ಪದ್ಯ ೪೫: ದೂರ್ವಾಸ ಮುನಿಗಳು ಕೃಷ್ಣನನ್ನು ಕುಳಿತುಕೋಳ್ಳಲು ಏಕೆ ಹೇಳಿದರು?

ಯತಿಗಳೈತರೆ ಗಾರುಹಸ್ತ್ಯ
ವ್ರತಿಯು ವಂದಿಸಬೇಹುದಾ ಪ
ದ್ಧತಿ ತೋರುವ ಪಥವಿದೈ ಸಲೆ ನೀನು ವಂದಿಪುದು
ಅತಿ ಸಹಜವೈ ಕೃಷ್ಣ ಕುಳ್ಳಿರು
ಶ್ರುತಿ ಶಿರೋಮಣಿ ಕುಳ್ಳಿರೈ ವ್ಯಾ
ಹೃತ ಗೃಹಸ್ಥನು ಕುಳ್ಳಿರೆನುತವೆ ಮನಿಪ ಮಂಡಿಸಿದ (ಅರಣ್ಯ ಪರ್ವ, ೧೭ ಸಂಧಿ, ೪೫ ಪದ್ಯ)

ತಾತ್ಪರ್ಯ:
ದೂರ್ವಾಸ ಮುನಿಗಳು ಕೃಷ್ಣನು ನಮಸ್ಕರಿಸಿದುದನ್ನು ಕಂಡು, ಯತಿಗಳನ್ನು ಕಂಡೊಡನೆ, ಗೃಹಸ್ಥಾಶ್ರಮಿಯು ವಂದಿಸಬೇಕೆಂಬುದು ಪದ್ಧತಿ, ಅದನ್ನು ನೀನು ತೋರಿಸುತ್ತಿರುವೆ, ನಿನ್ನ ವರ್ತನೆ ಸಹಜವೇ? ಕೃಷ್ನ ನೀನು ಉಪನಿಷ್ತ್ಪ್ರತಿಪಾದ್ಯನಾದ ಪರಬ್ರಹ್ಮನೇ ಆಗಿರುವೆ, ನೀನು ಕುಳಿತುಕೋ, ಗೃಹಸ್ಥನೆಂದು ನತಿಸುವವನೇ ಕುಳಿತುಕೋ ಎಂದು ಶ್ರೀಕೃಷ್ಣನಿಗೆ ಹೇಳಿದರು.

ಅರ್ಥ:
ಯತಿ: ಮುನಿ; ಐತರು: ಬಂದು ಸೇರು; ಗಾರುಹಸ್ತ್ಯ: ಗೃಹಸ್ತ; ವ್ರತಿ: ವ್ರತವನ್ನು ಪಾಲಿಸುವವ; ವಂದಿಸು: ನಮಸ್ಕರಿಸು; ಪದ್ಧತಿ: ರೂಢಿ; ತೋರು: ಗೋಚರಿಸು; ಪಥ: ಮಾರ್ಗ; ಸಲೆ: ಸರಿಯಾಗಿ, ತಕ್ಕಂತೆ; ವಂದಿಸು: ನಮಸ್ಕರಿಸು; ಸಹಜ: ಸ್ವಾಭಾವಿಕವಾದುದು; ಕುಳ್ಳಿರು: ಕೂತುಕೋ; ಶ್ರುತಿ: ವೇದ; ಶಿರೋಮಣಿ: ತಿಲಕಪ್ರಾಯ; ವ್ಯಾಹೃತಿ: ಯಜ್ಞಸಮಯದಲ್ಲಿ ಉಚ್ಚರಿಸುವ, ಭೋ, ಬುವಃ ಸ್ವಃ ಇತ್ಯಾದಿ ಶಬ್ದಗಳು; ಗೃಹಸ್ತ: ಗೃಹಸ್ಥಾಶ್ರಮವನ್ನು ಪಾಲಿಸುವವ; ಮುನಿ: ಋಷಿ; ಮಂಡಿಸು: ಕುಳಿತುಕೊಳ್ಳು;

ಪದವಿಂಗಡಣೆ:
ಯತಿಗಳ್+ಐತರೆ +ಗಾರುಹಸ್ತ್ಯ
ವ್ರತಿಯು +ವಂದಿಸಬೇಹುದಾ +ಪ
ದ್ಧತಿ +ತೋರುವ +ಪಥವಿದೈ+ ಸಲೆ+ ನೀನು +ವಂದಿಪುದು
ಅತಿ+ ಸಹಜವೈ +ಕೃಷ್ಣ +ಕುಳ್ಳಿರು
ಶ್ರುತಿ+ ಶಿರೋಮಣಿ +ಕುಳ್ಳಿರೈ +ವ್ಯಾ
ಹೃತ +ಗೃಹಸ್ಥನು +ಕುಳ್ಳಿರ್+ಎನುತವೆ +ಮನಿಪ +ಮಂಡಿಸಿದ

ಅಚ್ಚರಿ:
(೧) ಕೃಷ್ಣನನ್ನು ಕುಳ್ಳಿರೆಂದು ಹೇಳುವ ಪರಿ – ಕೃಷ್ಣ ಕುಳ್ಳಿರು ಶ್ರುತಿ ಶಿರೋಮಣಿ ಕುಳ್ಳಿರೈ ವ್ಯಾ
ಹೃತ ಗೃಹಸ್ಥನು ಕುಳ್ಳಿರೆನುತ

ನಿಮ್ಮ ಟಿಪ್ಪಣಿ ಬರೆಯಿರಿ