ಪದ್ಯ ೧೫: ಹನುಮಂತ ಭೀಮನಲ್ಲಿ ಯಾವ ಪ್ರಶ್ನೆಯನ್ನು ಕೇಳಿದ?

ಮುರಿಯದಂತಿರೆ ಲಘುವಿನಲಿ ಹೆ
ಮ್ಮರನನೊಯ್ಯನೆ ನೆಮ್ಮಿ ಕುಳ್ಳಿ
ರ್ದರಿದಿಶಾಪಟ ನುಡಿಸಿದನು ಪವಮಾನ ನಂದನನ
ಭರವಿದೆಲ್ಲಿಗೆ ಮರ್ತ್ಯನೋ ಖೇ
ಚರನೊ ದೈತ್ಯನೊದಿವಿಜನೋಕಿ
ನ್ನರನೊ ನೀನಾರೆಂದು ಭೀಮನು ನುಡಿಸಿದನು ಹನುಮ (ಅರಣ್ಯ ಪರ್ವ, ೧೧ ಸಂಧಿ, ೧೫ ಪದ್ಯ)

ತಾತ್ಪರ್ಯ:
ಆ ಮೇಲೆ ಹನುಮಂತನು ಮಗ್ಗುಲಾಗಿ ಒಂದು ದೊಡ್ಡ ಮರಕ್ಕೆ ಬೆನ್ನು ನೀಡಿ ಸ್ವಲ್ಪ ಆ ಮರವು ಬೀಳದಂತೆ, ಅವನ ದೇಹವು ತಗುಲಿರುವಂತೆ ಕುಳಿತುಕೊಂಡನು. ವೇಗವಾಗಿ ಬರುತ್ತಿದ್ದ ಭೀಮನನ್ನು ಕಂಡು ಎಲ್ಲಿಗೆ ಹೋಗುತ್ತಿರುವೆ, ನೀನು ಮನುಷ್ಯನೋ, ಖೇಚರನೋ, ರಾಕ್ಷಸನೋ, ದೇವನೋ, ಕಿಂಪುರುಷನೋ, ನೀನಾರೆಂದು ಹನುಮನು ಪ್ರಶ್ನಿಸಿದನು.

ಅರ್ಥ:
ಮುರಿ: ಸೀಳು; ಲಘು: ಹಗುರ; ಹೆಮ್ಮರ: ದೊಡ್ಡ ವೃಕ್ಷ; ಒಯ್ಯನೆ: ಮೆಲ್ಲಗೆ; ನೆಮ್ಮು: ಆಧಾರವನ್ನು ಪಡೆ; ಕುಳ್ಳಿರ್ದ: ಆಸೀನನಾದ; ಅರಿ: ವೈರಿ; ದಿಶಾಪಟ: ಎಲ್ಲಾ ದಿಕ್ಕುಗಳಿಗೆ ಓಡಿಸುವವ; ನುಡಿಸು: ಮಾತಾಡು; ಪವಮಾನ: ಗಾಳಿ, ವಾಯು; ನಂದನ: ಮಗ; ಭರ: ರಭಸ; ಮರ್ತ್ಯ: ಮನುಷ್ಯ; ಖೇಚರ: ಗಂಧರ್ವ; ದೈತ್ಯ: ರಾಕ್ಷಸ; ದಿವಿಜ: ಸುರ, ದೇವತೆ; ಕಿನ್ನರ: ಕಿಂಪುರುಷ; ನುಡಿಸು: ಮಾತಾಡು;

ಪದವಿಂಗಡಣೆ:
ಮುರಿಯದಂತಿರೆ +ಲಘುವಿನಲಿ +ಹೆ
ಮ್ಮರನನ್+ಒಯ್ಯನೆ +ನೆಮ್ಮಿ +ಕುಳ್ಳಿರ್ದ್
ಅರಿದಿಶಾಪಟ+ ನುಡಿಸಿದನು +ಪವಮಾನ +ನಂದನನ
ಭರವಿದ್+ಎಲ್ಲಿಗೆ +ಮರ್ತ್ಯನೋ +ಖೇ
ಚರನೊ+ ದೈತ್ಯನೊ+ದಿವಿಜನೋ+ಕಿ
ನ್ನರನೊ +ನೀನಾರೆಂದು +ಭೀಮನು +ನುಡಿಸಿದನು +ಹನುಮ

