ಪದ್ಯ ೧೬: ಬೇಡನು ಭೀಮನಿಗೆ ಏನೆಂದು ಹೇಳಿದನು?

ಇದೆ ಮಹಾಕಾಂತಾರವತಿ ದೂ
ರದಲಿ ವೃಕ ಶಾರ್ದೂಲ ಕೇಸರಿ
ಕದಲಿ ಕಳಭಕ್ರೋಢ ಶಿಖಿಲೂಲಾಯ ಸಾರಂಗ
ಮದದ ರಹಿಯಲಿ ಮಾನಿಸರು ಸೋಂ
ಕಿದರೆ ಸೆಡೆಯವು ಹೊಲನ ಹೊದರಿ
ಕ್ಕಿದವು ದೀಹದ ಹಿಂಡಿನಂತಿದೆ ಜೀಯ ಚಿತ್ತೈಸು (ಅರಣ್ಯ ಪರ್ವ, ೧೪ ಸಂಧಿ, ೧೬ ಪದ್ಯ)

ತಾತ್ಪರ್ಯ:
ಅತಿ ದೂರದಲ್ಲಿ ಒಂದು ಮಹಾರಣ್ಯವಿದೆ. ಅಲ್ಲಿ ತೋಳ, ಹುಲಿ, ಸಿಂಹ, ಜಿಂಕೆ, ಆನೆಯ ಮರಿಗಳು, ಕಪಿ, ನವಿಲು, ಕಾಡುಕೋಣ, ಸಾರಂಗಗಳು ಮದಿಸಿ ಮನುಷ್ಯರು ಹೋದರೂ ಬೆದರುವುದಿಲ್ಲ ಹೊಲಗಳ ಮೇಲೆ ಬಿದ್ದು ಸಾಕಿದ ಜಿಂಕೆ, ಆಡು ಮೊದಲಾದವುಗಳಂತೆ ಹಾಳುಮಾದುತ್ತಿವೆ, ಜೀಯಾ ಇದನ್ನು ಮನಸ್ಸಿಗೆ ತಂದುಕೋ ಎಂದು ಅವನು ಭೀಮನಿಗೆ ಹೇಳಿದನು.

ಅರ್ಥ:
ಮಹಾ: ದೊಡ್ಡ; ಕಾಂತಾರ: ಅಡವಿ, ಅರಣ್ಯ; ಅತಿ: ಬಹಳ; ದೂರ: ಅಂತರ; ವೃಕ: ತೋಳ; ಶಾರ್ದೂಲ: ಹುಲಿ; ಕೇಸರಿ: ಸಿಂಹ; ಕದಲಿ: ಜಿಂಕೆ; ಕಳಭ: ಆನೆಮರಿ; ಲೂಲಾಯ: ಕೋಣ; ಸಾರಂಗ: ಜಿಂಕೆ; ಕ್ರೋಡ: ಹಂದಿ; ಮದ: ಸೊಕ್ಕು; ರಹಿ: ದಾರಿ, ಮಾರ್ಗ; ಮಾನಿಸ: ಮನುಷ್ಯ; ಸೋಂಕು: ಮುಟ್ಟುವಿಕೆ, ಸ್ಪರ್ಶ; ಸೆಡೆ: ಗರ್ವಿಸು, ಅಹಂಕರಿಸು; ಹೊಲ: ಸ್ಥಳ, ಪ್ರದೇಶ; ಹೊದರು: ತೊಡಕು, ತೊಂದರೆ ; ಇಕ್ಕು: ಇರಿಸು, ಇಡು; ದೀಹ: ಬೇಟೆಗೆ ಉಪಯೋಗಿಸಲು ಪಳಗಿಸಿದ ಪ್ರಾಣಿ, ಸೆಳೆ; ಹಿಂಡು: ಗುಂಪು, ಸಮೂಹ; ಜೀಯ: ಒಡೆಯ; ಚಿತ್ತೈಸು: ಗಮನವಿಟ್ಟು ಕೇಳು;

ಪದವಿಂಗಡಣೆ:
ಇದೆ+ ಮಹಾಕಾಂತಾರವ್+ಅತಿ +ದೂ
ರದಲಿ +ವೃಕ +ಶಾರ್ದೂಲ +ಕೇಸರಿ
ಕದಲಿ+ ಕಳಭ+ಕ್ರೋಢ+ ಶಿಖಿ+ಲೂಲಾಯ +ಸಾರಂಗ
ಮದದ +ರಹಿಯಲಿ +ಮಾನಿಸರು +ಸೋಂ
ಕಿದರೆ +ಸೆಡೆಯವು +ಹೊಲನ +ಹೊದರ್
ಇಕ್ಕಿದವು +ದೀಹದ+ ಹಿಂಡಿನಂತಿದೆ+ ಜೀಯ +ಚಿತ್ತೈಸು

ಅಚ್ಚರಿ:
(೧) ಪ್ರಾಣಿಗಳನ್ನು ಹೆಸರಿಸುವ ಪರಿ – ವೃಕ, ಶಾರ್ದೂಲ, ಕೇಸರಿ, ಕದಲಿ, ಕಳಭ, ಕ್ರೋಢ ಶಿಖಿ, ಲೂಲಾಯ, ಸಾರಂಗ

ಪದ್ಯ ೧೫: ಬೇಡನು ಭೀಮನಿಗೆ ಯಾವುದರ ಬಗ್ಗೆ ವಿವರವನ್ನು ನೀಡಿದನು?

