ಪದ್ಯ ೧೨: ರಾಕ್ಷಸರ ಧೈರ್ಯವೇಕೆ ಉಡುಗಿತು?

ಹೊಲಬಿಗರು ಹರಿದರು ಸುರೇಂದ್ರನ
ದಳದ ಮಾನ್ಯರ ಸನ್ನೆಯಲಿ ದಿಗು
ವಳಯದಗಲದಲೊಲೆವ ಲಲಿತಚ್ಛತ್ರಚಮರಗಳ
ಜಲಧಿ ಜಲಧಿಯ ಹಳಚಲಗಿದ
ವ್ವಳಿಪ ವಾದ್ಯ ಧ್ವನಿಯ ಡಾವರ
ಸೆಳೆದುದಸುರರ ಧುರದ ಧೈರ್ಯವನರಸ ಕೇಳೆಂದ (ಅರಣ್ಯ ಪರ್ವ, ೧೩ ಸಂಧಿ, ೧೨ ಪದ್ಯ)

ತಾತ್ಪರ್ಯ:
ಇಂದ್ರ ಸೈನ್ಯದ ಮುಖಂಡರ ಸನ್ನೆಯಂತೆ ದಾರಿಯನ್ನು ಹುಡುಕುವವರು ಮುಂದಾದರು. ಆ ಸೈನ್ಯದ ಛತ್ರ ಚಾಮರಗಳು ದಿಕ್ತಟವನ್ನೇ ತುಂಬಿದವು. ಸಮುದ್ರ ಸಮುದ್ರದೊಡನೆ ಡಿಕ್ಕಿ ಹೊಡೆದರೆ ಆಗಬಹುದಾದ ಸದ್ದನ್ನು ದೇವ ಸೈನ್ಯದ ವಾದ್ಯ ಘೋಷವು ಮೀರಿಸಿತ್ತು. ಈ ಸನ್ನಾಹವನ್ನು ಕಂಡು ರಾಕ್ಷಸರು ಧೈರ್ಯ ಉಡುಗಿತು.

ಅರ್ಥ:
ಹೊಲಬು: ದಾರಿ, ಪಥ; ಹರಿ: ಚದುರು, ದಾಳಿ ಮಾಡು; ಸುರೇಂದ್ರ: ಇಂದ್ರ; ದಳ: ಸೈನ್ಯ; ಮಾನ್ಯ: ಮನ್ನಣೆ, ಪೂಜ್ಯ; ಸನ್ನೆ: ಗುರುತು; ದಿಗು: ದಿಕ್ಕು; ವಳಯ: ಪರಿಧಿ; ಅಗಲ: ವಿಸ್ತಾರ; ಒಲೆವು: ಪ್ರೀತಿ; ಲಲಿತ: ಚೆಲುವು; ಛತ್ರ: ಕೊಡೆ; ಚಾಮರ: ಚಮರ ಮೃಗದ ಬಾಲದ ಕೂದಲಿನಿಂದ ತಯಾರಿಸಿದ ಕುಂಚ; ಜಲಧಿ: ಸಾಗರ; ಹಳಚು: ತಾಗು, ಬಡಿ; ಅವ್ವಳಿಸು: ಆರ್ಭಟಿಸು; ವಾದ್ಯ: ಸಂಗೀತದ ಸಾಧನ; ಧ್ವನಿ: ರವ, ಶಬ್ದ; ಡಾವರ:ಭಯಂಕರವಾದ; ಸೆಳೆ: ಆಕರ್ಷಿಸು; ಅಸುರ: ರಾಕ್ಷಸ; ಧುರ: ಯುದ್ಧ, ಕಾಳಗ; ಧೈರ್ಯ: ಎದೆಗಾರಿಕೆ, ಕೆಚ್ಚು; ಅರಸ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಹೊಲಬಿಗರು+ ಹರಿದರು +ಸುರೇಂದ್ರನ
ದಳದ +ಮಾನ್ಯರ +ಸನ್ನೆಯಲಿ +ದಿಗು
ವಳಯದ್+ಅಗಲದ್+ಒಲೆವ +ಲಲಿತ+ಚ್ಛತ್ರ+ಚಮರಗಳ
ಜಲಧಿ+ ಜಲಧಿಯ+ ಹಳಚಲ್+ಅಗಿದ್
ಅವ್ವಳಿಪ +ವಾದ್ಯ +ಧ್ವನಿಯ +ಡಾವರ
ಸೆಳೆದುದ್+ಅಸುರರ+ ಧುರದ +ಧೈರ್ಯವನ್+ಅರಸ +ಕೇಳೆಂದ

ಅಚ್ಚರಿ:
(೧) ಸುರರ ಸೈನ್ಯದ ವಿಸ್ತಾರ – ದಿಗುವಳಯದಗಲದಲೊಲೆವ ಲಲಿತಚ್ಛತ್ರಚಮರಗಳ

ನಿಮ್ಮ ಟಿಪ್ಪಣಿ ಬರೆಯಿರಿ