ಮೈವಶವ ಮಾಡಿದಿರಲೇ ಪರ
ದೈವವನು ಕುರುಕುಲದ ಬೇರನು
ಕೊಯ್ವನೀ ಹರಿ ಬಳಿಸಲಿಸಿ ಭೀಮಾರ್ಜುನಾಸ್ತ್ರದಲಿ
ಕಾವನೈ ನಿಮ್ಮೈವರನು ಕೈ
ಗಾವನೈ ವರರಾಜ್ಯಲಕುಮಿಯ
ಕೈವಿಡಿವ ಸಂಕಲ್ಪ ಸಿದ್ಧಿಪುದೆಂದನಾ ಮುನಿಪ (ಅರಣ್ಯ ಪರ್ವ, ೧೭ ಸಂಧಿ, ೪೮ ಪದ್ಯ)
ತಾತ್ಪರ್ಯ:
ನೀವು ಪರದೈವವನ್ನು ಕೈವಶಪಡಿಸಿಕೊಂಡಿರುವಿರಿ, ಶ್ರೀಕೃಷ್ಣನು ಭೀಮಾರ್ಜುನರ ಅಸ್ತ್ರಗಳಿಂದ ಕುರುಕುಲದ ಬೇರನ್ನೇ ಕೊಯ್ಯುತ್ತಾನೆ. ನಿಮ್ಮನ್ನು ಕಾಪಾಡುತ್ತಾನೆ, ರಾಜ್ಯಲಕ್ಷ್ಮಿಯನ್ನು ಕೈಹಿಡಿಯುವ ನಿಮ್ಮ ಸಂಕಲ್ಪ ಸಿದ್ಧಿಸುತ್ತದೆ ಎಂದು ದೂರ್ವಾಸನು ಹೇಳಿದನು.
ಅರ್ಥ:
ಮೈವಶ: ಅಧೀನವಾಗು; ಪರದೈವ: ಭಗವಂತ; ಕುಲ: ವಂಶ; ಕೊಯ್: ಸಿಳು; ಹರಿ: ವಿಷ್ಣು; ಬಳಿ: ಹತ್ತಿರ; ಸಲಿಸು: ಪೂರೈಸು; ಅಸ್ತ್ರ: ಆಯುಧ; ಕಾವು: ರಕ್ಷಿಸು; ಕೈಗಾವು: ದೊರಕು; ವರ: ಶ್ರೇಷ್ಠ; ರಾಜ್ಯ: ದೇಶ; ಲಕುಮಿ: ಲಕ್ಷ್ಮಿ, ಐಶ್ವರ್ಯ; ಕೈವಿಡಿ: ದೊರಕು; ಸಂಕಲ್ಪ: ನಿರ್ಧಾರ, ನಿರ್ಣಯ; ಸಿದ್ಧಿಸು: ಈಡೇರು; ಮುನಿ: ಋಷಿ;
ಪದವಿಂಗಡಣೆ:
ಮೈವಶವ+ ಮಾಡಿದಿರಲೇ +ಪರ
ದೈವವನು +ಕುರುಕುಲದ+ ಬೇರನು
ಕೊಯ್ವನೀ +ಹರಿ+ ಬಳಿಸಲಿಸಿ+ ಭೀಮಾರ್ಜುನ+ಅಸ್ತ್ರದಲಿ
ಕಾವನೈ +ನಿಮ್ಮೈವರನು +ಕೈ
ಗಾವನೈ+ ವರರಾಜ್ಯ+ಲಕುಮಿಯ
ಕೈವಿಡಿವ +ಸಂಕಲ್ಪ +ಸಿದ್ಧಿಪುದೆಂದನಾ +ಮುನಿಪ
ಅಚ್ಚರಿ:
(೧) ಕೈಗಾವನೈ, ಕೈವಿಡಿ – ಪದಗಳ ಬಳಕೆ