ಪದ್ಯ ೨೪: ದ್ರೌಪದಿಯು ಕೃಷ್ಣನನ್ನು ಹೇಗೆ ಆರಾಧಿಸಿದಳು?

ಶ್ರೀ ರಮಾವರ ದೈತ್ಯಕುಲ ಸಂ
ಹಾರ ಹರಿ ಭವ ಜನನ ಮರಣಕು
ಠಾರ ನಿಗಮವಿದೂರ ಸಚರಾಚರ ಜಗನ್ನಾಥ
ಚಾರುಗುಣ ಗಂಭೀರ ಕರುಣಾ
ಕಾರ ವಿಹಿತ ವಿಚಾರ ಪಾರಾ
ವಾರ ಹರಿ ಮೈದೋರೆನುತ ಹಲುಬಿದಳು ಲಲಿತಾಂಗಿ (ಅರಣ್ಯ ಪರ್ವ, ೧೭ ಸಂಧಿ, ೨೪ ಪದ್ಯ)

ತಾತ್ಪರ್ಯ:
ಲಕ್ಷ್ಮೀ ದೇವಿಯ ಪತಿಯೇ, ರಾಕ್ಷಸ ಕುಲ ಸಂಹಾರಕನೇ, ಹುಟ್ತು ಸಾವಿನ ಚಕ್ರರೂಪವಾದ ಸಂಸಾರ ವೃಕ್ಷಕ್ಕೆ ಕೊಡಲಿಯಾದವನೇ, ವೇದಗಳಿಗೆ ನಿಲುಕದವನೇ, ಸಮಸ್ತ ಜೀವಿಸುವ ಮತ್ತು ನಿರ್ಜೀವ ವಸ್ತುಗಳ ಜಗತ್ತಿನ ಈಶ್ವರನೇ, ಕಲ್ಯಾಣ ಗುಣಗುಂಭೀರನೇ, ಕರುಣೆಯೇ ಮೂರ್ತಿಯಾದಂತಿರುವವನೇ, ಸಕ್ರಮ ವಿಚಾರದ ಎಲ್ಲೆಯಲ್ಲಿ ದೊರಕುವವನೇ, ಶ್ರೀಕೃಷ್ಣನು ಪ್ರತ್ಯಕ್ಷನಾಗು ಎಂದು ದ್ರೌಪದಿ ಬೇಡಿದಳು.

ಅರ್ಥ:
ರಮಾವರ: ಲಕ್ಷಿಯ ಪಿತ; ದೈತ್ಯ: ರಾಕ್ಷಸ; ಕುಲ: ವಂಶ; ಸಂಹಾರ: ನಾಶ; ಭವ: ಇರುವಿಕೆ, ಅಸ್ತಿತ್ವ; ಜನನ: ಹುಟ್ಟು; ಮರಣ: ಸಾವು; ಕುಠಾರ: ಕೊಡಲಿ; ನಿಗಮ: ಶೃತಿ, ವೇದ; ವಿದೂರ: ನಿಲುಕದವ; ಚರಾಚರ: ಜೀವವಿರುವ ಮತ್ತು ಇಲ್ಲದಿರುವ; ಜಗನ್ನಾಥ: ಜಗತ್ತಿನ ಒಡೆಯ; ಚಾರು: ಸುಂದರ; ಗುಣ: ಸ್ವಭಾವ; ಗಂಭೀರ: ಆಳವಾದ, ಗಹನವಾದ; ಕರುಣ: ದಯೆ; ವಿಹಿತ: ಯೋಗ್ಯ; ವಿಚಾರ: ವಿಷಯ, ಸಂಗತಿ; ಪಾರಾವಾರ: ಸಮುದ್ರ, ಕಡಲು, ಎಲ್ಲೆ; ಮೈದೋರು: ಕಾಣಿಸಿಕೋ, ಪ್ರತ್ಯಕ್ಷನಾಗು; ಹಲುಬು: ಬೇಡು; ಲಲಿತಾಂಗಿ: ಬಳ್ಳಿಯಂತೆ ದೇಹವುಳ್ಳವಳು, ಸುಂದರಿ (ದ್ರೌಪದಿ)

ಪದವಿಂಗಡಣೆ:
ಶ್ರೀ+ ರಮಾವರ +ದೈತ್ಯಕುಲ +ಸಂ
ಹಾರ +ಹರಿ +ಭವ +ಜನನ +ಮರಣ+ಕು
ಠಾರ +ನಿಗಮವಿದೂರ +ಸಚರಾಚರ +ಜಗನ್ನಾಥ
ಚಾರುಗುಣ+ ಗಂಭೀರ +ಕರುಣಾ
ಕಾರ +ವಿಹಿತ +ವಿಚಾರ +ಪಾರಾ
ವಾರ +ಹರಿ +ಮೈದೋರೆನುತ +ಹಲುಬಿದಳು +ಲಲಿತಾಂಗಿ

ಅಚ್ಚರಿ:
(೧) ಸಂಹಾರ, ಕುಠಾರ, ಪಾರಾವಾರ – ಪ್ರಾಸಪದ
(೨) ಕೃಷ್ಣನ ಗುಣಗಾನ – ದೈತ್ಯಕುಲ ಸಂಹಾರ, ನಿಗಮವಿದೂರ, ಚಾರುಗುಣ, ಗಂಭೀರ, ವಿಹಿತ ವಿಚಾರ, ಪಾರಾವಾರ

ಪದ್ಯ ೨೩: ದ್ರೌಪದಿಯು ಕೃಷ್ಣನನ್ನು ಹೇಗೆ ಭಜಿಸಿದಳು?