ಬಂದನೊಬ್ಬನು ಪವನಸುತನ ಪು
ಳಿಂದನಟವೀತಟದ ಖಗಮೃಗ
ವೃಂದದಿಕ್ಕೆಯ ಹಕ್ಕೆಯಾಡುಂಬೊಲದ ಸೋಹೆಗಳ
ನಿಂದನೆಲೆ ನೀರ್ದಾಣ ಹೆಜ್ಜೆಗ
ಳಿಂದ ಭೇದಿಸಿ ಜೀಯ ಚಿತ್ತವಿ
ಸೆಂದು ಬಿನ್ನಹ ಮಾಡಿದನು ಕಲಿ ಭೀಮಸೇನಂಗೆ (ಅರಣ್ಯ ಪರ್ವ, ೧೪ ಸಂಧಿ, ೧೫ ಪದ್ಯ)

ತಾತ್ಪರ್ಯ:
ಒಬ್ಬ ಬೇಡನು ಬಂದು ಅಡವಿಯಲ್ಲಿ ಪಕ್ಷಿಗಳ ಗೂಡುಗಳು, ಮೃಗಗಳು ಇರುವ ಸ್ಥಳಗಳು ಅವು ನಿಲ್ಲುವ ಜಾಗಗಳು, ತಿರುಗಾಡುವ ಸುಳಿವು, ಸದ್ಯದಲ್ಲಿ ನಿಂತಿರುವ ಜಾಗ, ಅವು ನೀರು ಕುಡಿಯುವ ಜಾಗಗಳು ಇವುಗಳನ್ನೆಲ್ಲಾ ಅವುಗಳ ಹೆಜ್ಜೆಗಳ ಗುರುತಿನಿಂದ ಕಂಡು ಹಿಡಿದು ಭೀಮನಿಗೆ ಜೀಯಾ ಕೇಳು ಎಂದು ಎಲ್ಲವನ್ನು ತಿಳಿಸಿದನು.

ಅರ್ಥ:
ಬಂದನು: ಆಗಮಿಸು; ಪವನಸುತ: ವಾಯುಪುತ್ರ (ಭೀಮ); ಪುಳಿಂದ: ಬೇಡ; ಅಟವಿ: ಕಾಡು; ತಟ: ಬೆಟ್ಟದ ತಪ್ಪಲು, ದಡ; ಖಗ: ಪಕ್ಷಿ; ಮೃಗ: ಪ್ರಾಣಿ; ವೃಂದ: ಗುಂಪು; ಇಕ್ಕೆ: ಗುಡಿಸಲು; ಹಕ್ಕೆ: ಹಕ್ಕಿಯ ಗೂಡು; ಸೋಹು: ಅಡಗಿರುವ ಪ್ರಾಣಿಗಳನ್ನು ಪೊದೆ ಗಳಿಂದ ಎಬ್ಬಿಸಿ ಆಡುವ ಒಂದು ಬಗೆಯ ಬೇಟೆ; ನಿಲ್ಲು: ತಡೆ; ನೀರ್ದಾಣ: ನೀರಿನ ಸ್ಥಾನ; ಹೆಜ್ಜೆ: ಪದ; ಭೇದಿಸು: ಬಗೆ, ವಿಧ, ಪ್ರಕಾರ; ಜೀಯ: ಒಡೆಯ; ಚಿತ್ತವಿಸು: ಗಮನವಿಟ್ಟು ಕೇಳು; ಬಿನ್ನಹ: ಮನವಿ; ಕಲಿ: ಶೂರ;

ಪದವಿಂಗಡಣೆ:
ಬಂದನ್+ಒಬ್ಬನು +ಪವನಸುತನ +ಪು
ಳಿಂದನ್+ಅಟವೀ+ತಟದ +ಖಗ+ಮೃಗ
ವೃಂದದ್+ಇಕ್ಕೆಯ +ಹಕ್ಕೆ+ಆಡುಂಬೊಲದ+ ಸೋಹೆಗಳ
ನಿಂದನೆಲೆ +ನೀರ್ದಾಣ+ ಹೆಜ್ಜೆಗ
ಳಿಂದ +ಭೇದಿಸಿ +ಜೀಯ +ಚಿತ್ತವಿ
ಸೆಂದು +ಬಿನ್ನಹ +ಮಾಡಿದನು +ಕಲಿ +ಭೀಮಸೇನಂಗೆ

ಪದ್ಯ ೧೪: ಧರ್ಮಜನು ಮತ್ತಾರ ಆಶ್ರಮಕ್ಕೆ ಹೋದನು?

ಅರಸ ಕೇಳೈ ಕಾರ್ತಿಕೇಯನ
ವರ ಮಹಾಶ್ರಮಕೈದಿದನು ಮುನಿ
ವರರು ಸಹಿತೊಲವಿನಲಿ ನೂಕಿದನೊಂದು ವತ್ಸರವ
ಧರಣಿಪತಿ ಬೃಹದಶ್ವನಾಶ್ರಮ
ವರಕೆ ಬಂದನು ತೀರ್ಥ ಸೇವಾ
ಪರಮ ಪಾವನ ಕರಣನಿರ್ದನು ಪರ್ಣಶಾಲೆಯಲಿ (ಅರಣ್ಯ ಪರ್ವ, ೧೪ ಸಂಧಿ, ೧೪ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಯುಧಿಷ್ಠಿರನು ಕಾರ್ತಿಕೇಯನ ಆಶ್ರಮಕ್ಕೆ ಹೋಗಿ ಮುನಿಗಳೊಡನೆ ಒಂದು ವರ್ಷಕಾಲ ಸಂತೋಷದಿಂದಿದ್ದನು. ಅಲ್ಲಿಂದ ಮುಂದೆ ಬೃಹದಶ್ವನ ಆಶ್ರಮಕ್ಕೆ ಹೋಗಿ ಪರ್ಣಶಾಲೆಯಲ್ಲಿದ್ದನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ವರ: ಶ್ರೇಷ್ಠ; ಮಹಾ: ದೊಡ್ಡ, ಶ್ರೇಷ್ಠ; ಆಶ್ರಮ: ಕುಟೀರ; ಮುನಿ: ಋಷಿ; ಸಹಿತ: ಜೊತೆ; ಒಲವು: ಪ್ರೀತಿ; ನೂಕು: ತಳ್ಳು; ವತ್ಸರ: ವರ್ಷ; ಧರಣಿಪತಿ: ರಾಜ; ಬಂದನು: ಆಗಮಿಸು; ತೀರ್ಥ: ಪುಣ್ಯಕ್ಷೇತ್ರ; ಸೇವೆ: ಉಪಚಾರ, ಶುಶ್ರೂಷೆ, ಪೂಜೆ; ಪರಮ: ಶ್ರೇಷ್ಠ; ಪಾವನ: ಪವಿತ್ರವಾದ; ಪರ್ಣಶಾಲೆ: ಕುಟೀರ; ಐದು: ಬಂದುಸೇರು;

