ಕಾಡಲಾಗದು ನಿಮ್ಮೊಡನೆ ಮುರಿ
ದಾಡಲಮ್ಮೆನು ಮನಕೆ ಧೈರ್ಯದ
ಜೋಡ ತೊಟ್ಟಿದಿರಾಗಿ ನಿಲೆ ನನೆಯಂಬು ನಾಟುವುದೆ
ಖೋಡಿಯೇಕಿದಕವ್ವೆ ಮಕ್ಕಳ
ನೋಡ ಬಂದರೆ ಬೇರೆ ಕಷ್ಟವ
ನಾಡುವರೆ ಬಲ್ಲವರು ಬಿಜಯಂಗೈಸಿ ನೀವೆಂದ (ಅರಣ್ಯ ಪರ್ವ, ೯ ಸಂಧಿ, ೩೫ ಪದ್ಯ)
ತಾತ್ಪರ್ಯ:
ನಿಮ್ಮೊಡನೆ ವ್ಯರ್ಥವಾಗಿ ತರ್ಕಮಾಡಲಾರೆ, ನೀವೂ ನನ್ನನ್ನು ಕಾಡಬೇಡಿ, ಧೈರ್ಯದ ಕವಚವನ್ನು ತೊಟ್ಟು ನಿಂತರೆ ಹೂಬಾಣಗಳು ನಾಟುವವೇ? ನೀನು ತಾಯಿಯಾಗಿ ಮಗನನ್ನು ನೋಡಲು ಬಂದರೆ ನಿನಗೇನೂ ಕಳಂಕ ಬರುವುದಿಲ್ಲ, ತಿಳಿದವರು ಕೆಟ್ಟದಾಗಿ ಮಾತನಾಡುವುದಿಲ್ಲ, ನೀವಿನ್ನು ಹಿಂದಿರುಗಿ ಎಂದು ಅರ್ಜುನನು ಊರ್ವಶಿಗೆ ಹೇಳಿದನು.
ಅರ್ಥ:
ಕಾಡು: ಒತ್ತಾಯಮಾಡು; ಮುರಿ: ಸೀಳು; ಮನ: ಮನಸ್ಸು; ಧೈರ್ಯ: ದಿಟ್ಟತನ, ದೃಢತೆ; ಜೋಡು: ಜೊತೆ, ಜೋಡಿ; ತೊಟ್ಟು: ಹೊದ್ದು; ಇದಿರು: ಎದುರು; ನಿಲೆ: ನಿಲ್ಲು; ನನೆ:ಹೂವು; ಅಂಬು: ಬಾಣ; ನಾಟು: ತಾಗು; ಖೋಡಿ: ದುರುಳತನ, ನೀಚತನ; ಅವ್ವೆ: ತಾಯಿ; ಮಕ್ಕಳು: ಕುಮಾರ; ನೋಡು: ವೀಕ್ಷಿಸು; ಬಂದರೆ: ಆಗಮಿಸು; ಬೇರೆ: ಅನ್ಯ; ಕಷ್ಟ: ತೊಂದರೆ; ಆಡು: ಮಾತಾಡು, ನುಡಿ; ಬಲ್ಲವರು: ತಿಳಿದವರು; ಬಿಜಯಂಗೈಸಿ: ದಯಮಾಡಿ, ತೆರಳು;
ಪದವಿಂಗಡಣೆ:
ಕಾಡಲಾಗದು +ನಿಮ್ಮೊಡನೆ +ಮುರಿ
ದಾಡಲಮ್ಮೆನು +ಮನಕೆ+ ಧೈರ್ಯದ
ಜೋಡ +ತೊಟ್ಟ್+ಇದಿರಾಗಿ +ನಿಲೆ +ನನೆಯಂಬು +ನಾಟುವುದೆ
ಖೋಡಿಯೇಕ್_ಇದಕ್+ಅವ್ವೆ +ಮಕ್ಕಳ
ನೋಡ +ಬಂದರೆ +ಬೇರೆ +ಕಷ್ಟವನ್
ಆಡುವರೆ +ಬಲ್ಲವರು +ಬಿಜಯಂಗೈಸಿ +ನೀವೆಂದ
ಅಚ್ಚರಿ:
(೧) ಕಾಮನನ್ನು ಗೆಲ್ಲುವ ಪರಿ – ಧೈರ್ಯದ ಜೋಡ ತೊಟ್ಟಿದಿರಾಗಿ ನಿಲೆ ನನೆಯಂಬು ನಾಟುವುದೆ