ಮುಗುದೆ ಮಿಗೆ ನಿಂದಿರ್ದು ಸಮಪದ
ಯುಗಳದಲಿ ಸೂರ್ಯನ ನಿರೀಕ್ಷಿಸಿ
ಮಗುಳೆವೆಯ ನೆರೆಮುಚ್ಚಿ ನಾಸಿಕದಗ್ರದಲಿ ನಿಲಿಸಿ
ನೆಗಹಿ ಪುಳಕಾಂಬುಗಳು ಮೈಯಲಿ
ಬಿಗಿದುವೊನಲಾಗಿರಲು ಹಿಮ್ಮಡಿ
ಗೊಗುವ ಕೇಶದ ಬಾಲೆ ಭಾವಿಸಿ ನೆನೆದಳುಚ್ಯುತನ (ಅರಣ್ಯ ಪರ್ವ, ೧೭ ಸಂಧಿ, ೨೩ ಪದ್ಯ)

ತಾತ್ಪರ್ಯ:
ದ್ರೌಪದಿಯು ಪಾದಗಳನ್ನು ಸಮವಾಗಿ ನಿಲ್ಲಿಸಿ, ಕಣ್ಣಿನ ರೆಪ್ಪೆಯನ್ನು ಸ್ವಲ್ಪ ಮುಚ್ಚಿ, ಸೂರ್ಯನನ್ನು ನೋಡಿ, ದೃಷ್ಟಿಯನ್ನು ಭ್ರೂಮಧ್ಯದಲ್ಲಿ ಕೇಂದ್ರೀಕರಿಸಿ, ರೋಮಾಂಚನದ ಜಲವು ಹರಿಯುತ್ತಿರಲು, ಹಿಮ್ಮಡಿಯನ್ನು ಮುಟ್ಟುವ ಕೇಷರಾಶಿಯ ಅಬಲೆಯು ಶ್ರೀಕೃಷ್ಣನನ್ನು ಸ್ಮರಿಸಿದಳು.

ಅರ್ಥ:
ಮುಗುದೆ: ಕಪಟವರಿಯದವಳು; ಮಿಗೆ: ಮತ್ತು, ಅಧಿಕವಾಗಿ; ನಿಂದಿರ್ದು: ನಿಲ್ಲು; ಸಮ: ಸಮನಾಗಿ; ಪದ: ಪಾದ, ಚರಣ; ಯುಗಳ: ಎರಡು; ಸೂರ್ಯ: ರವಿ; ನಿರೀಕ್ಷಿಸಿ: ನೋಡಿ; ಮಗುಳೆ: ಮತ್ತೆ, ಪುನಃ; ನೆರೆ: ಪಕ್ಕ, ಪಾರ್ಶ್ವ; ನಾಸಿಕ: ಮೂಗು; ನೆಗಹು: ಮೇಲೆತ್ತು; ಪುಳಕ: ರೋಮಾಂಚನ; ಅಂಬು: ನೀರು; ಮೈ: ತನು; ಬಿಗಿ: ಕಟ್ತು; ಹಿಮ್ಮಡಿ: ಹಿಂದಿನ ಪಾದ; ಒಗು: ಚೆಲ್ಲು, ಸುರಿ; ಕೇಶ: ಕೂದಲು; ಬಾಲೆ: ಅಬಲೆ, ಹೆಣ್ಣು; ಭಾವಿಸು: ತಿಳಿ, ಗೊತ್ತುಪಡಿಸಿಕೊಳ್ಳು; ಅಚ್ಯುತ: ಚ್ಯುತಿಯಿಲ್ಲದ (ಕೃಷ್ಣ);

ಪದವಿಂಗಡಣೆ:
ಮುಗುದೆ +ಮಿಗೆ +ನಿಂದಿರ್ದು +ಸಮಪದ
ಯುಗಳದಲಿ +ಸೂರ್ಯನ +ನಿರೀಕ್ಷಿಸಿ
ಮಗುಳೆವೆಯ +ನೆರೆಮುಚ್ಚಿ +ನಾಸಿಕದ್+ಅಗ್ರದಲಿ +ನಿಲಿಸಿ
ನೆಗಹಿ +ಪುಳಕಾಂಬುಗಳು+ ಮೈಯಲಿ
ಬಿಗಿದುವೊನಲಾಗಿರಲು +ಹಿಮ್ಮಡಿ
ಗೊಗುವ +ಕೇಶದ +ಬಾಲೆ +ಭಾವಿಸಿ+ ನೆನೆದಳ್+ಅಚ್ಯುತನ

ಅಚ್ಚರಿ:
(೧) ದ್ರೌಪದಿಯ ಕೇಶವನ್ನು ವಿವರಿಸುವ ಪರಿ – ಹಿಮ್ಮಡಿಗೊಗುವ ಕೇಶದ ಬಾಲೆ

ಪದ್ಯ ೨೨: ದ್ರೌಪದಿಯು ಯಾರನ್ನು ಭಜಿಸಿದಳು?

ಭೂಸುರರ ಕಳವಳವ ನೃಪನಾ
ಕ್ಲೇಶವನು ಪವಮಾನಸುತನಾ
ಕ್ರೋಶವನು ನರನಾಟವನು ಮಾದ್ರೇ ಯರುಪಟಳವ
ಆ ಸರೋಜಾನನೆ ನಿರೀಕ್ಷಿಸು
ತಾಸುರದ ದುಃಖದಲಿ ಮುನಿಯುಪ
ದೇಶ ಮಮ್ತ್ರದ ಬಲದಿ ಭಾವಿಸಿ ನೆನೆದಳಚ್ಯುತನ (ಅರಣ್ಯ ಪರ್ವ, ೧೭ ಸಂಧಿ, ೨೨ ಪದ್ಯ)

ತಾತ್ಪರ್ಯ:
ಪರಿವಾರದ ಬ್ರಾಹ್ಮಣರ ಕಳವಳ, ಧರ್ಮಜನ ಸಂಕಟ, ಭೀಮನ ಆಕ್ರೋಶ, ಅರ್ಜುನನ ಸೋಗು, ನಕುಲ ಸಹದೇವರ ಮನಸ್ಸಿನ ಕಿರುಕುಳ ಇವೆಲ್ಲವನ್ನೂ ಕಮಲಮುಖಿಯಾದ ದ್ರೌಪದಿಯು ಬೇಸರದಿಂದ ನೋಡಿ, ಧೌಮ್ಯರು ಉಪದೇಶಿಸಿದ ಮಂತ್ರವನ್ನು ಶ್ರೀಕೃಷ್ಣನ ಸ್ಮರಣೆ ಮಾಡುತ್ತಾ ಜಪಿಸಿದಳು.

