ಪದ್ಯ ೮: ಕೃಷ್ಣನು ಪಾಂಡವರನ್ನು ಹೇಗೆ ಮನ್ನಿಸಿದನು?

ಇಳಿದು ದಂಡಿಗೆಯಿಂದ ಕರುಣಾ
ಜಲಧಿ ಬಂದನು ಕಾಲುನಡೆಯಲಿ
ಸೆಳೆದು ಬಿಗಿಯಪ್ಪಿದ ನಿದೇನಾಸುರವಿದೇನೆನುತ
ಬಳಿಕ ಭೀಮಾರ್ಜುನರ ಯಮಳರ
ನೊಲಿದುಮನ್ನಿಸಿ ಸತಿಯಲೋಚನ
ಜಲವ ಸೆರಗಿನೊಳೊರಸಿ ಸಂತೈಸಿದನು ಬಾಲಕಿಯ (ಅರಣ್ಯ ಪರ್ವ, ೧೫ ಸಂಧಿ, ೮ ಪದ್ಯ)

ತಾತ್ಪರ್ಯ:
ಶ್ರೀ ಕೃಷ್ಣನು ಪಲ್ಲಕ್ಕಿಯಿಂದಿಳಿದು, ಕಾಲು ನಡೆಯಲ್ಲಿ ಬಂದು, ಇದೇನು ಇಂತಹ ರಭಸ ಎನ್ನುತ್ತಾ ಧರ್ಮಜನನ್ನು ಬಿಗಿದಪ್ಪಿದನು, ಭೀಮಾರ್ಜುನ ನಕುಲ ಸಹದೇವರನ್ನು ಮನ್ನಿಸಿ, ದ್ರೌಪದಿಯ ಕಣ್ಣೀರನ್ನು ತನ್ನ ಉತ್ತರಿಯದಿಂದ ಒರೆಸಿ ಸಂತೈಸಿದನು.

ಅರ್ಥ:
ಇಳಿದು: ಕೆಳಗೆ ಬಂದು; ದಂಡಿಗೆ: ಪಲ್ಲಕ್ಕಿ; ಕರುಣ: ದಯೆ; ಜಲಧಿ: ಸಾಗರ; ಬಂದು: ಆಗಮಿಸು; ಕಾಲುನಡೆ: ಚಲಿಸು, ಮುನ್ನಡೆ; ಸೆಳೆ: ಎಳೆತ, ಸೆಳೆತ; ಬಿಗಿ: ಭದ್ರ, ಗಟ್ಟಿ; ಅಪ್ಪು: ಆಲಿಂಗನ; ಆಸುರ: ರಭಸ; ಬಳಿಕ: ನಂತರ; ಯಮಳ: ಅಶ್ವಿನಿ ದೇವತೆಗಳು, ಅವಳಿ ಮಕ್ಕಳು; ಒಲಿದು: ಪ್ರೀತಿಸು; ಮನ್ನಿಸು: ಗೌರವಿಸು; ಸತಿ: ಗರತಿ; ಲೋಚನ: ಕಣ್ಣು; ಜಲ: ನೀರು; ಸೆರಗು: ಬಟ್ಟೆಯ ಅಂಚು; ಒರಸು: ಸಾರಿಸು, ಅಳಿಸು; ಸಂತೈಸು: ಸಾಂತ್ವನಗೊಳಿಸು; ಬಾಲಕಿ: ಹೆಣ್ಣು;

ಪದವಿಂಗಡಣೆ:
ಇಳಿದು +ದಂಡಿಗೆಯಿಂದ +ಕರುಣಾ
ಜಲಧಿ +ಬಂದನು +ಕಾಲುನಡೆಯಲಿ
ಸೆಳೆದು +ಬಿಗಿ+ಅಪ್ಪಿದನ್ +ಇದೇನ್+ಆಸುರವ್+ಇದೇನೆನುತ
ಬಳಿಕ+ ಭೀಮಾರ್ಜುನರ +ಯಮಳರನ್
ಒಲಿದು+ಮನ್ನಿಸಿ +ಸತಿಯ+ಲೋಚನ
ಜಲವ +ಸೆರಗಿನೊಳ್+ಒರಸಿ +ಸಂತೈಸಿದನು +ಬಾಲಕಿಯ

ಅಚ್ಚರಿ:
(೧) ಕೃಷ್ಣನ ಸರಳತೆ – ಕರುಣಾಜಲಧಿ ಬಂದನು ಕಾಲುನಡೆಯಲಿ ಸೆಳೆದು ಬಿಗಿಯಪ್ಪಿದ ನಿದೇನಾಸುರವಿದೇನೆನುತ; ಸತಿಯಲೋಚನಜಲವ ಸೆರಗಿನೊಳೊರಸಿ ಸಂತೈಸಿದನು ಬಾಲಕಿಯ

ನಿಮ್ಮ ಟಿಪ್ಪಣಿ ಬರೆಯಿರಿ