ಅಚ್ಚರಿ:
(೧) ಹನುಮನನ್ನು ಕರೆದ ಪರಿ – ಅರಿದಿಶಾಪಟ
(೨) ಹಲವು ಬಗೆಯ ಜನರ ಪರಿಚಯ – ಮರ್ತ್ಯ, ಖೇಚರ, ದೈತ್ಯ, ದಿವಿಜ, ಕಿನ್ನರ

ಪದ್ಯ ೧೪: ಹನುಮನು ಭೀಮನ ಬಲವನ್ನು ಪರೀಕ್ಷಿಸಲು ಏನು ಮಾಡಿದ?

ನಿರಿನಿರಿಲು ನಿರಿಲೆನುತ ಹೆಮ್ಮರ
ಮುರಿದುದಾತನ ರೋಮ ಸೋಂಕಿನ
ಲಿರಿಕಿಲಾದುದು ಧರಣಿಯನಿಲಜ ಮುರಿದ ಮಗ್ಗುಲಲಿ
ಉರುವ ಬಾಲವ ಬೆಳೆಸಿ ದಾರಿಯ
ತೆರಹುಗೊಡದೆಡೆಯೊಡ್ಡಿ ಮನುಜನ
ಮುರುಕವನು ತಾ ಕಾಂಬೆನಿನ್ನೆನುತಿರ್ದನಾ ಹನುಮ (ಅರಣ್ಯ ಪರ್ವ, ೧೧ ಸಂಧಿ, ೧೪ ಪದ್ಯ)

ತಾತ್ಪರ್ಯ:
ಹನುಮಂತನು ತನ್ನ ಬಾಲವನ್ನು ಬೆಳಸಿದನು. ಆ ಬಾಲದ ಮೇಲಿನ ಕೂದಲುಗಳಿಗೆ ತಾಕಿ ದೊಡ್ಡ ಮರಗಳು ನಿರಿ ನಿರಿ ಎಂದು ಸದ್ದು ಮಾಡುತ್ತಾ ಉರುಳಿದವು. ಬಾಲವು ಬೆಳೆದ ಚಾಚಿದಾಗ ಭೂಮಿಯು ಇಕ್ಕಟ್ಟಾಯಿತು. ಹನುಮಂತನು ಈ ಮನುಷ್ಯನ ಸತ್ವ ಸಾಹಸಗಳನ್ನು ನೋಡೋಣ ಎಂದು ಕೊಂಡನು.

ಅರ್ಥ:
ಹೆಮ್ಮರ: ದೊಡ್ಡ ವೃಕ್ಷ; ಮುರಿ: ಸೀಳು; ರೋಮ: ಕೂದಲು; ಸೋಂಕು: ತಾಗು; ಇರಿಕು: ಇಕ್ಕಟ್ಟು; ಧರಣಿ: ಭೂಮಿ; ಅನಿಲಜ: ವಾಯುಪುತ್ರ (ಭೀಮ); ಮಗ್ಗುಲ: ಪಕ್ಕ; ಉರುವ: ಶ್ರೇಷ್ಠ; ಬಾಲ: ಪುಚ್ಛ; ಬೆಳೆಸು: ವೃದ್ಧಿಸು, ದೊಡ್ಡದಾಗು; ದಾರಿ: ಮಾರ್ಗ; ತೆರಹು: ಬಿಚ್ಚು, ತೆರೆ; ಎಡೆ: ಷ್ಟವಾಗಿ ಕಾಣು, ನಡುವೆ; ಮನುಜ: ಮನುಷ್ಯ; ಮುರುಕ: ಬಿಂಕ, ಬಿನ್ನಾಣ, ಸೊಕ್ಕು; ಕಾಂಬೆ: ನೋಡು; ಹನುಮ: ಆಂಜನೇಯ;