ಅರ್ಥ:
ಭೂಸುರ: ಬ್ರಾಹ್ಮಣ; ಕಳವಳ: ಗೊಂದಲ; ನೃಪ: ರಾಜ; ಕ್ಲೇಶ: ದುಃಖ, ಸಂಕಟ; ಪವಮಾನ: ವಾಯು; ಸುತ: ಮಗ; ಆಕ್ರೋಶ: ಕೋಪ; ನರ:ಅರ್ಜುನ; ಉಪಟಳ: ಕಿರುಕುಳ; ಆಟ: ಸೋಗು; ಸರೋಜಾನನೆ: ಕಮಲದಂತ ಮುಖವುಳ್ಳ; ನಿರೀಕ್ಷೆ: ನೋಡುವುದು; ಆಸುರ: ಬೇಸರ; ದುಃಖ: ದುಗುಡ; ಮುನಿ: ಋಷಿ; ಉಪದೇಶ: ಬೋಧಿಸುವುದು; ಮಂತ್ರ: ವೇದದಲ್ಲಿರುವ ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಬಲ: ಶಕ್ತಿ; ಭಾವಿಸು: ಧ್ಯಾನಿಸು; ನೆನೆ: ಜ್ಞಾಪಿಸಿಕೊ; ಅಚ್ಯುತ: ನ್ಯೂನ್ಯತೆಯಿಲ್ಲದವ, ಕೃಷ್ಣ;

ಪದವಿಂಗಡಣೆ:
ಭೂಸುರರ +ಕಳವಳವ +ನೃಪನಾ
ಕ್ಲೇಶವನು +ಪವಮಾನ+ಸುತನ
ಆಕ್ರೋಶವನು +ನರನ+ಆಟವನು +ಮಾದ್ರೇಯರ್+ ಉಪಟಳವ
ಆ +ಸರೋಜಾನನೆ +ನಿರೀಕ್ಷಿಸುತ
ಆಸುರದ +ದುಃಖದಲಿ+ ಮುನಿ+ಉಪ
ದೇಶ +ಮಂತ್ರದ+ ಬಲದಿ +ಭಾವಿಸಿ +ನೆನೆದಳ್+ಅಚ್ಯುತನ

ಅಚ್ಚರಿ:
(೧) ಕಳವಳ, ಕ್ಲೇಶ, ಆಟ, ಆಕ್ರೋಶ, ಉಪಟಳಾ, ಆಸುರ – ಕಳವಳವನ್ನು ವಿವರಿಸುವ ಪದಗಳು

ಪದ್ಯ ೨೧: ಧೌಮ್ಯರು ಯಾವ ಸಲಹೆಯನ್ನು ನೀಡಿದರು?

ನಾಮವನು ನೆರೆನಂಬಿ ಮತ್ತಾ
ನಾಮವನು ನೆನೆದವರು ಪಡೆವರು
ಕಾಮಿತಾರ್ಥವ ನಿಮ್ಮ ನೆಲೆ ನಿಮಗರಿಯಬಾರದಲೆ
ನಾಮ ನಿಮ್ಮಲಿ ಕೃಪೆ ವಿಶೇಷವು
ಕಾಮಿನಿಗೆ ಕರಗುವನು ಕೃಷ್ಣನು
ಯೀ ಮಹಿಳೆ ಭಜಿಸುವುದು ಬೇಗದಲೆಂದನಾ ಧೌಮ್ಯ (ಅರಣ್ಯ ಪರ್ವ, ೧೭ ಸಂಧಿ, ೨೧ ಪದ್ಯ)

ತಾತ್ಪರ್ಯ:
ಭಗವಂತನ ನಾಮವನ್ನು ನಂಬಿ ಅದನ್ನೇ ನೆನೆದವರು ಬಯಸಿದುದನ್ನು ಪಡೆಯುತ್ತಾರೆ. ನಿಮ್ಮ ಶಕ್ತಿ, ನಿಮಗೇ ಗೊತ್ತಿಲ್ಲ. ನಿಮ್ಮ ಮೇಲೆ ಭಗವನ್ನಾಮದ ವಿಶೇಷ ಕೃಪೆಯಿದೆ. ದ್ರೌಪದಿಯ ಮೊರೆಗೆ ಶ್ರೀಕೃಷ್ಣನು ಕರಗಿ ಬಿಡುತ್ತಾನೆ. ಈ ಮಹಿಳೆಯೇ ಶ್ರೀಕೃಷ್ಣನನ್ನು ಬೇಗ ಭಜಿಸಲಿ ಎಂದು ಧೌಮ್ಯರು ಹೇಳಿದರು.

