ಪದ್ಯ ೧೫: ಪರಶುರಾಮರು ಎಷ್ಟು ಬಾರಿ ಕ್ಷತ್ರಿಯರನ್ನು ಸಂಹಾರ ಮಾಡಿದರು?

ಪರಶುರಾಮನ ಕಾರ್ತವೀರ್ಯನ
ಧುರದೊಳಿಪ್ಪತ್ತೊಂದು ಸೂಳಿನೊ
ಳರಿದರಾಯರ ಕಂಠನಾಳದ ನೆತ್ತರಿನ ನದಿಯ
ಪರಮ ಪಿತೃತರ್ಪಣವನಾತನ
ಪರಶುವಿನ ನೆಣವಸೆಯ ತೊಳಹದ
ವರನದಿಯ ವಿಸ್ತರಣವನು ಕೇಳಿದನು ಯಮಸೂನು (ಅರಣ್ಯ ಪರ್ವ, ೧೦ ಸಂಧಿ, ೧೫ ಪದ್ಯ)

ತಾತ್ಪರ್ಯ:
ಪರಶುರಾಮರು ಮಾಡಿದ ಕಾರ್ತಿವೀರ್ಯನ ಸಂಹಾರ, ಇಪ್ಪತ್ತೊಂದು ಬಾರಿ ಕ್ಷತ್ರಿಯರನ್ನು ಸಂಹರಿಸಿದ್ದು, ಅವರ ಕಂಠನಾಳದಿಂದ ಹರಿದ ರಕ್ತ ತರ್ಪಣವನ್ನು ಪಿತೃಗಳಿಗೆ ಕೊಟ್ಟಿದ್ದು, ಆ ರಕ್ತ ನದಿಯ ವಿವರಗಳೆಲ್ಲವನ್ನೂ ಯುಧಿಷ್ಠಿರನು ಕೇಳಿದನು.

ಅರ್ಥ:
ಧುರ: ಯುದ್ಧ, ಕಾಳಗ; ಸೂಳು: ಆವೃತ್ತಿ, ಬಾರಿ; ಅರಿ: ಕತ್ತರಿಸು; ರಾಯ: ರಾಜ; ಕಂಠ: ಕೊರಳು; ನೆತ್ತರು: ರಕ್ತ; ನದಿ: ಕೂಲವತಿ; ಪರಮ: ಶ್ರೇಷ್ಠ; ಪಿತೃ: ಪೂರ್ವಜ; ತರ್ಪಣ: ತೃಪ್ತಿಪಡಿಸುವಿಕೆ, ತಣಿವು; ಪರಶು: ಕೊಡಲಿ, ಕುಠಾರ; ನೆಣವಸೆ: ಹಸಿಯಾದ ಕೊಬ್ಬು; ನೆಣ: ಕೊಬ್ಬು; ತೊಳಸು: ಕಾದಾಟ; ವರನದಿ: ಶ್ರೇಷ್ಠವಾದ ಸರೋವರ; ವಿಸ್ತರಣ: ವ್ಯಾಪ್ತಿ; ಸೂನು: ಮಗ;

ಪದವಿಂಗಡಣೆ:
ಪರಶುರಾಮನ +ಕಾರ್ತವೀರ್ಯನ
ಧುರದೊಳ್+ಇಪ್ಪತ್ತೊಂದು +ಸೂಳಿನೊಳ್
ಅರಿದ+ರಾಯರ +ಕಂಠನಾಳದ +ನೆತ್ತರಿನ +ನದಿಯ
ಪರಮ +ಪಿತೃ+ತರ್ಪಣವನ್+ಆತನ
ಪರಶುವಿನ +ನೆಣವಸೆಯ +ತೊಳಹದ
ವರನದಿಯ +ವಿಸ್ತರಣವನು +ಕೇಳಿದನು +ಯಮಸೂನು

ಅಚ್ಚರಿ:
(೧) ಸಾಯಿಸಿದನು ಎಂದು ಹೇಳುವ ಪರಿ – ಸೂಳಿನೊಳರಿದರಾಯರ ಕಂಠನಾಳದ ನೆತ್ತರಿನ ನದಿಯ

ನಿಮ್ಮ ಟಿಪ್ಪಣಿ ಬರೆಯಿರಿ