ಪದ್ಯ ೫೬: ದೂತರು ಇಂದ್ರನಿಗೆ ಯಾವುದನ್ನು ತೆರೆಯಲು ಕೇಳಿದರು?

ಪುರದ ಬಾಹೆಯ ಕೋರಡಿಯ ಸಂ
ವರಣೆ ತೆಗೆಯಲಿ ನಿರ್ಭಯದಿ ಸಂ
ಚರಿಸುವುದು ನಂದನದೊಳಗೆ ನಿಮ್ಮದಿಯ ರಾಣಿಯರು
ತರತರದ ಕೊತ್ತಳದ ಕಾಹಿನ
ಸುರಭಟರು ಸುಖ ನಿದ್ರೆಗೈಯಲಿ
ನಿರುತವಿದು ನಿಜನಿಅಳಯದೊಳಗೆಂದುದು ಸುರವ್ರಾತ (ಅರಣ್ಯ ಪರ್ವ, ೧೩ ಸಂಧಿ, ೫೬ ಪದ್ಯ)

ತಾತ್ಪರ್ಯ:
ಊರ ಹೊರಗಿನಲ್ಲಿದ್ದ ನಿರ್ಬಂಧವನ್ನು ತೆರವುಗೊಳಿಸು, ನಿಮ್ಮ ರಾಣಿಯರು ತೋಟದೊಳಗೆ ಭಯವಿಲ್ಲದೆ ವಿಹರಿಸಲಿ. ಕೋಟೆಯ ಬುರುಜಿನ ಕಾವಲುಗಾರರು ತಮ್ಮ ಮನೆಯಲ್ಲಿ ಸುಖ ನಿದ್ರೆ ಮಾಡಲಿ, ಎಂದು ದೂತರು ಹೇಳಿದರು.

ಅರ್ಥ:
ಪುರ: ಊರು; ಬಾಹೆ: ಹೊರಗೆ; ಕೋರಡಿ: ನಿರ್ಬಂಧ, ವೇಗ; ಸಂವರಣೆ: ಕಾಪು, ರಕ್ಷಣೆ ; ತೆಗೆ: ಹೊರತರು; ನಿರ್ಭಯ: ಭಯವಿಲ್ಲದ ಸ್ಥಿತಿ; ಸಂಚರಿಸು: ತಿರುಗಾಟ; ನಂದನ: ತೋಟ; ನಿಮ್ಮಡಿ: ನಿಮ್ಮ ಅಧೀನ; ರಾಣಿ: ಅರಸಿ; ತರ: ವಿಧ; ಕೊತ್ತಳ: ಕೋಟೆ; ಕಾಹು: ರಕ್ಷಣೆ; ಸುರಭಟ: ದೇವತೆಗಳ ಸೈನಿಕ; ಸುಖ: ನೆಮ್ಮದಿ; ನಿದ್ರೆ: ಶಯನ; ನಿರುತ: ಸತ್ಯ, ನಿಶ್ಚಯ; ನಿಜ: ದಿಟ; ನಿಳಯ: ಆಲಯ; ಸುರ: ದೇವತೆ; ವ್ರಾತ: ಗುಂಪು;

ಪದವಿಂಗಡಣೆ:
ಪುರದ+ ಬಾಹೆಯ +ಕೋರಡಿಯ +ಸಂ
ವರಣೆ+ ತೆಗೆಯಲಿ +ನಿರ್ಭಯದಿ+ ಸಂ
ಚರಿಸುವುದು +ನಂದನದೊಳಗೆ+ ನಿಮ್ಮಡಿಯ+ ರಾಣಿಯರು
ತರತರದ +ಕೊತ್ತಳದ +ಕಾಹಿನ
ಸುರಭಟರು +ಸುಖ +ನಿದ್ರೆಗೈಯಲಿ
ನಿರುತವಿದು +ನಿಜನಿಳಯದೊಳಗ್+ಎಂದುದು +ಸುರವ್ರಾತ

ಅಚ್ಚರಿ:
(೧) ಸಂವರಣೆ, ಸಂಚರಿಸು – ‘ಸಂ’ ಪದದ ಬಳಕೆ
(೨) ನಿದ್ರೆಗೈಯಲಿ, ನಿರುತವಿದು, ನಿಜನಿಳಯ, ನಿಮ್ಮಡಿ, ನಿರ್ಭಯ – ನಿ ಕಾರದ ಪದಗಳು

ನಿಮ್ಮ ಟಿಪ್ಪಣಿ ಬರೆಯಿರಿ