ಪದವಿಂಗಡಣೆ:
ಅರಸ+ ಕೇಳೈ +ಕಾರ್ತಿಕೇಯನ
ವರ +ಮಹಾಶ್ರಮಕ್+ಐದಿದನು +ಮುನಿ
ವರರು +ಸಹಿತ್+ಒಲವಿನಲಿ +ನೂಕಿದನ್+ಒಂದು +ವತ್ಸರವ
ಧರಣಿಪತಿ +ಬೃಹದಶ್ವನ್+ಆಶ್ರಮ
ವರಕೆ+ ಬಂದನು +ತೀರ್ಥ +ಸೇವಾ
ಪರಮ +ಪಾವನ +ಕರಣನಿರ್ದನು +ಪರ್ಣಶಾಲೆಯಲಿ

ಅಚ್ಚರಿ:
(೧) ಧರ್ಮಜನನ್ನು ಕರೆದ ಪರಿ – ಸೇವಾ ಪರಮ ಪಾವನ ಕರಣ
(೨) ಅರಸ, ಧರಣಿಪತಿ – ಸಮನಾರ್ಥಕ ಪದ

ಪದ್ಯ ೧೩: ಪಾಂಡವರು ಯಾವ ಅರಣ್ಯಕ್ಕೆ ಪ್ರಯಾಣ ಬಳಸಿದರು?

ಇವರು ಕಾಮ್ಯಕ ಕಾನನವನನು
ಭವಿಸಿ ಬಳಿಕಲ್ಲಿಂದ ಹೊರವಂ
ಟವಗಡೆಯ ಪರ್ವತಕೆ ಬಂದರು ಯಾಮುನಾಹ್ವಯದ
ದಿವಿಜರಿಪು ಹೈಡಿಂಬನಾ ತುದಿ
ಗಾರನೇರಿಸಿದನು ತದಗ್ರದೊ
ಳವನಿಪತಿ ಕೆಲದಿವಸವಿದ್ದಲ್ಲಿಂದ ಹೊರವಂಟ (ಅರಣ್ಯ ಪರ್ವ, ೧೪ ಸಂಧಿ, ೧೩ ಪದ್ಯ)

ತಾತ್ಪರ್ಯ:
ಪಾಂಡವರು ಕಾಮ್ಯಕವನದಲ್ಲಿ ಕೆಲದಿನಗಳ ಕಾಲ ವಾಸವಾಗಿದ್ದು ಅಲ್ಲಿಂದ ಹೊರಟು ಅಪಾಯವಾಗಿದ್ದ ಯಾಮುನ ಪರ್ವತಕ್ಕೆ ಬಂದರು. ದಾನವನಾದ ಘಟೋತ್ಕಚನು ಅವರನ್ನು ಪರ್ವತದ ಮೇಲಕ್ಕೆ ಹತ್ತಿಸಿ ಅಲ್ಲಿ ಕೆಲದಿನಗಳಿದ್ದು ಅಲ್ಲಿಂದ ಮುಂದೆ ಪ್ರಯಾಣ ಮಾಡಿದರು.

ಅರ್ಥ:
ಕಾನನ: ಅರಣ್ಯ; ಅನುಭವ: ಇಂದ್ರಿಯಗಳ ಮೂಲಕ ಬರುವ ಜ್ಞಾನ; ಬಳಿಕ: ನಂತರ; ಹೊರವಂಟ: ತೆರಳು; ಪರ್ವತ: ಬೆಟ್ಟ; ಬಂದರು: ಆಗಮಿಸು; ದಿವಿಜ: ದೇವತೆ; ರಿಪು: ವೈರಿ; ತುದಿ: ಅಗ್ರ; ಏರಿಸು: ಮೇಲಕ್ಕೆ ಹತ್ತಿಸು; ಅಗ್ರ: ತುದಿ, ಮೇಲುಭಾಗ; ಅವನಿಪತಿ: ರಾಜ; ಕೆಲ: ಸ್ವಲ್ಪ; ದಿವಸ: ದಿನ; ಅವಗಡೆ: ಅಪಾಯ; ಆಹ್ವಯ: ಕರೆಯುವಿಕೆ;

ಪದವಿಂಗಡಣೆ:
ಇವರು +ಕಾಮ್ಯಕ +ಕಾನನವನ್+ಅನು
ಭವಿಸಿ+ ಬಳಿಕ್+ಅಲ್ಲಿಂದ +ಹೊರವಂಟ್
ಅವಗಡೆಯ+ ಪರ್ವತಕೆ+ ಬಂದರು +ಯಾಮುನ+ಆಹ್ವಯದ
ದಿವಿಜರಿಪು +ಹೈಡಿಂಬನಾ +ತುದಿಗ್
ಆರನೇರಿಸಿದನು +ತದ್+ಅಗ್ರದೊಳ್
ಅವನಿಪತಿ +ಕೆಲದಿವಸವಿದ್+ಅಲ್ಲಿಂದ +ಹೊರವಂಟ

ಅಚ್ಚರಿ:
(೧) ಘಟೋತ್ಕಚನನ್ನು ಕರೆಯುವ ಪರಿ – ದಿವಿಜರಿಪು ಹೈಡಿಂಬನ

ಪದ್ಯ ೧೨: ನಾರದರ ಮಾತನ್ನು ಅರ್ಜುನನು ಹೇಗೆ ಗೌರವಿಸಿದನು?

