ಧಾರುಣೀಪತಿ ಹೇಳಬಹುದು ಪ
ಚಾರವೇಕಿದು ರಾಜ್ಯಪದ ವಿ
ಸ್ತಾರವಾವುದು ರಾಜಋಷಿ ನಿನಗಾರು ಸರಿಯುಂಟು
ಸಾರೆಯಾಯ್ತ ಸಮಯವೆಮ್ಮ ಕ್ಷು
ಧಾರಪಣವ್ರಣ ವಿವಿಧ ಪೀಡಾ
ಕಾರಕೇನು ಚಿಕಿತ್ಸೆಯೆಂದನು ಮುನಿಪ ಭೂಪನಿಗೆ (ಅರಣ್ಯ ಪರ್ವ, ೧೭ ಸಂಧಿ, ೧೪ ಪದ್ಯ)
ತಾತ್ಪರ್ಯ:
ದೂರ್ವಾಸನು, ರಾಜ, ಈ ಉಪಚಾರದ ಮಾತೇಕೆ? ನಿನ್ನ ರಾಜ್ಯ ವಿಸ್ತಾರಕ್ಕೆ ಯಾವುದು ಸರಿ, ರಾಜರ್ಷಿಯಾದ ನಿನಗೆ ಯಾರು ಸರಿ? ಕಾಲ ಕಳೆಯುತ್ತಾ ಬಂತು, ನಮ್ಮ ಹಸಿವಿನ ಪೀಡೆಗೆ ನಿನ್ನಲ್ಲಿ ಚಿಕಿತ್ಸೆಯುಂಟೆ ಎಂದು ಕೇಳಿದನು.
ಅರ್ಥ:
ಧಾರುಣೀಪತಿ: ರಾಜ; ಪಚಾರ: ಮೂದಲಿಕೆ; ಪದ: ಪದವಿ; ವಿಸ್ತಾರ: ಹರಹು; ಋಷಿ: ಮುನಿ; ಸರಿಯುಂಟು: ಸಮಾನರಾದವರು; ಸಾರೆ: ಹತ್ತಿರ, ಸಮೀಪ; ಸಮಯ: ಕಾಲ; ಕ್ಷುಧೆ: ಹಸಿವು; ವಿವಿಧ: ಹಲವಾರು; ಪೀಡ: ತೊಂದರೆ; ಚಿಕಿತ್ಸೆ: ಪರಿಹಾರ, ಮದ್ದು; ಮುನಿಪ: ಋಷಿ; ಭೂಪ: ರಾಜ;
ಪದವಿಂಗಡಣೆ:
ಧಾರುಣೀಪತಿ+ ಹೇಳಬಹುದು +ಪ
ಚಾರವೇಕಿದು +ರಾಜ್ಯಪದ +ವಿ
ಸ್ತಾರವಾವುದು+ ರಾಜಋಷಿ +ನಿನಗಾರು +ಸರಿಯುಂಟು
ಸಾರೆಯಾಯ್ತ+ ಸಮಯವೆಮ್ಮ +ಕ್ಷು
ಧಾರಪಣವ್ರಣ+ ವಿವಿಧ+ ಪೀಡಾ
ಕಾರಕೇನು +ಚಿಕಿತ್ಸೆ+ಯೆಂದನು +ಮುನಿಪ +ಭೂಪನಿಗೆ
ಅಚ್ಚರಿ:
(೧) ಹಸಿವಾಗಿದೆ ಎಂದು ಹೇಳುವ ಪರಿ – ಸಾರೆಯಾಯ್ತ ಸಮಯವೆಮ್ಮ ಕ್ಷುಧಾರಪಣವ್ರಣ ವಿವಿಧ ಪೀಡಾಕಾರಕೇನು ಚಿಕಿತ್ಸೆ