ಜೀಯ ಬಲೆಗಳ ತೆಗೆಸು ನಡೆ ನಿ
ರ್ದಾಯದಲಿ ನಿಮ್ಮಡಿಯ ಬೇಟೆಗೆ
ರಾಯ ಮೃಗವೈತಂದವಿವೆ ನಗರೋಪಕಂಠದಲಿ
ಹೋಯಿತಸುರರ ಕೈಯ ಹೊಸದಿರು
ಪಾಯ ಪಾಯವಧಾರೆನಲು ಖಳ
ರಾಯಕೇಳುತ ಮೃಗವದಾವುದೆನುತ್ತ ಬೆಸಗೊಂಡ (ಅರಣ್ಯ ಪರ್ವ, ೧೩ ಸಂಧಿ, ೧೫ ಪದ್ಯ)
ತಾತ್ಪರ್ಯ:
ಜೀಯ ಬೇಟೆಗೆ ರಾಜಮೃಗಗಳು ಬಂದು ನಗರದ ಸಮೀಪದಲ್ಲಿವೆ. ನೀನು ತಪ್ಪದೆ ಬಲೆಗಳನ್ನು ತೆಗೆಸು, ಬೇಟೆಗೆ ಹೊರಡು. ಅಸುರರು ಆ ಮೃಗಗಳನ್ನು ಇಕ್ಕಟ್ಟಿನಲ್ಲಿ ಸಿಕ್ಕಿ ಹಾಸಿಸುವ ಕಷ್ಟವೇ ತಪ್ಪಿತು ಎಚ್ಚರಿಕೆ ಎಂದು ಹೇಳಲು, ರಾಕ್ಷಸ ರಾಜನು ಯಾವ ಮೃಗ ಬಂದಿದೆ ಎಂದು ಕೇಳಿದನು.
ಅರ್ಥ:
ಜೀಯ: ಒಡೆಯ; ಬಲೆ: ಜಾಲ, ಬಂಧನ; ತೆಗೆ: ಹೊರತರು; ನಡೆ; ಚಲಿಸು; ನಿರ್ದಾಯದ: ಅಖಂಡ; ನಿಮ್ಮಡಿ: ನಿಮ್ಮ ಪಾದ; ಬೇಟೆ: ಕ್ರೂರ ಮೃಗಗಳನ್ನು ಕೊಲ್ಲುವ ಕ್ರೀಡೆ; ರಾಯ: ರಾಜ; ಮೃಗ: ಪ್ರಾಣಿ; ಐತರು: ಬಂದು ಸೇರು; ನಗರ: ಊರು; ಉಪಕಂಠ: ಹತ್ತಿರ; ಹೋಯಿತು:ಕಳೆದುಕೊಳ್ಳು; ಅಸುರ: ರಾಕ್ಷಸ; ಕೈಯ: ಹಸ್ತ; ಹೊಸೆ: ಮಥಿಸು; ಉಪಾಯ: ಯುಕ್ತಿ; ಪಾಯವಧಾರು: ಎಚ್ಚರಿಕೆ; ಖಳರಾಯ: ದುಷ್ಟರಾಜ; ಕೇಳು: ಆಲಿಸು;ಬ ಬೆಸ: ಕೆಲಸ, ಕಾರ್ಯ;
ಪದವಿಂಗಡಣೆ:
ಜೀಯ+ ಬಲೆಗಳ+ ತೆಗೆಸು+ ನಡೆ +ನಿ
ರ್ದಾಯದಲಿ +ನಿಮ್ಮಡಿಯ +ಬೇಟೆಗೆ
ರಾಯ +ಮೃಗವ್+ಐತಂದವ್+ಇವೆ +ನಗರೋಪಕಂಠದಲಿ
ಹೋಯಿತ್+ಅಸುರರ+ ಕೈಯ +ಹೊಸದಿರ್
ಉಪಾಯ +ಪಾಯವಧಾರೆನಲು +ಖಳ
ರಾಯ+ಕೇಳುತ +ಮೃಗವದ್+ಆವುದೆನುತ್ತ+ ಬೆಸಗೊಂಡ
ಅಚ್ಚರಿ:
(೧) ಜೀಯ, ರಾಯ – ಸಮನಾರ್ಥಕ ಪದ
(೨) ನ ಕಾರದ ತ್ರಿವಳಿ ಪದ – ನಡೆ ನಿರ್ದಾಯದಲಿ ನಿಮ್ಮಡಿಯ