ಅರಸ ಕೇಳೈ ನಾರದನ ನುಡಿ
ಗುರುತರವಲೇ ಪಾರ್ಥನಾ ಬಿಲು
ದಿರುವ ಮಗುಳಿಳುಹಿದನು ಮುನಿಪನ ಮಾತ ಮನ್ನಿಸಿದ
ಹರಿದುದಮರರ ಮೇಲೆ ನೋಡುವ
ನೆರವಿ ದಿಗುಪಾಲಕರು ನಿಜಮಂ
ದಿರಕೆ ಸರಿದರು ದೇವಮುನಿ ಹಾಯಿದನು ಗಗನದಲಿ (ಅರಣ್ಯ ಪರ್ವ, ೧೪ ಸಂಧಿ, ೧೨ ಪದ್ಯ)

ತಾತ್ಪರ್ಯ:
ನಾರದನ ಘನವಾದ ನುಡಿಯನ್ನು ಕೇಳಿ, ಅರ್ಜುನನು ಗಾಂಡೀವದ ಹೆದೆಯನ್ನು ಕಳಚಿದನು. ಮೇಲೆ ನೋಡಲು ನೆರೆದಿದ್ದ ದೇವತೆಗಳೂ, ದಿಕ್ಪಾಲಕರೂ ಅವರವರ ಆಲಯಗಳಿಗೆ ತೆರಳಿದರು. ನಾರದರು ಆಗಸ ಮಾರ್ಗದಲ್ಲಿ ಮತ್ತೆ ಸ್ವರ್ಗಕ್ಕೆ ಹೋದರು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ನುಡಿ: ಮಾತು; ಗುರುತರ: ಹಿರಿದಾದುದು; ಬಿಲು: ಬಿಲ್ಲು; ಉದಿರು: ಕೆಳಗೆ ಬೀಳು; ಮಗುಳು: ಹಿಂತಿರುಗು; ಇಳುಹು: ಕೆಳಕ್ಕೆ ಬೀಳು; ಮುನಿ: ಋಷಿ; ಮಾತು: ನುಡಿ; ಮನ್ನಿಸು: ಗೌರವಿಸು; ಹರಿ: ಚಲಿಸು; ಅಮರ: ದೇವತೆ; ಮೇಲೆ: ಮುಂದೆ, ಎತ್ತರ; ನೋಡು: ವೀಕ್ಷಿಸು; ನೆರವು: ಸಹಾಯ; ದಿಗುಪಾಲ: ದಿಕ್ಪಾಲಕ; ನಿಜ: ತನ್ನ, ದಿಟ; ಮಂದಿರ: ಆಲಯ; ಸರಿ: ಹೋಗು, ಗಮಿಸು; ದೇವಮುನಿ: ನಾರದ; ಹಾಯಿದ:

ಪದವಿಂಗಡಣೆ:
ಅರಸ +ಕೇಳೈ +ನಾರದನ +ನುಡಿ
ಗುರುತರವಲೇ +ಪಾರ್ಥನಾ +ಬಿಲ್
ಉದಿರುವ +ಮಗುಳ್+ಇಳುಹಿದನು +ಮುನಿಪನ +ಮಾತ +ಮನ್ನಿಸಿದ
ಹರಿದುದ್+ ಅಮರರ +ಮೇಲೆ +ನೋಡುವ
ನೆರವಿ +ದಿಗುಪಾಲಕರು +ನಿಜ+ಮಂ
ದಿರಕೆ +ಸರಿದರು+ ದೇವಮುನಿ +ಹಾಯಿದನು +ಗಗನದಲಿ

ಅಚ್ಚರಿ:
(೧) ಮ ಕಾರದ ಸಾಲು ಪದ – ಮಗುಳಿಳುಹಿದನು ಮುನಿಪನ ಮಾತ ಮನ್ನಿಸಿದ
(೨) ಸ್ವರ್ಗಕ್ಕೆ ಹೋದನು ಎಂದು ಹೇಳುವ ಪರಿ – ದೇವಮುನಿ ಹಾಯಿದನು ಗಗನದಲಿ

ಪದ್ಯ ೧೧: ಅರ್ಜುನನಿಗೆ ನಾರದರು ಯಾವ ಹಿತವಚನ ನುಡಿದರು?

ಹರಮಹಾಸ್ತ್ರಾದಿಗಳ ಲೀಲೆಯ
ನರಸ ನೋಡಲು ಬೇಹುದಾದರೆ
ಬೆರೆಸುವುದು ತತ್ಸಮಯ ಸೈರಿಸು ನೃಪನ ಕಣ್ಮನವ
ಹೊರೆವ ಹೇರಾಳದ ಮಹಾಸಂ
ಗರವಹುದು ಮುಂದಣ ಕಥಾವಿ
ಸ್ತರವ ವಿರಚಿಸಬಾರದನುಚಿತವೆಂದನಾ ಮುನಿಪ (ಅರಣ್ಯ ಪರ್ವ, ೧೪ ಸಂಧಿ, ೧೧ ಪದ್ಯ)