ಅರ್ಥ:
ನಾಮ: ಹೆಸರು; ನೆರೆ: ಜೊತೆಗೂಡು, ಪೂರ್ಣ; ನಂಬು: ವಿಶ್ವಾಸವಿಡು; ನೆನೆ: ಜ್ಞಾಪಿಸು; ಪಡೆ: ಹೊಂದು, ತಾಳು; ಕಾಮಿತಾರ್ಥ: ಇಚ್ಛಿಸಿದ; ನೆಲೆ: ಆಶ್ರಯ, ಆಧಾರ; ಅರಿ: ತಿಳಿ; ಕೃಪೆ: ಕರುಣೆ; ವಿಶೇಷ: ಅತಿಶಯತೆ; ಕಾಮಿನಿ: ಹೆಣ್ಣು; ಕರಗು: ಕನಿಕರ ಪಡು; ಮಹಿಳೆ: ಹೆಣ್ಣು; ಭಜಿಸು: ಪೂಜಿಸು; ಬೇಗ: ಶೀಘ್ರ;

ಪದವಿಂಗಡಣೆ:
ನಾಮವನು+ ನೆರೆನಂಬಿ +ಮತ್ತ್+ಆ
ನಾಮವನು +ನೆನೆದವರು +ಪಡೆವರು
ಕಾಮಿತಾರ್ಥವ +ನಿಮ್ಮ +ನೆಲೆ +ನಿಮಗ್+ಅರಿಯ+ಬಾರದಲೆ
ನಾಮ +ನಿಮ್ಮಲಿ +ಕೃಪೆ +ವಿಶೇಷವು
ಕಾಮಿನಿಗೆ +ಕರಗುವನು +ಕೃಷ್ಣನು
ಯೀ +ಮಹಿಳೆ+ ಭಜಿಸುವುದು +ಬೇಗದಲೆಂದನಾ+ ಧೌಮ್ಯ

ಅಚ್ಚರಿ:
(೧) ಕ ಕಾರದ ತ್ರಿವಳಿ ಪದ – ಕಾಮಿನಿಗೆ ಕರಗುವನು ಕೃಷ್ಣನು
(೨) ದ್ರೌಪದಿಯನ್ನು ಕರೆದ ಪರಿ – ಕಾಮಿನಿ, ಮಹಿಳೆ

ಪದ್ಯ ೨೦: ಧೌಮ್ಯರು ಪುನಃ ಯಾರನ್ನು ಭಜಿಸಲು ಹೇಳಿದರು?

ಕ್ಷತ್ರ ತೇಜದ ತೀವ್ರಪಾತ ನಿ
ಮಿತ್ತ ನಿಮಗಂಜನು ಸುರೇಶ್ವರ
ಸತ್ಯಕೆಡುವೊಡೆ ಸಾರೆಯಿದೆಲಾ ಕೌರವನ ನಗರ
ಸತ್ಯಮಾರಿಯ ಸುರಭಿಗಳುಪಿದ
ಕಾರ್ತವೀರ್ಯಾರ್ಜುನನ ಕಥೆಯನು
ಮತ್ತೆ ಹೇಳುವೆ ಭಜಿಸು ಕೃಷ್ಣನನೆಂದನಾ ಧೌಮ್ಯ (ಅರಣ್ಯ ಪರ್ವ, ೧೭ ಸಂಧಿ, ೨೦ ಪದ್ಯ)

ತಾತ್ಪರ್ಯ:
ಇಂದ್ರನು ನಿಮ್ಮ ಕ್ಷಾತ್ರ ತೇಜಸ್ಸಿಗೆ ಹೆದರುವವನಲ್ಲ. ಸತ್ಯವನ್ನು ಮೀರಬೇಕೆಂದರೆ ಹತ್ತಿರದಲ್ಲೇ ಕೌರವನ ರಾಜಧಾನಿಯಿದೆ ಅಲ್ಲಿಗೇ ನೀನು ನುಗ್ಗಬಹುದು, ಕಾಮಧೇನುವನ್ನು ಪಡೆಯಲೆಳಸಿದ ಸತ್ಯಹೀನನಾದ ಕಾರ್ತಿವೀರ್ಯಾರ್ಜುನನ ಕಥೆಯನ್ನು ಆಮೇಲೆ ಹೇಳುತ್ತೇನೆ. ಈಗ ಶ್ರೀಕೃಷ್ಣನನ್ನು ಭಜಿಸಿರಿ ಎಂದು ಧೌಮ್ಯನು ಬುದ್ಧಿವಾದವನ್ನು ಹೇಳಿದನು.

ಅರ್ಥ:
ಕ್ಷತ್ರ: ಕ್ಷತ್ರಿಯ; ತೇಜ: ತೇಜಸ್ಸು; ತೀವ್ರ: ಬಹಳ; ಪಾತ: ಪತನ; ನಿಮಿತ್ತ: ನೆಪ, ಕಾರಣ; ಅಂಜು: ಹೆದರು; ಸುರೇಶ್ವರ: ಇಂದ್ರ; ಸತ್ಯ: ದಿಟ, ನಿಜ; ಎಡುವು: ಬೀಳು; ಸಾರೆ: ಪ್ರಕಟಿಸು; ನಗರ: ಊರು; ಸತ್ಯ: ನಿಜ; ಮಾರಿ: ಕೇಡು, ಹಾನಿ; ಸುರಭಿ: ಕಾಮಧೇನುವಿನ ಮಗಳು; ಅಳುಪು: ಭಂಗತರು, ಬಯಸು; ಕಥೆ: ವಿವರಣೆ; ಮತ್ತೆ: ಆಮೇಲೆ; ಹೇಳು: ತಿಳಿಸು; ಭಜಿಸು: ಪ್ರಾರ್ಥಿಸು;

ಪದವಿಂಗಡಣೆ:
ಕ್ಷತ್ರ +ತೇಜದ +ತೀವ್ರ+ಪಾತ +ನಿ
ಮಿತ್ತ +ನಿಮಗ್+ಅಂಜನು +ಸುರೇಶ್ವರ
ಸತ್ಯಕ್+ಎಡುವೊಡೆ +ಸಾರೆಯಿದೆಲಾ+ ಕೌರವನ+ ನಗರ
ಸತ್ಯಮಾರಿಯ +ಸುರಭಿಗ್+ಅಳುಪಿದ
ಕಾರ್ತವೀರ್ಯಾರ್ಜುನನ+ ಕಥೆಯನು
ಮತ್ತೆ+ ಹೇಳುವೆ +ಭಜಿಸು +ಕೃಷ್ಣನನ್+ಎಂದನಾ +ಧೌಮ್ಯ

ಅಚ್ಚರಿ:
(೧) ಸತ್ಯಹೀನ ಎಂದು ಹೇಳಲು – ಸತ್ಯಮಾರಿ ಪದದ ಬಳಕೆ

ಪದ್ಯ ೧೯: ಧೌಮ್ಯರು ಯಾವ ಸಲಹೆಯನ್ನು ನೀಡಿದರು?

