ಪದ್ಯ ೫೫: ದೇವತೆಗಳ ಸೇವಕರು ಏನೆಂದು ಹೇಳಿದರು?

ಕಾಲಕೇಯರ ನಗರಿಯಲಿ ದು
ವ್ವಾಳಿಸಿತಲೇ ಮೃತ್ಯುದಿವಿಜರ
ಸೂಳೆಯರು ಸೆರೆಬಿಟ್ಟು ಬಂದರು ಯಕ್ಷಕಿನ್ನರರ
ಕಾಲ ಸಂಕಲೆ ಕಡಿದವಾ ಖಳ
ರೂಳಿಗಕೆ ಕಡೆಯಾಯ್ತು ಸುರಪುರ
ದಾಳುವೇರಿಯ ಕಾಹುತೆಗೆಯಲಿಯೆಂದರಾ ಚರರು (ಅರಣ್ಯ ಪರ್ವ, ೧೩ ಸಂಧಿ, ೫೫ ಪದ್ಯ)

ತಾತ್ಪರ್ಯ:
ದೇವತೆಗಳ ಸೇವಕರು ಇಂದ್ರನ ಬಳಿ ನಿವೇದಿಸಿದರು. ಕಾಲಕೇಯರ ರಾಜಧಾನಿಯಲ್ಲಿ ಮೃತ್ಯುವು ನುಗ್ಗಿತು. ಅಪ್ಸರೆಅ ಸ್ತ್ರೀಯರು ಸೆರೆಯಿಂದ ಬಿಡುಗಡೆಯಾದರು. ದೇವತೆಗಳ ಕಾಲ ಸರಪಳಿಗಳು ಕಡಿದು ಹೋದವು. ಅವರ ಜೀತದ ಬಾಳು ಮುಗಿಯಿತು. ಇನ್ನು ಅಮರಾವತಿಯ ಕೋಟೆಯ ಕಾವಲನ್ನು ತೆಗೆಸಿಬಿಡು ಎಂದು ಹೇಳಿದರು.

ಅರ್ಥ:
ನಗರ: ಊರು; ದುವ್ವಾಳಿಸು: ಕುದುರೆ ಸವಾರಿ ಮಾಡು; ಮೃತ್ಯು: ಸಾವು; ದಿವಿಜ: ದೇವತೆ, ಸುರರು; ದಿವಿಜರ ಸೂಳೆಯರು: ಅಪ್ಸರೆ; ಸೆರೆ: ಬಂಧನ; ಬಿಟ್ಟು: ತೊರೆದು; ಬಂದರು: ಆಗಮಿಸು; ಕಾಲ: ಸಮಯ; ಸಂಕಲೆ: ಸೆರೆ, ಬಂಧನ; ಖಳ: ದುಷ್ಟ; ಊಳಿಗ:ಕೆಲಸ, ಕಾರ್ಯ; ಕಡೆ: ಕೊನೆ; ಸುರಪುರ: ಅಮರಾವತಿ; ಆಳುವೇರಿ: ಕೋಟೆಯ ಸುತ್ತಣ ಗೋಡೆ; ಕಾಹು: ರಕ್ಷಿಸುವವ; ತೆಗೆ: ಹೊರತರು; ಚರ: ಸೇವಕ;

ಪದವಿಂಗಡಣೆ:
ಕಾಲಕೇಯರ +ನಗರಿಯಲಿ +ದು
ವ್ವಾಳಿಸಿತಲೇ +ಮೃತ್ಯು+ದಿವಿಜರ
ಸೂಳೆಯರು +ಸೆರೆಬಿಟ್ಟು +ಬಂದರು +ಯಕ್ಷ+ಕಿನ್ನರರ
ಕಾಲ +ಸಂಕಲೆ +ಕಡಿದವ್+ಆ+ ಖಳರ್
ಊಳಿಗಕೆ +ಕಡೆಯಾಯ್ತು +ಸುರಪುರದ್
ಆಳುವೇರಿಯ+ ಕಾಹು+ತೆಗೆಯಲಿ+ಎಂದರಾ +ಚರರು

ಅಚ್ಚರಿ:
(೧) ಕಾಲಕೇಯರು ಸೋತರು ಎಂದು ಹೇಳುವ ಪರಿ – ಕಾಲಕೇಯರ ನಗರಿಯಲಿ ದು
ವ್ವಾಳಿಸಿತಲೇ ಮೃತ್ಯು
(೨) ಅಪ್ಸರೆಯರನ್ನು ಕರೆಯುವ ಪರಿ – ದಿವಿಜರ ಸೂಳೆಯರು

ನಿಮ್ಮ ಟಿಪ್ಪಣಿ ಬರೆಯಿರಿ