ತಾತ್ಪರ್ಯ:
ಪಾಶುಪತಾಸ್ತ್ರವೇ ಮೊದಲಾದ ಮಹಾಸ್ತ್ರಗಳ ಲೀಲೆಯನ್ನು ಯುಧಿಷ್ಠಿರನು ನೋಡಲು ಇಚ್ಛಿಸಿದರೆ, ಆ ಕಾಲವೂ ಬರುತ್ತದೆ, ಅಲ್ಲಿಯವರೆಗೂ ನಿಮ್ಮಣ್ಣ ಕಣ್ಣು ಮತ್ತು ಮನಸ್ಸುಗಳು ಕಾಯಬೇಕು. ಈ ಅಸ್ತ್ರ ಪ್ರಯೋಗವು ಸಾರ್ಥಕವಾಗುವಂತಹ ಮಹಾಯುದ್ಧವಾಗುತ್ತದೆ. ಮುಂದಾಗುವುದನ್ನು ಹೇಳುವುದು ಉಚಿತವಲ್ಲ ಎಂದು ನಾರದರು ಹೇಳಿದರು.

ಅರ್ಥ:
ಹರ: ಶಿವ; ಮಹಾಸ್ತ್ರ: ಶ್ರೇಷ್ಠವಾದ ಆಯುಧ; ಲೀಲೆ: ಆನಂದ, ಸಂತೋಷ; ಅರಸ: ರಾಜ; ನೋಡು: ವೀಕ್ಷಿಸು; ಬೇಹು: ಗುಪ್ತಚಾರಿಕೆ; ಬೆರೆ: ಕೂಡು, ಸೇರು; ಸಮಯ: ಕಾಲ; ಸೈರಿಸು: ತಾಳು, ಸಹಿಸು; ನೃಪ: ರಾಜ; ಕಣ್ಮನ: ಕಣ್ಣು ಮತ್ತು ಮನಸ್ಸು; ಹೊರೆ: ರಕ್ಷಣೆ, ಆಶ್ರಯ; ಹೇರಾಳ: ದೊಡ್ಡ, ವಿಶೇಷ; ಮಹಾ: ದೊಡ್ಡ; ಸಂಗರ: ಯುದ್ಧ; ಮುಂದಣ: ಮುಂದೆ; ಕಥೆ: ವಿಚಾರ; ವಿಸ್ತರ: ವಿವರಣೆ; ವಿರಚಿಸ: ನಿರೂಪಿಸು, ರಚಿಸು; ಅನುಚಿತ: ಸರಿಯಲ್ಲ; ಮುನಿಪ: ಋಷಿ;

ಪದವಿಂಗಡಣೆ:
ಹರ+ಮಹಾಸ್ತ್ರ+ಆದಿಗಳ+ ಲೀಲೆಯನ್
ಅರಸ+ ನೋಡಲು+ ಬೇಹುದಾದರೆ
ಬೆರೆಸುವುದು +ತತ್ಸಮಯ +ಸೈರಿಸು+ ನೃಪನ+ ಕಣ್ಮನವ
ಹೊರೆವ +ಹೇರಾಳದ +ಮಹಾಸಂ
ಗರವಹುದು +ಮುಂದಣ +ಕಥಾ+ವಿ
ಸ್ತರವ +ವಿರಚಿಸಬಾರದ್+ಅನುಚಿತವ್+ಎಂದನಾ +ಮುನಿಪ

ಅಚ್ಚರಿ:
(೧) ಮುಂದೆ ಆಗುವುದನ್ನು ಹೇಳಬಾರದೆಂದು ಹೇಳುವ ಪರಿ – ಮುಂದಣ ಕಥಾವಿ
ಸ್ತರವ ವಿರಚಿಸಬಾರದನುಚಿತವೆಂದನಾ ಮುನಿಪ

ಪದ್ಯ ೧೦: ನಾರದರು ಅರ್ಜುನನಿಗೆ ಏನು ಹೇಳಿದರು?

ಲಕ್ಷ್ಯವಿಲ್ಲದೆ ತೊಡಚುವರೆ ನಿ
ರ್ಲಕ್ಷ್ಯಶರವೇ ನೀನುಪಾರ್ಜಿಸಿ
ದಕ್ಷಯವಲೇ ಪಾರ್ಥ ಗಣನೆಯ ಗುತ್ತಿನಂಬುಗಳೆ
ಶಿಕ್ಷೆ ರಕ್ಷೆಗೆ ಬಾಣವೊಂದೇ
ಲಕ್ಷ್ಯವಿದು ನೀನರಿಯದುದಕೆ ವಿ
ಲಕ್ಷ್ಯನಾದೆನು ನಾನೆನುತ ಮುನಿ ನುಡಿದರ್ಜುನಗೆ (ಅರಣ್ಯ ಪರ್ವ, ೧೪ ಸಂಧಿ, ೧೦ ಪದ್ಯ)

ತಾತ್ಪರ್ಯ:
ತಕ್ಕ ಗುರಿಯಿಲ್ಲದೆ ಹೂಡುವುದಕ್ಕೆ ಇದೇನು ಕೆಲಸಕ್ಕೆ ಬಾರದ ಬಾಣವೇ? ನೀನು ಮಹಾ ಶ್ರಮದಿಂದ ಸಂಪಾದಿಸಿದ ಶಸ್ತ್ರಗಳಿವು, ಎಣಿಸಿ ಇಡುವ ರಾಶಿಗೆ ಸೇರಿದ ಬಾಣಗಳಲ್ಲ. ಶತ್ರುಗಳನ್ನು ಶಿಕ್ಷಿಸಲೂ, ತನ್ನನ್ನು ರಕ್ಷಿಸಿಕೊಳ್ಲಲೂ ಸಮರ್ಥವಾದ ಅಸ್ತ್ರಗಳಿವು ಇದನ್ನು ನೀನು ತಿಳಿದು ಕೊಳ್ಳಲಾಗಲಿಲ್ಲವಲ್ಲಾ ಎಂದು ನನಗೆ ಬೇಸರವಾಗುತ್ತಿದೆ ಎಂದು ನಾರದರು ಹೇಳಿದರು.