ಬರಿನುಡಿಗಳೇಕಕಟ ನಿಮ್ಮಯ
ಹೊರಿಗೆಕಾರನು ಕೃಷ್ಣನಾತನ
ಮರೆಯ ಹೊಕ್ಕರಿಗುಂಟೆ ದುಃಖ ದರಿದ್ರ ಕಷ್ಟಭಯ
ಅರಿಯಿರೇ ಸೆಳೆ ಸೀರೆಯಲಿ ಸತಿ
ಯೊರಲಲಕ್ಷಯವಿತ್ತು ತನ್ನನು
ಮೆರೆದ ಮಹಿಮಾರ್ಣವನ ಭಜಿಸುವುದೆಂದನಾ ಧೌಮ್ಯ (ಅರಣ್ಯ ಪರ್ವ, ೧೭ ಸಂಧಿ, ೧೯ ಪದ್ಯ)

ತಾತ್ಪರ್ಯ:
ಕೇವಲ ಮಾತುಗಳಿಂದ ಏನು ಪ್ರಯೋಜನವಿಲ್ಲ, ಕೃಷ್ಣನೇ ನಿಮ್ಮ ಆಗುಹೋಗುಗಳನ್ನು ಹೊತ್ತಿದ್ದಾನೆ. ಅವನ ಆಶ್ರಯ ಹೊಕ್ಕವರಿಗೆ ದುಃಖ ದಾರಿದ್ರ್ಯ, ಕಷ್ಟ ಭಯಗಳಿಲ್ಲ. ಹಿಂದೆ ವಸ್ತ್ರಾಪಹರಣದ ಕಾಲದಲ್ಲಿ ದ್ರೌಪದಿಯು ಮೊರೆಯಿಡಲು ಅಕ್ಷಯ ವಸ್ತ್ರವನ್ನು ಕೊಟ್ಟು ಕಾಪಾಡಿದ ಮ್ಹೈಮಾಸಮುದ್ರನನ್ನು ಭಜಿಸಿರಿ ಎಂದು ಧೌಮ್ಯರು ಸಲಹೆ ನೀಡಿದರು.

ಅರ್ಥ:
ಬರಿ: ಕೇವಲ; ನುಡಿ: ಮಾತು; ಅಕಟ: ಅಯ್ಯೋ; ಹೊರೆ: ಭಾರ; ಮರೆ: ಆಸರೆ, ಆಶ್ರಯ; ಹೊಕ್ಕು: ಸೇರು; ದುಃಖ: ದುಗುಡ; ದರಿದ್ರ: ಬಡವ, ಧನಹೀನ; ಕಷ್ಟ: ಕಠಿಣ; ಭಯ: ಅಂಜಿಕೆ; ಅರಿ: ತಿಳಿ; ಒರಲು: ಅರಚು, ಕೂಗಿಕೊಳ್ಳು; ಸೆಳೆ: ಜಗ್ಗು, ಎಳೆ; ಸೀರೆ: ವಸ್ತ್ರ; ಸತಿ: ಹೆಣ್ಣು, ಹೆಂಡತಿ; ಅಕ್ಷಯ: ನಾಶವಾಗದಿರುವ; ಮೆರೆ: ಹೊಳೆ, ಪ್ರಕಾಶಿಸು; ಮಹಿಮಾರ್ಣವ: ಮಹಾಮಹಿಮ, ಶ್ರೇಷ್ಠ; ಭಜಿಸು: ಆರಾಧಿಸು;

ಪದವಿಂಗಡಣೆ:
ಬರಿನುಡಿಗಳ್+ಏಕ್+ಅಕಟ +ನಿಮ್ಮಯ
ಹೊರಿಗೆಕಾರನು+ ಕೃಷ್ಣನ್+ಆತನ
ಮರೆಯ +ಹೊಕ್ಕರಿಗುಂಟೆ +ದುಃಖ +ದರಿದ್ರ +ಕಷ್ಟ+ಭಯ
ಅರಿಯಿರೇ +ಸೆಳೆ +ಸೀರೆಯಲಿ +ಸತಿ
ಒರಲಲ್+ಅಕ್ಷಯವಿತ್ತು +ತನ್ನನು
ಮೆರೆದ+ ಮಹಿಮಾರ್ಣವನ +ಭಜಿಸುವುದ್+ಎಂದನಾ +ಧೌಮ್ಯ

ಅಚ್ಚರಿ:
(೧) ಮರೆ, ಮೆರೆ – ಪದಗಳ ಬಳಕೆ
(೨) ಕೃಷ್ಣನ ಹಿರಿಮೆ – ಆತನ ಮರೆಯ ಹೊಕ್ಕರಿಗುಂಟೆ ದುಃಖ ದರಿದ್ರ ಕಷ್ಟಭಯ

ಪದ್ಯ ೧೮: ಭೀಮನು ಧರ್ಮಜನಿಗೆ ಏನು ಹೇಳಿದ?