ಪದವಿಂಗಡಣೆ:
ನಿರಿನಿರಿಲು +ನಿರಿಲೆನುತ +ಹೆಮ್ಮರ
ಮುರಿದುದ್+ಆತನ +ರೋಮ +ಸೋಂಕಿನಲ್
ಇರಿಕಿಲಾದುದು +ಧರಣಿ+ಅನಿಲಜ+ ಮುರಿದ+ ಮಗ್ಗುಲಲಿ
ಉರುವ+ ಬಾಲವ +ಬೆಳೆಸಿ+ ದಾರಿಯ
ತೆರಹುಗೊಡದ್+ಎಡೆಯೊಡ್ಡಿ+ ಮನುಜನ
ಮುರುಕವನು +ತಾ +ಕಾಂಬೆನಿನ್+ಎನುತಿರ್ದನಾ+ ಹನುಮ

ಅಚ್ಚರಿ:
(೧) ಮರಮುರಿಯುವುದನ್ನು ಹೇಳುವ ಪರಿ – ನಿರಿನಿರಿಲು ನಿರಿಲೆನುತ ಹೆಮ್ಮರ ಮುರಿದುದಾತನ ರೋಮ ಸೋಂಕಿನಲ್

ಪದ್ಯ ೧೩: ಹನುಮನೇಕೆ ಮಿಡುಕಿದನು?

ಏನಿದೆತ್ತಣ ರಭಸವೀ ಗಿರಿ
ಸಾನುವಿದಮಾನುಷ ವಿಹಾರ
ಸ್ಥಾನವಿವನಾರೋ ಮಹಾದೇವಾ ಪ್ರಚಂಡನಲ
ಈ ನಿನದವೆಮ್ಮಂದಿನಗ್ಗದ
ವಾನರರ ಗರ್ಜನೆಗೆ ಗುರುವಾ
ಯ್ತೇನನೆಂಬೆನೆನುತ್ತ ಮೆಲ್ಲನೆ ಮಿಡುಕಿದನು ಹನುಮ (ಅರಣ್ಯ ಪರ್ವ, ೧೧ ಸಂಧಿ, ೧೩ ಪದ್ಯ)

ತಾತ್ಪರ್ಯ:
ಭೀಮನ ಗರ್ಜನೆಯನ್ನು ಕೇಳಿ ಹನುಮಂತನು, ಈ ಸದ್ದಿನ ರಭಸ ಇಲ್ಲಿಗೆ ಎಲ್ಲಿಂದ ಬಂತು? ಈ ಪರ್ವತ ಪ್ರದೇಶದ ಅರಣ್ಯವು ಮನುಷ್ಯರು ಓಡಾಡುವ ಪ್ರದೇಶವಿಲ್ಲ. ಹೀಗೆ ಗರ್ಜಿಸುವ ಇವನಾರೋ ಮಹಾ ಪ್ರಚಂಡನಿರಬೇಕು, ಹಿಂದೆ ತ್ರೇತಾಯುಗದಲ್ಲಿ ನನ್ನೊಡನಿದ್ದ ವಾನರರ ಗರ್ಜನೆಗೆ ಇವನ ಗರ್ಜನೆಯು ಗುರುವಿನಂತಿದೆ, ಎಂದು ಚಿಂತಿಸುತ್ತಾ ಮಿಡುಕಿದನು.