ಅರ್ಥ:
ಲಕ್ಷ್ಯ: ಗುರುತು, ಚಿಹ್ನೆ; ತೊಡಚು: ಸೇರಿಸು, ಹೊಂದಿಸು; ನಿರ್ಲಕ್ಷ್ಯ: ಅಸಡ್ಡೆ, ಅನಾದರ; ಶರ: ಬಾಣ; ಅರ್ಜಿಸು: ಸಂಪಾದಿಸು; ದಕ್ಷ: ಚತುರ, ಜಾಣ; ಗಣನೆ: ಲೆಕ್ಕ; ಗುತ್ತಿನಂಬು: ಒಂದು ಬಗೆಯ ಬಾಣ; ಶಿಕ್ಷೆ: ದಂಡನೆ; ರಕ್ಷೆ: ಕಾಪಾಡು; ಅರಿ: ತಿಳಿ; ವಿಲಕ್ಷ್ಯ: ನೋಡದಿರುವುದು; ಮುನಿ: ಋಷಿ; ನುಡಿ: ಮಾತಾಡು; ಅಕ್ಷಯ: ಕ್ಷಯವಿಲ್ಲದುದು, ಬರಿದಾ ಗದುದು;

ಪದವಿಂಗಡಣೆ:
ಲಕ್ಷ್ಯವಿಲ್ಲದೆ +ತೊಡಚುವರೆ+ ನಿ
ರ್ಲಕ್ಷ್ಯ+ಶರವೇ+ ನೀನ್+ಉಪಾರ್ಜಿಸಿದ್
ಅಕ್ಷಯವಲೇ+ ಪಾರ್ಥ+ ಗಣನೆಯ+ ಗುತ್ತಿನಂಬುಗಳೆ
ಶಿಕ್ಷೆ +ರಕ್ಷೆಗೆ+ ಬಾಣವೊಂದೇ
ಲಕ್ಷ್ಯವಿದು +ನೀನ್+ಅರಿಯದುದಕೆ+ ವಿ
ಲಕ್ಷ್ಯನಾದೆನು +ನಾನ್+ಎನುತ +ಮುನಿ +ನುಡಿದ್+ಅರ್ಜುನಗೆ

ಅಚ್ಚರಿ:
(೧) ಅರ್ಜುನನಿಗೆ ಬಯ್ಯುವ ಪರಿ – ನೀನರಿಯದುದಕೆ ವಿಲಕ್ಷ್ಯನಾದೆನು ನಾನೆನುತ ಮುನಿ ನುಡಿದರ್ಜುನಗೆ
(೨) ನಿರ್ಲಕ್ಷ್ಯ, ವಿಲಕ್ಷ್ಯ, ಲಕ್ಷ್ಯ – ಪ್ರಾಸ ಪದಗಳ ಬಳಕೆ

ಪದ್ಯ ೯: ನಾರದರು ಏನು ಹೇಳಿದರು?

ತೊಡಚದಿರು ಬೊಮ್ಮಾಸ್ತ್ರವಿದು ಬಾ
ಯ್ಗಡಿಯನಿದು ನಿಮಿಷದಲಿ ಭುವನವ
ನಡುಗಿ ತಣಿಯದಿದೊಂದು ಮತ್ತೀಶಾಂಭವಾದಿಗಳ
ತೊಡಚದಿರು ಸಂಹಾರ ಸಮಯವ
ನೆಡೆಯಲನುಭವಿಸುವುದು ಜಗವಿದು
ಕೆಡಿಸದಿರು ಕೆಡಿಸದಿರು ತೆಗೆ ತೆಗೆಯೆಂದನಾ ಮುನಿಪ (ಅರಣ್ಯ ಪರ್ವ, ೧೪ ಸಂಧಿ, ೯ ಪದ್ಯ)

ತಾತ್ಪರ್ಯ:
ಹೂಡಬೇಡ ಅರ್ಜುನ ಬ್ರಹ್ಮಾಸ್ತ್ರ ಮತ್ತು ಪಾಶುಪತಾಸ್ತ್ರವನ್ನು. ಅವು ಒಂದು ನಿಮಿಷದಲ್ಲಿ ಭೂಮಿಯನ್ನು ಬೇಯಿಸಿದರೂ ತೃಪ್ತಿ ಪಟ್ಟುಕೊಳ್ಳುವುದಿಲ್ಲ. ಈ ಜಗತ್ತು ಈಗಲೇ ನಾಶವಾಗಿ ಹೋಗುತ್ತದೆ. ಕೆಡಿಸಬೇಡ ಕೆಡಿಸಬೇಡ ನಿಲ್ಲಿಸು ಎಂದು ನಾರದರು ಅರ್ಜುನನಿಗೆ ಹೇಳಿದರು.