ಏನಿದೇನೆಲೆ ನೃಪತಿ ಚಿತ್ತ
ಗ್ಲಾನಿಯನು ಬಿಡು ನಿನ್ನ ವಚನಕೆ
ಹಾನಿಯೇಕೈ ಸುಡುವೆನೀಗಳೆ ಸುರಪತಿಯ ಪುರವ
ತಾನೆ ಪದವಿಡಿದೆಳೆದು ತಹೆ ಸುರ
ಧೇನುವನು ನಿಮ್ಮಡಿಗೆನುತ್ತ ಕೃ
ಶಾನುಸಖಸುತ ಗದೆಯ ಕೊಂಡನು ಬೇಗ ಬೆಸಸೆನುತ (ಅರಣ್ಯ ಪರ್ವ, ೧೭ ಸಂಧಿ, ೧೮ ಪದ್ಯ)

ತಾತ್ಪರ್ಯ:
ಧರ್ಮಜನ ಮನಸ್ಸಿನ ತಳಮಳವನ್ನರಿತ ಭೀಮನು, ಇದೇನು ಮನಸ್ಸಿನ ಚಿಂತೆಯನ್ನು ಬಿಡು. ನಿನ್ನ ಮಾತು ಹೇಗೆ ಸುಳ್ಳಾಗಲು ಸಾಧ್ಯ? ನಾನು ಈಗಲೇ ಹೋಗಿ ಅಮರಾವತಿಯನ್ನು ಧ್ವಂಸ ಮಾಡಿ, ಕಾಮಧೇನುವನ್ನು ಕಾಲು ಹಿಡಿದು ನಿನ್ನ ಬಳಿಗೆ ಎಳೆ ತರುತ್ತೇನೆ ಎಂದು ಗದೆಯನ್ನು ಹಿಡಿದು ಅಪ್ಪಣೆಯನ್ನು ನೀಡು ಎಂದು ಹೇಳಿದನು.

ಅರ್ಥ:
ನೃಪತಿ: ರಾಜ; ಚಿತ್ತ: ಮನಸ್ಸು; ಗ್ಲಾನಿ: ಬಳಲಿಕೆ, ದಣಿವು; ಬಿಡು: ತೊರೆ; ವಚನ: ಮಾತು; ಹಾನಿ: ಹಾಳು; ಸುಡು: ದಹಿಸು; ಸುರಪತಿ: ಇಂದ್ರ; ಪುರ: ಊರು; ಪದ:ಕಾಲು; ಎಳೆ: ಸೆಳೆ; ತಹ: ತರುವ; ಸುರಧೇನು: ಕಾಮಧೇನು; ಕೃಶಾನು: ಅಗ್ನಿ, ಬೆಂಕಿ; ಸಖ: ಮಿತ್ರ; ಸುತ: ಮಗ; ಗದೆ: ಮುದ್ಗರ; ಬೆಸ: ಕೆಲಸ, ಕಾರ್ಯ;

ಪದವಿಂಗಡಣೆ:
ಏನಿದೇನ್+ಎಲೆ+ ನೃಪತಿ+ ಚಿತ್ತ
ಗ್ಲಾನಿಯನು +ಬಿಡು +ನಿನ್ನ +ವಚನಕೆ
ಹಾನಿಯೇಕೈ+ ಸುಡುವೆನ್+ಈಗಳೆ +ಸುರಪತಿಯ +ಪುರವ
ತಾನೆ +ಪದವಿಡಿದ್+ಎಳೆದು +ತಹೆ +ಸುರ
ಧೇನುವನು +ನಿಮ್ಮಡಿಗ್+ಎನುತ್ತ +ಕೃ
ಶಾನುಸಖ+ಸುತ+ ಗದೆಯ +ಕೊಂಡನು +ಬೇಗ +ಬೆಸಸೆನುತ

ಅಚ್ಚರಿ:
(೧) ಭೀಮನನ್ನು ಕೃಶಾನುಸಖಸುತ, ಅಗ್ನಿಯ ಮಿತ್ರನ ಮಗ (ವಾಯು ಪುತ್ರ) ಎಂದು ಕರೆದಿರುವುದು
(೨) ಸುರಧೇನು, ಸುರಪತಿ – ಪದಗಳ ಬಳಕೆ

ಪದ್ಯ ೧೭: ಧರ್ಮಜನು ಯಾವುದಕ್ಕೆ ಅಂಜಿದನು?

ತುಡುಕಿ ಸುರಪನ ಸಿರಿಯ ಶರಧಿಯ
ಮಡುವಿನಲಿ ಹಾಯ್ಕಿದನು ರೋಷವ
ಹಿಡಿದೊಡೀಗಲೆ ಸುಟ್ಟು ಬೊಟ್ಟಿಡುವನು ಜಗತ್ರಯವ
ಮೃಡಮುನೀಶನು ತನಗೆ ಶಾಪವ
ಕೊಡಲಿ ತಾನದಕಂಜೆ ತನ್ನಯ
ನುಡಿಗನೃತ ಸಂದಪ್ಪವಾದರೆ ಕೆಟ್ಟೆ ತಾನೆಂದ (ಅರಣ್ಯ ಪರ್ವ, ೧೭ ಸಂಧಿ, ೧೭ ಪದ್ಯ)

ತಾತ್ಪರ್ಯ:
ದೂರ್ವಾಸ ಮುನಿಗಳು ಹಿಂದೆ ಕೋಪದಿಂದ ದೇವೇಂದ್ರನ ಐಶ್ವರ್ಯವನ್ನು ಸಾಗರದ ಮಡುವಿನಲ್ಲಿ ಮುಳುಗಿಸಿದನು. ಈಗಲೂ ಕೋಪಗೊಂಡರೆ ಮೂರು ಲೋಕಗಳನ್ನು ಸುಟ್ಟು ಭಸ್ಮವನ್ನು ಹಣೆಗೆ ಧಾರಣೆ ಮಾಡಬಲ್ಲ. ಶಿವನ ಅವತಾರವಾದ ಈ ದೂರ್ವಾಸ ಮುನಿಗಳು ನನಗೆ ಶಾಪವನ್ನು ಕೊಟ್ಟರೆ ನನಗೆ ಹೆದರಿಕೆಯಿಲ್ಲ, ಆದರೆ ನನ್ನ ಮಾತು ಸುಳ್ಳಾದರೆ ನಾನು ಕೆಟ್ಟೆ ಎಂದು ಧರ್ಮಜನು ಹೇಳಿದನು.