ಅರ್ಥ:
ರಭಸ: ವೇಗ; ಗಿರಿ: ಬೆಟ್ಟ; ಸಾನು: ಬೆಟ್ಟದ ಮೇಲಿನ ಸಮತಲವಾದ ಪ್ರದೇಶ; ಮಾನುಷ: ಮನುಷ್ಯರು, ಜನರು; ಪ್ರಚಂಡ: ಭಯಂಕರ, ನಿಪುಣ; ನಿನದ: ಶಬ್ದ; ಅಗ್ಗ: ಶ್ರೇಷ್ಠ; ವಾನರ: ಕಪಿ, ಹನುಮ; ಗರ್ಜನೆ: ಗಟ್ಟಿಯಾದ ಕೂಗು, ಆರ್ಭಟ; ಗುರು: ದೊಡ್ಡ; ಮೆಲ್ಲನೆ: ನಿಧಾನ; ಮಿಡುಕು: ಅಲುಗಾಟ, ಚಲನೆ; ಹನುಮ: ಆಂಜನೇಯ;

ಪದವಿಂಗಡಣೆ:
ಏನಿದ್+ಎತ್ತಣ +ರಭಸವ್+ಈ+ ಗಿರಿ
ಸಾನುವಿದ+ಮಾನುಷ +ವಿಹಾರ
ಸ್ಥಾನವ್+ಇವನ್+ಆರೋ +ಮಹಾದೇವಾ +ಪ್ರಚಂಡನಲ
ಈ +ನಿನದವ್+ಎಮ್ಮಂದಿನ್+ಅಗ್ಗದ
ವಾನರರ+ ಗರ್ಜನೆಗೆ+ ಗುರುವಾಯ್ತ್
ಏನನೆಂಬೆನ್+ಎನುತ್ತ +ಮೆಲ್ಲನೆ +ಮಿಡುಕಿದನು +ಹನುಮ

ಅಚ್ಚರಿ:
(೧) ಭೀಮನ ಗರ್ಜನೆಯನ್ನು ವಿವರಿಸುವ ಪರಿ – ಈ ನಿನದವೆಮ್ಮಂದಿನಗ್ಗದವಾನರರ ಗರ್ಜನೆಗೆ ಗುರುವಾಯ್ತ್

ಪದ್ಯ ೧೨: ಕದಳೀವನದಲ್ಲಿ ಯಾರು ಮಲಗಿದ್ದರು?

ಆ ಮಹಾದ್ರಿಯ ತಪ್ಪಲಲಿ ನಿ
ಸ್ಸೀಮ ಕದಳೀಷಂಡದಲಿ ರಘು
ರಾಮನಾಮ ಸುಧಾಭಿಷೇಕ ಸಮಗ್ರ ಸೌಖ್ಯದಲಿ
ಭೀಮ ವಿಕ್ರಮನಿದ್ದನೀಯು
ದ್ದಾಮ ಸಿಂಹಧ್ವನಿಗೆ ನಿದ್ರಾ
ತಾಮಸದ ತನಿಮದವಡಗೆ ದಂದೆರೆದನಾ ಹನುಮ (ಅರಣ್ಯ ಪರ್ವ, ೧೧ ಸಂಧಿ, ೧೨ ಪದ್ಯ)

ತಾತ್ಪರ್ಯ:
ಆ ಮಹಾಪರ್ವತದ ತಪ್ಪಲಿನಲ್ಲಿದ್ದ ಮೇರೆಯಿಲ್ಲದ ಬಾಳೆಯ ವನದಲ್ಲಿ ಶ್ರೀರಾಮನಾಮವನ್ನು ಜಪಿಸುತ್ತಾ, ಅಮೃತೋಪಮ ಸುಖವನ್ನನುಭವಿಸುತ್ತಾ, ಮಹಾಪರಾಕ್ರಮಿಯಾದ ಆಂಜನೇಯನು ಕುಳಿತಿದ್ದನು. ಭೀಮನ ಸಿಂಹಗರ್ಜನೆಗೆ ಆತನ ನಿದ್ರೆಯ ಮದವು ಅಡಗಿ ಹನುಮಂತನು ಕಣ್ಣನ್ನು ತೆರೆದನು.

