ಪದ್ಯ ೫೨: ಇಂದ್ರನು ಅರ್ಜುನನನ್ನು ಹೇಗೆ ಸಂತೈಸಿದನು?

ಎಲೆ ಕಿರೀಟಿ ವೃಥಾ ಮನೋವ್ಯಥೆ
ತಳಿತುದೇಕೂರ್ವಶಿಯ ಶಾಪದ
ಲಳುಕಿದೈ ತತ್ಕ್ರೋಧ ನಿನಗುಪಕಾರವಾಯ್ತು ಕಣಾ
ಹಳುವದಲಿ ಹನ್ನೆರಡುವರುಷದ
ಕಳಹಿನಜ್ಞಾತದಲಿ ವರುಷವ
ಕಳೆವೊಡಿದು ಸಾಧನವೆಯಾಯ್ತು ಶಿಖಂಡಿತನವೆಂದ (ಅರಣ್ಯ ಪರ್ವ, ೯ ಸಂಧಿ, ೫೨ ಪದ್ಯ)

ತಾತ್ಪರ್ಯ:
ಅರ್ಜುನನನ್ನು ಸಂತೈಸುತ್ತಾ ಇಂದ್ರನು, ಎಲೈ ಅರ್ಜುನ ಊರ್ವಶಿಯ ಶಾಪಕ್ಕೆ ನೀನೇಕೆ ಹೆದರುವೆ, ವೃಥಾ ಮನೋವ್ಯಥೆ ಪಡುವೆ? ಅವಳಿಗೆ ಬಂದ ಕೋಪದಿಂದ ನಿನಗೆ ಉಪಕಾರವೇ ಆಗಿದೆ, ಹನ್ನೆರಡು ವರುಷ ವನವಾಸ ಮುಗಿದ ಮೇಲೆ, ಒಂದು ವರುಷ ಅಜ್ಞಾತವಾಸ ಮಾಡುವುದಕ್ಕೆ ಈ ನಪುಂಸಕತನವೇ ನಿನಗೆ ಸಾಧನವಾಗುತ್ತದೆ ಎಂದು ಬುದ್ಧಿಮಾತನ್ನು ಹೇಳಿ ಸಂತೈಸಿದನು.

ಅರ್ಥ:
ಕಿರೀಟಿ: ಅರ್ಜುನ; ವೃಥ: ಸುಮ್ಮನೆ; ವ್ಯಥೆ: ನೋವು, ಯಾತನೆ; ಮನ: ಮನಸ್ಸು, ಚಿತ್ತ; ತಳಿತ: ಚಿಗುರಿದ; ಶಾಪ: ನಿಷ್ಠುರದ ನುಡಿ; ಅಳುಕು: ಹೆದರು; ಕ್ರೋಧ: ಕೋಪ; ಉಪಕಾರ: ಸಹಾಯ; ಹಳುವ: ಕಾಡು; ವರುಷ: ಸಂವತ್ಸರ; ಕಳೆ: ಪಾರುಮಾಡು, ಹೋಗಲಾಡಿಸು; ಅಜ್ಞಾತ: ತಿಳಿಯದ; ಸಾಧನ: ಉಪಕರಣ; ಶಿಖಂಡಿ: ನಪುಂಸಕ;

ಪದವಿಂಗಡಣೆ:
ಎಲೆ +ಕಿರೀಟಿ +ವೃಥಾ +ಮನೋವ್ಯಥೆ
ತಳಿತುದೇಕ್+ ಊರ್ವಶಿಯ +ಶಾಪದಲ್
ಅಳುಕಿದೈ +ತತ್+ಕ್ರೋಧ +ನಿನಗ್+ಉಪಕಾರವಾಯ್ತು +ಕಣಾ
ಹಳುವದಲಿ +ಹನ್ನೆರಡು+ವರುಷದ
ಕಳಹಿನ್+ಅಜ್ಞಾತದಲಿ +ವರುಷವ
ಕಳೆವೊಡ್+ಇದು +ಸಾಧನವೆಯಾಯ್ತು +ಶಿಖಂಡಿತನವೆಂದ

ಅಚ್ಚರಿ:
(೧) ಶಾಪವನ್ನು ಉಪಯೋಗಿಸಿಕೊಳ್ಳುವ ಉಪಾಯ – ಅಜ್ಞಾತದಲಿ ವರುಷವ
ಕಳೆವೊಡಿದು ಸಾಧನವೆಯಾಯ್ತು ಶಿಖಂಡಿತನವೆಂದ

ನಿಮ್ಮ ಟಿಪ್ಪಣಿ ಬರೆಯಿರಿ