ಅರ್ಥ:
ತುಡುಕು: ಆತುರದಿಂದ ಹಿಡಿ; ಸುರಪ: ಇಂದ್ರ; ಸಿರಿ: ಐಶ್ವರ್ಯ; ಶರಧಿ: ಸಾಗರ; ಮಡು: ನದಿ, ಹೊಳೆ; ಹಾಯ್ಕು: ಸೇರಿಸಿಕೊಳ್ಳು; ರೋಷ: ಕೋಪ; ಹಿಡಿ: ಗ್ರಹಿಸು; ಸುಟ್ಟು: ದಹಿಸು; ಬೊಟ್ಟಿಡು: ಹಣೆಗೆ ಬಳೆದುಕೋ; ಜಗತ್ರಯ: ಮೂರು ಲೋಕ; ಮೃಡ: ಶಿವ; ಮುನಿ: ಋಷಿ; ಈಶ: ಒಡೆಯ; ಶಾಪ: ಕೆಡುಕಾಗಲೆಂದು ಬಯಸಿ ಹೇಳುವ ಮಾತು; ಕೊಡಲಿ: ಪರಶು;ಅಂಜು: ಹೆದರು; ನುಡಿ: ಮಾತು; ಅನೃತ: ಸುಳ್ಳು; ಸಂದು: ಬಿರುಕು; ಕೆಟ್ಟೆ: ಕೆಡುಕು, ಹಾಳು;

ಪದವಿಂಗಡಣೆ:
ತುಡುಕಿ +ಸುರಪನ+ ಸಿರಿಯ +ಶರಧಿಯ
ಮಡುವಿನಲಿ +ಹಾಯ್ಕಿದನು +ರೋಷವ
ಹಿಡಿದೊಡ್+ಈಗಲೆ +ಸುಟ್ಟು +ಬೊಟ್ಟಿಡುವನು +ಜಗತ್ರಯವ
ಮೃಡ+ಮುನೀಶನು +ತನಗೆ+ ಶಾಪವ
ಕೊಡಲಿ +ತಾನದಕ್+ಅಂಜೆ+ ತನ್ನಯ
ನುಡಿಗ್+ಅನೃತ+ ಸಂದಪ್ಪವಾದರೆ+ ಕೆಟ್ಟೆ +ತಾನೆಂದ

ಅಚ್ಚರಿ:
(೧) ದೂರ್ವಾಸನ ಪ್ರತಾಪ – ತುಡುಕಿ ಸುರಪನ ಸಿರಿಯ ಶರಧಿಯ ಮಡುವಿನಲಿ ಹಾಯ್ಕಿದನು

ಪದ್ಯ ೧೬: ಧರ್ಮಜನೇಕೆ ಮಾತಾಡಲು ತಡವಡಿಸಿದನು?

ಅರಸಿಯಾರೋಗಿಸಿದ ಹದನನು
ಬರವಿನಲಿ ನೃಪ ತಿಳಿಯಲಂತಃ
ಕರಣ ಕಳವಳಗೊಳಲು ಸುರಿದುದು ನಯನ ಜಲಧಾರೆ
ಉರಿಹೊಡೆದ ಕೆಂದಾವರೆಯ ವೊಲ್
ಕರುಕುವರಿಯಲು ಮುಖ ಕಪಾಲದಿ
ಕರವನಿಟ್ಟು ಮಹೀಶ ತೊನಹುತ ನುಡಿದನಿಂತೆಂದು (ಅರಣ್ಯ ಪರ್ವ, ೧೭ ಸಂಧಿ, ೧೬ ಪದ್ಯ)

ತಾತ್ಪರ್ಯ:
ದ್ರೌಪದಿಯ ಆಗಮನವನ್ನು ನೋಡಿ ಧರ್ಮಜನು ಅವಳ ಊಟವಾಗಿದೆಯೆಂದು ತಿಳಿದನು. ಅವನ ಮನಸ್ಸು ಕಳವಳಗೊಂಡು ಕಣ್ಣೀರಿನ ಧಾರೆ ಹರಿಯಿತು. ಉರಿಹೊಡೆದ ಕೆಂದಾವರೆಯಂತೆ ಅವನ ಮುಖ ಕಪ್ಪಾಯಿತು. ಅವನು ಕೈಯನ್ನು ಕೆನ್ನೆಯಮೇಲಿಟ್ಟು ತೊದಲುತ್ತಾ ದ್ರೌಪದಿಗೆ ಹೀಗೆ ನುಡಿದನು.