ಅರ್ಥ:
ಅದ್ರಿ: ಬೆಟ್ಟ; ತಪ್ಪಲು: ಬೆಟ್ಟದ ಹತ್ತಿರದ ಸಮತಟ್ಟಿನ ಪ್ರದೇಶ; ನಿಸ್ಸೀಮ: ಅತಿಶೂರ, ಪರಾಕ್ರಮಿ; ಕದಳೀ: ಬಾಳೆ; ಷಂಡ: ಅಡವಿ; ನಾಮ: ಹೆಸರು; ಸುಧ: ಅಮೃತ; ಅಭಿಷೇಕ: ಮಂಗಳಸ್ನಾನ; ಸಮಗ್ರ: ಎಲ್ಲಾ; ಸೌಖ್ಯ: ಸುಖ, ನೆಮ್ಮದಿ; ಭೀಮ: ಭಯಂಕರ, ಭೀಕರ; ವಿಕ್ರಮ: ಶೂರ, ಸಾಹಸ; ಉದ್ದಾಮ: ಶ್ರೇಷ್ಠ; ಸಿಂಹಧ್ವನಿ: ಗರ್ಜನೆ; ನಿದ್ರೆ: ಶಯನ; ತಾಮಸ: ಜಡತೆ; ತನಿ: ಹೆಚ್ಚಾಗು, ಅತಿಶಯವಾಗು; ಮದ: ಮತ್ತು, ಅಮಲು, ಸೊಕ್ಕು; ಅಡಗು: ಮರೆಯಾಗು; ಕಂದೆರೆ: ಕಣ್ಣನ್ನು ಬಿಡು; ಹನುಮ: ಆಂಜನೇಯ;

ಪದವಿಂಗಡಣೆ:
ಆ+ ಮಹಾದ್ರಿಯ +ತಪ್ಪಲಲಿ+ ನಿ
ಸ್ಸೀಮ +ಕದಳೀ+ಷಂಡದಲಿ +ರಘು
ರಾಮನಾಮ +ಸುಧಾಭಿಷೇಕ+ ಸಮಗ್ರ +ಸೌಖ್ಯದಲಿ
ಭೀಮ +ವಿಕ್ರಮನಿದ್ದನ್+ಈ+
ಉದ್ದಾಮ +ಸಿಂಹಧ್ವನಿಗೆ +ನಿದ್ರಾ
ತಾಮಸದ+ ತನಿಮದವ್+ಅಡಗೆ +ಕಂದೆರೆದನಾ +ಹನುಮ

ಅಚ್ಚರಿ:
(೧) ಹನುಮನು ಎಚ್ಚರವಾದ ಪರಿ – ಈ ಉದ್ದಾಮ ಸಿಂಹಧ್ವನಿಗೆ ನಿದ್ರಾತಾಮಸದ ತನಿಮದವಡಗೆ ದಂದೆರೆದನಾ ಹನುಮ

ಪದ್ಯ ೧೧: ಭೀಮನ ಗರ್ಜನೆ ಹೇಗಿತ್ತು?

ಬಿರಿದವದ್ರಿಗಳನಿಲಸುತನು
ಬ್ಬರದ ಬೊಬ್ಬೆಗೆ ಮಿಕ್ಕ ಮೃಗತತಿ
ಶರಭ ಶಾರ್ದೂಲಂಗಳಿಲ್ಲ ವಿಲೋಚನಾಂತ್ಯದಲಿ
ಮರಗಿರನ ಮೃಗಗಿಗನ ಪಾಡೇ
ನರಸ ಭೀಮನ ದನಿಗೆ ಬೆಚ್ಚದೆ
ಗಿರಿಗುಹೆಗಳೇ ಮಲೆತು ನಿಂತವು ದನಿಗೆ ದನಿಗೂಡುತ (ಅರಣ್ಯ ಪರ್ವ, ೧೧ ಸಂಧಿ, ೧೧ ಪದ್ಯ)

ತಾತ್ಪರ್ಯ:
ಭೀಮನ ಬೊಬ್ಬೆಗೆ ಬೆಟ್ಟಗಳು ಬಿರಿದವು. ಶರಭ, ಹುಲಿ ಮೊದಲಾದ ಪ್ರಾಣಿಗಳು ಕಣ್ಣಿಗೆ ಕಾಣದಂತೆ ಓಡಿದವು. ಜನಮೇಜಯ ರಾಜ ಇನ್ನು ಮರಗಿರ, ಮೃಗಗಿಗಳ ಪಾಡೇನು? ಭೀಮನ ಗರ್ಜನೆಗೆ ಬೆಟ್ಟದ ಗುಹೆಗಳೇ ಪ್ರತಿಧ್ವನಿಸುತ್ತಾ ನಿಂತವು.

