ಪದ್ಯ ೧೨: ಕದಳೀವನದಲ್ಲಿ ಯಾರು ಮಲಗಿದ್ದರು?

ಆ ಮಹಾದ್ರಿಯ ತಪ್ಪಲಲಿ ನಿ
ಸ್ಸೀಮ ಕದಳೀಷಂಡದಲಿ ರಘು
ರಾಮನಾಮ ಸುಧಾಭಿಷೇಕ ಸಮಗ್ರ ಸೌಖ್ಯದಲಿ
ಭೀಮ ವಿಕ್ರಮನಿದ್ದನೀಯು
ದ್ದಾಮ ಸಿಂಹಧ್ವನಿಗೆ ನಿದ್ರಾ
ತಾಮಸದ ತನಿಮದವಡಗೆ ದಂದೆರೆದನಾ ಹನುಮ (ಅರಣ್ಯ ಪರ್ವ, ೧೧ ಸಂಧಿ, ೧೨ ಪದ್ಯ)

ತಾತ್ಪರ್ಯ:
ಆ ಮಹಾಪರ್ವತದ ತಪ್ಪಲಿನಲ್ಲಿದ್ದ ಮೇರೆಯಿಲ್ಲದ ಬಾಳೆಯ ವನದಲ್ಲಿ ಶ್ರೀರಾಮನಾಮವನ್ನು ಜಪಿಸುತ್ತಾ, ಅಮೃತೋಪಮ ಸುಖವನ್ನನುಭವಿಸುತ್ತಾ, ಮಹಾಪರಾಕ್ರಮಿಯಾದ ಆಂಜನೇಯನು ಕುಳಿತಿದ್ದನು. ಭೀಮನ ಸಿಂಹಗರ್ಜನೆಗೆ ಆತನ ನಿದ್ರೆಯ ಮದವು ಅಡಗಿ ಹನುಮಂತನು ಕಣ್ಣನ್ನು ತೆರೆದನು.

ಅರ್ಥ:
ಅದ್ರಿ: ಬೆಟ್ಟ; ತಪ್ಪಲು: ಬೆಟ್ಟದ ಹತ್ತಿರದ ಸಮತಟ್ಟಿನ ಪ್ರದೇಶ; ನಿಸ್ಸೀಮ: ಅತಿಶೂರ, ಪರಾಕ್ರಮಿ; ಕದಳೀ: ಬಾಳೆ; ಷಂಡ: ಅಡವಿ; ನಾಮ: ಹೆಸರು; ಸುಧ: ಅಮೃತ; ಅಭಿಷೇಕ: ಮಂಗಳಸ್ನಾನ; ಸಮಗ್ರ: ಎಲ್ಲಾ; ಸೌಖ್ಯ: ಸುಖ, ನೆಮ್ಮದಿ; ಭೀಮ: ಭಯಂಕರ, ಭೀಕರ; ವಿಕ್ರಮ: ಶೂರ, ಸಾಹಸ; ಉದ್ದಾಮ: ಶ್ರೇಷ್ಠ; ಸಿಂಹಧ್ವನಿ: ಗರ್ಜನೆ; ನಿದ್ರೆ: ಶಯನ; ತಾಮಸ: ಜಡತೆ; ತನಿ: ಹೆಚ್ಚಾಗು, ಅತಿಶಯವಾಗು; ಮದ: ಮತ್ತು, ಅಮಲು, ಸೊಕ್ಕು; ಅಡಗು: ಮರೆಯಾಗು; ಕಂದೆರೆ: ಕಣ್ಣನ್ನು ಬಿಡು; ಹನುಮ: ಆಂಜನೇಯ;

ಪದವಿಂಗಡಣೆ:
ಆ+ ಮಹಾದ್ರಿಯ +ತಪ್ಪಲಲಿ+ ನಿ
ಸ್ಸೀಮ +ಕದಳೀ+ಷಂಡದಲಿ +ರಘು
ರಾಮನಾಮ +ಸುಧಾಭಿಷೇಕ+ ಸಮಗ್ರ +ಸೌಖ್ಯದಲಿ
ಭೀಮ +ವಿಕ್ರಮನಿದ್ದನ್+ಈ+
ಉದ್ದಾಮ +ಸಿಂಹಧ್ವನಿಗೆ +ನಿದ್ರಾ
ತಾಮಸದ+ ತನಿಮದವ್+ಅಡಗೆ +ಕಂದೆರೆದನಾ +ಹನುಮ

ಅಚ್ಚರಿ:
(೧) ಹನುಮನು ಎಚ್ಚರವಾದ ಪರಿ – ಈ ಉದ್ದಾಮ ಸಿಂಹಧ್ವನಿಗೆ ನಿದ್ರಾತಾಮಸದ ತನಿಮದವಡಗೆ ದಂದೆರೆದನಾ ಹನುಮ

ನಿಮ್ಮ ಟಿಪ್ಪಣಿ ಬರೆಯಿರಿ