ಅರ್ಥ:
ತೊಡಚು: ಹೊಂದಿಸು; ಬೊಮ್ಮಾಸ್ತ್ರ: ಬ್ರಹ್ಮಾಸ್ತ್ರ; ಅಸ್ತ್ರ: ಶಸ್ತ್ರ್, ಆಯುಧ; ಬಾಯ್ಗಡಿ: ಬಾಯಿಂದ ಕಡಿದು ಹಾಕಬಲ್ಲ; ನಿಮಿಷ: ಕ್ಷಣಮಾತ್ರ; ಭುವನ: ಭೂಮಿ; ನಡುಗು: ಕಂಪಿಸು; ತಣಿ: ತೃಪ್ತಿಹೊಂದು, ಸಮಾಧಾನಗೊಳ್ಳು; ಶಾಂಭವ: ಪಾಶುಪತಾಸ್ತ್ರ; ಆದಿ: ಮುಂತಾದ; ಸಂಹಾರ: ನಾಶ; ಸಮಯ: ಕಾಲ; ನೆಡೆ: ಚಲಿಸು; ಅನುಭವಿಸು: ಅನುಭಾವ, ಇಂದ್ರಿಯಗಳಿಂದ ಬರುವ ಜ್ಞಾನ; ಜಗ: ಪ್ರಪಂಚ; ಕೆಡಿಸು: ಹಾಳುಮಾಡು; ತೆಗೆ: ಹೊರತರು; ಮುನಿಪ: ಋಷಿ;

ಪದವಿಂಗಡಣೆ:
ತೊಡಚದಿರು+ ಬೊಮ್ಮಾಸ್ತ್ರವ್+ಇದು +ಬಾ
ಯ್ಗಡಿಯನ್+ಇದು +ನಿಮಿಷದಲಿ+ ಭುವನವ
ನಡುಗಿ+ ತಣಿಯದ್+ಇದೊಂದು +ಮತ್ತ್+ಈ+ಶಾಂಭವಾದಿಗಳ
ತೊಡಚದಿರು +ಸಂಹಾರ+ ಸಮಯವ
ನೆಡೆಯಲ್+ಅನುಭವಿಸುವುದು +ಜಗವಿದು
ಕೆಡಿಸದಿರು+ ಕೆಡಿಸದಿರು+ ತೆಗೆ+ ತೆಗೆ+ಎಂದನಾ +ಮುನಿಪ

ಅಚ್ಚರಿ:
(೧೦ ತೊಡಚದಿರು, ಕೆಡಿಸದಿರು, ತೆಗೆ – ಎರಡು ಬಾರಿ ಪ್ರಯೋಗ

ಪದ್ಯ ೮: ಅರ್ಜುನನಿಗೆ ಯಾರು ಅಸ್ತ್ರಪ್ರಯೋಗವನ್ನು ನಿಲ್ಲಿಸಲು ಹೇಳಿದರು?

ಆಹಹ ಬೆಂದುದು ಭುವನವಿದು ವಿ
ಗ್ರಹದ ಸಮಯವೆ ತಮ್ಮ ಲೀಲೆಗೆ
ಕುಹಕಮತಿಗಳು ತಂದರೈ ತ್ರೈಜಗಕೆ ತಲ್ಲಣವ
ರಹವಿದೇನೆಂದಭ್ರ ತಳದಿಂ
ಮಹಿಗೆ ಬಂದನು ದೇವಮುನಿ
ದುಸ್ಸಹವಿದೇನೈ ಪಾರ್ಥ ಹೋಹೋ ಸಾಕು ಸಾಕೆಂದ (ಅರಣ್ಯ ಪರ್ವ, ೧೪ ಸಂಧಿ, ೮ ಪದ್ಯ)

ತಾತ್ಪರ್ಯ:
ಓಹೋ ಇದೇನು ಭೂಮಿಯು ಬೆಂದಂತಾಗುತ್ತಿದೆ, ಇದೇನು ಯುದ್ಧದ ಸಮಯವೇನಲ್ಲ, ತಮ್ಮ ವಿನೋದಕ್ಕಾಗಿ ಯಾರೋ ಬುದ್ಧಿಯಿಲ್ಲದವರು ಲೋಕಕ್ಕೆ ಕ್ಷೋಭೆಯನ್ನುಂಟು ಮಾಡುತ್ತಿದ್ದಾರೆ, ಇದನ್ನು ತಪ್ಪಿಸುವ ಮಾರ್ಗವೇನೆಂದು ಯೋಚಿಸುತ್ತಾ ನಾರದರು ಆಗಸದಿಂದ ಭೂಮಿಗೆ ಇಳಿದು ಬಂದು ಅರ್ಜುನನನ್ನು ನೋಡಿ ಓಹೋ ಅರ್ಜುನ ಇದು ಸಹಿಸಲಾಗದ ಸಂಕಟ ಇದನ್ನು ಸಾಕು ಮಾಡೆಂದನು.

ಅರ್ಥ:
ಆಹಹ: ಓಹೋ; ಬೆಂದು: ಸುಟ್ಟುಹೋಗು; ಭುವನ: ಭೂಮಿ; ವಿಗ್ರಹ: ರೂಪ; ಯುದ್ಧ; ಸಮಯ: ಕಾಲ; ಲೀಲೆ: ಆಟ, ಕ್ರೀಡೆ; ಕುಹಕ: ಮೋಸ, ವಂಚನೆ; ಮತಿ: ಬುದ್ಧಿ; ತಂದರೈ: ತರು, ಬರೆಮಾಡು; ತ್ರೈಜಗ: ಮೂರು ಲೋಕ; ತಲ್ಲಣ: ಅಂಜಿಕೆ, ಭಯ; ರಹ: ಗುಟ್ಟು, ರಹಸ್ಯ; ಅಭ್ರ: ಆಗಸ; ತಳ: ಕೆಳಗು, ಪಾತಾಳ; ಮಹಿ: ಭೂಮಿ; ಬಂದನು: ಆಗಮಿಸು; ದೇವಮುನಿ: ನಾರದ; ದುಸ್ಸಹ: ಸಹಿಸಲಸಾಧ್ಯವಾದ; ಸಾಕು: ನಿಲ್ಲಿಸು;