ಅರ್ಥ:
ಬಿರಿ: ಬಿರುಕು, ಸೀಳು; ಅದ್ರಿ: ಬೆಟ್ಟ; ಅನಿಲಸುತ: ವಾಯುಪುತ್ರ (ಭೀಮ); ಉಬ್ಬರ: ಅತಿಶಯ; ಬೊಬ್ಬೆ: ಕೂಗು; ಮಿಕ್ಕ: ಉಳಿದ ಮೃಗ: ಪ್ರಾಣಿ; ತತಿ: ಗುಂಪು; ಶರಭ:ಎಂಟು ಕಾಲುಗಳುಳ್ಳ ಒಂದು ವಿಲಕ್ಷಣ ಪ್ರಾಣಿ; ಶಾರ್ದೂಲ: ಹುಲಿ, ವ್ಯಾಘ್ರ; ವಿಲೋಚನ: ಕಣ್ಣು; ಅಂತ: ಕೊನೆ; ಮರ: ತರು, ವೃಕ್ಷ; ಮೃಗ: ಪ್ರಾಣಿ; ಪಾಡು: ಅವಸ್ಥೆ; ಅರಸ: ರಾಜ; ದನಿ: ಧ್ವನಿ, ಶಬ್ದ; ಬೆಚ್ಚು: ಹೆದರು; ಗಿರಿ: ಬೆಟ್ಟ; ಗುಹೆ: ಗವಿ; ಮಲೆ: ಎದುರಿಸು; ನಿಲ್ಲು: ಸ್ಥಿತವಾಗಿರು; ಕೂಡು: ಜೊತೆಯಾಗು;

ಪದವಿಂಗಡಣೆ:
ಬಿರಿದವ್+ಅದ್ರಿಗಳ್+ಅನಿಲಸುತನ್
ಉಬ್ಬರದ +ಬೊಬ್ಬೆಗೆ +ಮಿಕ್ಕ +ಮೃಗ+ತತಿ
ಶರಭ+ ಶಾರ್ದೂಲಂಗಳಿಲ್ಲ +ವಿಲೋಚನ+ಅಂತ್ಯದಲಿ
ಮರಗಿರನ +ಮೃಗಗಿಗನ+ ಪಾಡೇನ್
ಅರಸ+ ಭೀಮನ +ದನಿಗೆ +ಬೆಚ್ಚದೆ
ಗಿರಿ+ಗುಹೆಗಳೇ +ಮಲೆತು +ನಿಂತವು+ ದನಿಗೆ+ ದನಿಗೂಡುತ

ಅಚ್ಚರಿ:
(೧) ಭೀಮನಿಗೆ ಎದುರು ನಿಂತವರಾರು – ಭೀಮನ ದನಿಗೆ ಬೆಚ್ಚದೆ ಗಿರಿಗುಹೆಗಳೇ ಮಲೆತು ನಿಂತವು ದನಿಗೆ ದನಿಗೂಡುತ

ಪದ್ಯ ೧೦: ಭೀಮನು ಕಾಡಿನ ಮಧ್ಯಭಾಗಕ್ಕೆ ಹೇಗೆ ಬಂದನು?

