು; ಖೇದ: ದುಃಖ; ಖೋಡಿ: ದುರುಳತನ; ಖತಿ: ಕೋಪ, ಅಳಲು; ಲಜ್ಜೆ: ನಾಚಿಕೆ; ವಿವರಣ: ವಿಸ್ತಾರ, ವಿಚಾರ; ಅರುಹು: ತಿಳಿಸು; ಅವನೀಶ: ರಾಜ;

ಪದವಿಂಗಡಣೆ:
ವಿವಿಧ+ ವನ +ಪರಿಯಟಣದ್+ಆಯಾ
ಸವನು +ತತ್ಪರಿಸರದ +ಕಂಟಕ
ನಿವಹವನು +ದಾನವರ +ದಕ್ಕಡತನದ +ದಟ್ಟಣೆಯ
ಅವಚಿದ್+ಆಪತ್ತಿನ +ಮನಃ +ಖೇ
ದವನು +ಖೋಡಿಯ +ಖತಿಯ +ಲಜ್ಜಾ
ವಿವರಣವನ್+ಅರುಹಿದನು +ಧೃತರಾಷ್ಟ್ರ+ಅವನೀಶಂಗೆ

ಅಚ್ಚರಿ:
(೧) ದ ಕಾರದ ತ್ರಿವಳಿ ಪದ – ದಾನವರ ದಕ್ಕಡತನದ ದಟ್ಟಣೆಯ
(೨) ಖ ಕಾರದ ತ್ರಿವಳಿ ಪದ – ಖೇದವನು ಖೋಡಿಯ ಖತಿಯ

ನಿಮ್ಮ ಟಿಪ್ಪಣಿ ಬರೆಯಿರಿ