ಪದವಿಂಗಡಣೆ:
ಅಹಹ +ಬೆಂದುದು +ಭುವನವ್+ಇದು +ವಿ
ಗ್ರಹದ +ಸಮಯವೆ +ತಮ್ಮ +ಲೀಲೆಗೆ
ಕುಹಕ+ಮತಿಗಳು+ ತಂದರೈ +ತ್ರೈಜಗಕೆ+ ತಲ್ಲಣವ
ರಹವಿದೇನ್+ಎಂದ್+ಅಭ್ರ+ ತಳದಿಂ
ಮಹಿಗೆ+ ಬಂದನು +ದೇವಮುನಿ
ದುಸ್ಸಹವಿದೇನೈ+ ಪಾರ್ಥ +ಹೋಹೋ +ಸಾಕು +ಸಾಕೆಂದ

ಅಚ್ಚರಿ:
(೧) ತ ಕಾರದ ತ್ರಿವಳಿ ಪದ – ತಂದರೈ ತ್ರೈಜಗಕೆ ತಲ್ಲಣವ
(೨) ಹೋಹೋ, ಆಹಹ – ಆಶ್ಚರ್ಯ ಸೂಚಕ ಪದಗಳ ಬಳಕೆ

ಪದ್ಯ ೭: ಐಂದ್ರಾಸ್ತ್ರದ ಪ್ರಭಾವ ಹೇಗಿತ್ತು?

ಮೊದಲೊಳೈಂದ್ರ ಮಹಾಸ್ತ್ರವನು ಹೂ
ಡಿದನು ಹೊಗೆದುದು ಭುವನ ದಿಕ್ಕುಗ
ಳೊದರಿದವು ಪಂಟಿಸಿತು ರವಿರಥ ಗಗನಮಾರ್ಗದಲಿ
ಉದರ್ಧಿಯುದಧಿಯ ತೆರೆಯ ಗಂಟಿ
ಕ್ಕಿದವು ಹರಹರ ಹೇಳಬಾರದ
ಹೊದರು ಹೊಡಿಸಿತು ಕೀಳುಮೇಲಣ ಜಗದ ಹಂತಿಗಳ (ಅರಣ್ಯ ಪರ್ವ, ೧೪ ಸಂಧಿ, ೭ ಪದ್ಯ)

ತಾತ್ಪರ್ಯ:
ಅರ್ಜುನನು ಐಂದ್ರಾಸ್ತ್ರವನ್ನು ಮೊದಲು ಹೂಡಿದನು. ಭೂಮಿಯ ತುಂಬಾ ಹೊಗೆ ತುಂಬಿತು. ದಿಕ್ಕುಗಳೂ ಕೂಗಿಕೊಂಡವು. ಆಕಾಶದಲ್ಲಿ ಸೂರ್ಯನ ರಥವು ಮುಗ್ಗುರಿಸಿತು. ಸಮುದ್ರಗಳ ಅಲಿಗಳು ಗಂಟು ಹಾಕಿಕೊಂಡವು. ಮೇಲು ಮತ್ತು ಕೀಳ ಲೋಕಗಳಲ್ಲಿ ಹೇಳಲಾಗದಮ್ತಹ ಮಬ್ಬು ಮುಸುಕಿತು.

ಅರ್ಥ:
ಮೊದಲು: ಮುಂಚೆ; ಮಹಾಸ್ತ್ರ: ಶ್ರೇಷ್ಠವಾದ ಆಯುಧ; ಹೂಡು: ಅಣಿಗೊಳಿಸು; ಹೊಗೆ: ಧೂಮ; ಭುವನ: ಭೂಮಿ; ದಿಕ್ಕು: ದಿಶೆ; ಒದರು: ಕೊಡಹು, ಜಾಡಿಸು; ಪಂಟಿಸು: ಆಕ್ರಮಿಸು, ಸುತ್ತುವರಿ; ರವಿ: ಸೂರ್ಯ; ರಥ: ಬಂಡಿ; ಗಗನ: ಆಗಸ; ಮಾರ್ಗ: ಹಾದಿ; ಉದಧಿ: ಸಮುದ್ರ; ತೆರೆ: ಅಲೆ; ಗಂಟು: ಸೇರಿಸಿ ಕಟ್ಟಿದುದು, ಕಟ್ಟು; ಹರ: ಶಿವ; ಹೊದರು: ತೊಡಕು, ತೊಂದರೆ; ಹೊದಿಸು: ಮುಚ್ಚು; ಕೀಳುಮೇಲಣ: ಕನಿಷ್ಠ ಶ್ರೇಷ್ಠ; ಜಗ: ಪ್ರಪಂಚ; ಹಂತಿ: ಗುಂಪು;

ಪದವಿಂಗಡಣೆ:
ಮೊದಲೊಳ್+ಐಂದ್ರ +ಮಹಾಸ್ತ್ರವನು +ಹೂ
ಡಿದನು +ಹೊಗೆದುದು +ಭುವನ +ದಿಕ್ಕುಗಳ್
ಒದರಿದವು +ಪಂಟಿಸಿತು +ರವಿ+ರಥ +ಗಗನ+ಮಾರ್ಗದಲಿ
ಉದಧಿ+ಉದಧಿಯ +ತೆರೆಯ +ಗಂಟಿ
ಕ್ಕಿದವು +ಹರಹರ +ಹೇಳಬಾರದ
ಹೊದರು +ಹೊಡಿಸಿತು +ಕೀಳುಮೇಲಣ +ಜಗದ +ಹಂತಿಗಳ

ಅಚ್ಚರಿ:
(೧) ಜೋಡಿ ಪದಗಳು – ಉದಧಿಯುದಧಿ, ಹರಹರ
(೨) ಹ ಕಾರದ ಸಾಲು ಪದಗಳು – ಹರಹರ ಹೇಳಬಾರದ ಹೊದರು ಹೊಡಿಸಿತು