ಪದ್ಯ ೪೮: ದೂರ್ವಾಸ ಮುನಿಗಳು ಪಾಂಡವರಿಗೆ ಏನು ಹೇಳಿದರು?

ಮೈವಶವ ಮಾಡಿದಿರಲೇ ಪರ
ದೈವವನು ಕುರುಕುಲದ ಬೇರನು
ಕೊಯ್ವನೀ ಹರಿ ಬಳಿಸಲಿಸಿ ಭೀಮಾರ್ಜುನಾಸ್ತ್ರದಲಿ
ಕಾವನೈ ನಿಮ್ಮೈವರನು ಕೈ
ಗಾವನೈ ವರರಾಜ್ಯಲಕುಮಿಯ
ಕೈವಿಡಿವ ಸಂಕಲ್ಪ ಸಿದ್ಧಿಪುದೆಂದನಾ ಮುನಿಪ (ಅರಣ್ಯ ಪರ್ವ, ೧೭ ಸಂಧಿ, ೪೮ ಪದ್ಯ)

ತಾತ್ಪರ್ಯ:
ನೀವು ಪರದೈವವನ್ನು ಕೈವಶಪಡಿಸಿಕೊಂಡಿರುವಿರಿ, ಶ್ರೀಕೃಷ್ಣನು ಭೀಮಾರ್ಜುನರ ಅಸ್ತ್ರಗಳಿಂದ ಕುರುಕುಲದ ಬೇರನ್ನೇ ಕೊಯ್ಯುತ್ತಾನೆ. ನಿಮ್ಮನ್ನು ಕಾಪಾಡುತ್ತಾನೆ, ರಾಜ್ಯಲಕ್ಷ್ಮಿಯನ್ನು ಕೈಹಿಡಿಯುವ ನಿಮ್ಮ ಸಂಕಲ್ಪ ಸಿದ್ಧಿಸುತ್ತದೆ ಎಂದು ದೂರ್ವಾಸನು ಹೇಳಿದನು.

ಅರ್ಥ:
ಮೈವಶ: ಅಧೀನವಾಗು; ಪರದೈವ: ಭಗವಂತ; ಕುಲ: ವಂಶ; ಕೊಯ್: ಸಿಳು; ಹರಿ: ವಿಷ್ಣು; ಬಳಿ: ಹತ್ತಿರ; ಸಲಿಸು: ಪೂರೈಸು; ಅಸ್ತ್ರ: ಆಯುಧ; ಕಾವು: ರಕ್ಷಿಸು; ಕೈಗಾವು: ದೊರಕು; ವರ: ಶ್ರೇಷ್ಠ; ರಾಜ್ಯ: ದೇಶ; ಲಕುಮಿ: ಲಕ್ಷ್ಮಿ, ಐಶ್ವರ್ಯ; ಕೈವಿಡಿ: ದೊರಕು; ಸಂಕಲ್ಪ: ನಿರ್ಧಾರ, ನಿರ್ಣಯ; ಸಿದ್ಧಿಸು: ಈಡೇರು; ಮುನಿ: ಋಷಿ;

ಪದವಿಂಗಡಣೆ:
ಮೈವಶವ+ ಮಾಡಿದಿರಲೇ +ಪರ
ದೈವವನು +ಕುರುಕುಲದ+ ಬೇರನು
ಕೊಯ್ವನೀ +ಹರಿ+ ಬಳಿಸಲಿಸಿ+ ಭೀಮಾರ್ಜುನ+ಅಸ್ತ್ರದಲಿ
ಕಾವನೈ +ನಿಮ್ಮೈವರನು +ಕೈ
ಗಾವನೈ+ ವರರಾಜ್ಯ+ಲಕುಮಿಯ
ಕೈವಿಡಿವ +ಸಂಕಲ್ಪ +ಸಿದ್ಧಿಪುದೆಂದನಾ +ಮುನಿಪ

ಅಚ್ಚರಿ:
(೧) ಕೈಗಾವನೈ, ಕೈವಿಡಿ – ಪದಗಳ ಬಳಕೆ

ನಿಮ್ಮ ಟಿಪ್ಪಣಿ ಬರೆಯಿರಿ