ಹುಲಿ ಕರಡಿ ಕಾಡಾನೆ ಸಿಂಹಾ
ವಳಿಗಳೀತನ ದನಿಗೆ ಯೋಜನ
ವಳೆಯದಲಿ ಹಾಯ್ದೋಡಿದವು ನೋಡುತ್ತ ಮುರಿಮುರಿದು
ಹಳುವ ತಳಪಟವಾಯ್ತು ದಿಗ್ಗಜ
ತುಳಿದ ಬಾಳೆಯ ವನದವೊಲು ವೆ
ಗ್ಗಳೆಯನೈ ಕಲಿಭೀಮ ಬಂದನು ವನದ ಮಧ್ಯದಲಿ (ಅರಣ್ಯ ಪರ್ವ, ೧೧ ಸಂಧಿ, ೧೦ ಪದ್ಯ)

ತಾತ್ಪರ್ಯ:
ಭೀಮನ ಜೋರಾದ ಕೂಗಿಗೆ ಒಂದು ಯೋಜನ ವಲಯದಲ್ಲಿದ್ದ ಹುಲಿ, ಕರಡಿ, ಕಾಡಾನೆ, ಸಿಂಹ ಮುಂತಾದ ಕಾಡು ಪ್ರಾಣಿಗಳು ಹಿಂದಿರುಗಿ ನೋಡುತ್ತಾ ಓಡಿ ಹೋದವು. ಭೀಮನ ತುಳಿತಕ್ಕೆ ಕಾಡು ಕಡಿದ ಬಾಳೆಯ ತೋಟದಂತೆ ಬಯಲಾಗಿ ಕಾಣುತ್ತಿತ್ತು. ಹೀಗೆ ಮಹಾಪರಾಕ್ರಮಿಯಾದ ಭೀಮನು ಕಾಡಿನ ಮಧ್ಯಕ್ಕೆ ಬಂದನು.

ಅರ್ಥ:
ಹುಲಿ: ವ್ಯಾಘ್ರ; ಆನೆ: ಕರಿ, ಗಜ; ಕಾಡು: ಅರಣ್ಯ; ಸಿಂಹ: ಕೇಸರಿ; ಆವಳಿ: ಗುಂಪು; ದನಿ: ಧ್ವನಿ, ಶಬ್ದ; ಯೋಜನ: ಅಳತೆಯ ಪ್ರಮಾಣ; ಹಾಯು: ದಾಟು; ಓಡು: ಶೀಘ್ರವಾಗಿ ಚಲಿಸು; ನೋಡು: ವೀಕ್ಷಿಸು; ಮುರಿ: ಸೀಳು; ಹಳುವ: ಕಾಡು; ತಳಪಟ: ಅಂಗಾತವಾಗಿ ಬೀಳು, ಸೋಲು; ದಿಗ್ಗಜ: ಉದ್ದಾಮ ವ್ಯಕ್ತಿ, ಶ್ರೇಷ್ಠ; ತುಳಿ: ಮೆಟ್ಟು; ಬಾಳೆ: ಕದಳಿ; ವನ: ಕಾಡು; ವೆಗ್ಗಳ: ಶ್ರೇಷ್ಠತೆ, ಹಿರಿಮೆ; ಕಲಿ: ಶೂರ; ಬಂದನು: ಆಗಮಿಸು; ವನ: ಕಾಡು; ಮಧ್ಯ; ನಡುಭಾಗ;

ಪದವಿಂಗಡಣೆ:
ಹುಲಿ +ಕರಡಿ +ಕಾಡಾನೆ +ಸಿಂಹಾ
ವಳಿಗಳ್+ಈತನ +ದನಿಗೆ +ಯೋಜನ
ವಳೆಯದಲಿ+ ಹಾಯ್ದ್+ಓಡಿದವು +ನೋಡುತ್ತ +ಮುರಿಮುರಿದು
ಹಳುವ +ತಳಪಟವಾಯ್ತು +ದಿಗ್ಗಜ
ತುಳಿದ +ಬಾಳೆಯ +ವನದವೊಲು +ವೆ
ಗ್ಗಳೆಯನೈ+ ಕಲಿ+ಭೀಮ +ಬಂದನು +ವನದ +ಮಧ್ಯದಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಹಳುವ ತಳಪಟವಾಯ್ತು ದಿಗ್ಗಜತುಳಿದ ಬಾಳೆಯ ವನದವೊಲು
(೨) ಕಾಡು, ಹಳುವ, ವನ – ಸಮನಾರ್ಥಕ ಪದಗಳು