ಅರ್ಥ:
ಅರಸಿ: ರಾಣಿ; ಆರೋಗಿಸು: ಸೇವಿಸು; ಹದ: ಸ್ಥಿತಿ; ಬರುವು: ಆಗಮನ; ನೃಪ: ರಾಜ; ತಿಳಿ: ಅರ್ಥೈಸು; ಅಂತಃಕರಣ: ಮನಸ್ಸು; ಕಳವಳ: ಗೊಂದಲ; ಸುರಿದು: ಹರಿಸು; ನಯನ: ಕಣ್ಣು; ಜಲಧಾರೆ: ವರ್ಷ, ಮಳೆ; ಉರಿ: ಹೊಗೆ; ಕೆಂದಾವರೆ: ಕೆಂಪಾವದ ಕಮಲ; ಮುಖ: ಆನನ; ಕಪಾಲ: ಕೆನ್ನೆ; ಕರುಕು: ಕಪ್ಪು; ಕರ: ಹಸ್ತ; ಮಹೀಶ: ರಾಜ; ತೊನಹುತ: ತೊದಲುತ್ತ; ನುಡಿ: ಮಾತಾಡು;

ಪದವಿಂಗಡಣೆ:
ಅರಸಿ+ಆರೋಗಿಸಿದ +ಹದನನು
ಬರವಿನಲಿ +ನೃಪ +ತಿಳಿಯಲ್+ಅಂತಃ
ಕರಣ+ ಕಳವಳಗೊಳಲು +ಸುರಿದುದು +ನಯನ +ಜಲಧಾರೆ
ಉರಿಹೊಡೆದ+ ಕೆಂದಾವರೆಯ +ವೊಲ್
ಕರುಕುವರಿಯಲು+ ಮುಖ +ಕಪಾಲದಿ
ಕರವನಿಟ್ಟು +ಮಹೀಶ +ತೊನಹುತ +ನುಡಿದನ್+ಇಂತೆಂದು

ಅಚ್ಚರಿ:
(೧) ಮನಸ್ಸು ನೊಂದಿತು ಎಂದು ಹೇಳಲು – ಅಂತಃಕರಣ ಕಳವಳಗೊಳಲು ಸುರಿದುದು ನಯನ ಜಲಧಾರೆ
(೨) ಉಪಮಾನದ ಪ್ರಯೋಗ – ಉರಿಹೊಡೆದ ಕೆಂದಾವರೆಯ ವೊಲ್ಕರುಕುವರಿಯಲು ಮುಖ

ಪದ್ಯ ೧೫: ಧರ್ಮಜನು ಋಷಿಯ ಮಾತನ್ನು ಹೇಗೆ ಅಂಗೀಕರಿಸಿದನು?

ಆವ ಜನ್ಮದ ಸುಕೃತ ಫಲ ಸಂ
ಭಾವಿಸಿದುದೋ ನಿಮ್ಮ ಬರವನ
ದಾವ ಪಡೆವನು ಕೊಟ್ಟೆನೆಂದನು ನೃಪತಿ ಕೈಮುಗಿದು
ಆ ವಿಗಡಮುನಿ ಬಳಿಕನುಷ್ಠಾ
ನಾವಲಂಬನಕತ್ತ ಯಮುನಾ
ದೇವಿಯರ ಹೊಗಲಿತ್ತ ನೃಪ ಕರೆಸಿದನು ದ್ರೌಪದಿಯ (ಅರಣ್ಯ ಪರ್ವ, ೧೭ ಸಂಧಿ, ೧೫ ಪದ್ಯ)

ತಾತ್ಪರ್ಯ:
ಯುಧಿಷ್ಠಿರನು ನಾನು ಯಾವ ಜನ್ಮದಲ್ಲಿ ಮಾಡಿದ ಪುಣ್ಯದ ಫಲವೋ ಏನೋ, ಈಗ ಒದಗಿದೆ, ನಿಮ್ಮ ಬರವಿನ ಪುಣ್ಯ ಇನ್ಯಾರಿಗೆ ಸಿಕ್ಕೀತು? ನಿಮ್ಮ ಭೋಜನಕ್ಕೆ ವ್ಯವಸ್ಥೆಯುಂಟು ಎಂದನು ಆಗಾ ಮಹರ್ಷಿಯು ಅನುಷ್ಠಾನಕ್ಕಾಗಿ ಯಮುನಾ ನದಿಗೆ ಹೋಗಲು, ಇತ್ತ ಧರ್ಮಜನು ದ್ರೌಪದಿಯನ್ನು ಕರೆದನು.

ಅರ್ಥ:
ಜನ್ಮ: ಹುಟ್ಟು; ಸುಕೃತ: ಒಳ್ಳೆಯ ಕೆಲಸ; ಫಲ: ಪ್ರಯೋಜನ; ಸಂಭಾವಿಸು: ಉಂಟಾಗು; ಬರವು: ಆಗಮನ; ಪಡೆ: ದೊರಕು; ಕೊಡು: ನೀಡು; ನೃಪತಿ: ರಾಜ; ಕೈಮುಗಿ: ನಮಸ್ಕರಿಸು; ವಿಗಡ: ಉಗ್ರವಾದ; ಬಳಿಕ: ನಂತರ; ಅನುಷ್ಠಾನ: ಆಚರಣೆ; ಅವಲಂಬನ: ಆಸರೆ; ನೃಪ: ರಾಜ; ಕರೆಸು: ಬರೆಮಾಡು;

ಪದವಿಂಗಡಣೆ:
ಆವ +ಜನ್ಮದ +ಸುಕೃತ +ಫಲ +ಸಂ
ಭಾವಿಸಿದುದೋ +ನಿಮ್ಮ +ಬರವನದ್
ಆವ+ ಪಡೆವನು+ ಕೊಟ್ಟೆನೆಂದನು +ನೃಪತಿ +ಕೈಮುಗಿದು
ಆ +ವಿಗಡಮುನಿ +ಬಳಿಕ್+ಅನುಷ್ಠಾನ
ಅವಲಂಬನಕ್+ಅತ್ತ+ ಯಮುನಾ
ದೇವಿಯರ +ಹೊಗಲ್+ಇತ್ತ +ನೃಪ +ಕರೆಸಿದನು +ದ್ರೌಪದಿಯ

ಅಚ್ಚರಿ:
(೧) ಧರ್ಮಜನು ತಾನು ಭಾಗ್ಯವಂತನೆಂದು ಹೇಳುವ ಪರಿ – ಆವ ಜನ್ಮದ ಸುಕೃತ ಫಲ ಸಂ
ಭಾವಿಸಿದುದೋ