ಪದ್ಯ ೩೦: ಅರ್ಜುನನನ್ನು ಊರ್ವಶಿಯು ಹೇಗೆ ಹಂಗಿಸಿದಳು?

ಅಹುದಹುದಲೇ ಶ್ರೌತ ಪಥದಲಿ
ಬಹಿರಿ ನೀವೇ ಸ್ಮಾರ್ತ ವಿಧಿ ಸ
ನ್ನಿಹಿತರೆಂಬುದನರಿಯದೇ ಮೂಜಗದ ಜನವೆಲ್ಲ
ಮಹಿಳೆಯೊಬ್ಬಳೊಳೈವರೊಡಗೂ
ಡಿಹರು ನೀವೇನಲ್ಲಲೇ ನಿ
ಸ್ಪೃಹರು ನೀವ್ ನಮ್ಮಲ್ಲಿ ಹರಹರಯೆಂದಳಿಂದುಮುಖಿ (ಅರಣ್ಯ ಪರ್ವ, ೯ ಸಂಧಿ, ೩೦ ಪದ್ಯ)

ತಾತ್ಪರ್ಯ:
ಊರ್ವಶಿಯು ಅರ್ಜುನನ ತರ್ಕವನ್ನು ಕೇಳಿ ಕೋಪಗೊಂಡು, ಹೌದಲ್ಲವೇ, ನೀವು ವೇದವಿಹಿತ ಮಾರ್ಗದವರು, ಅಲ್ಲದೆ ಸ್ಮೃತಿಯಲ್ಲಿ ವಿಧಿಸಿದಂತೆ ನಡೆಯುವವರೆಂಬುದನ್ನು ಮೂರು ಲೋಕದ ಜನಗಳೆಲ್ಲರೂ ಅರಿತಿಲ್ಲವೇ, ಐವರು ಒಬ್ಬ ಹೆಂಗಸನ್ನು ಮದುವೆಯಾಗಿರುವರಂತೆ, ಅವರು ನೀವಲ್ಲ ತಾನೆ, ನಮ್ಮನ್ನು ಮಾತ್ರ ಸ್ವಲ್ಪವೂ ಬಯಸದಿರುವವರು ನೀವಲ್ಲವೇ ಶಿವ ಶಿವಾ ಎಂದು ಊರ್ವಶಿ ಅರ್ಜುನನನ್ನು ಹಂಗಿಸಿದಳು.

ಅರ್ಥ:
ಅಹುದು: ಹೌದು; ಶ್ರೌತ: ವೇದಗಳಿಗೆ ಸಂಬಂಧಿಸಿದ; ಪಥ: ಮಾರ್ಗ; ಬಹಿರಿ: ಬಂದಿರಿ; ಸ್ಮಾರ್ತ:ಸ್ಮೃತಿಗ್ರಂಥಗಳಲ್ಲಿ ವಿಧಿ ಸಿದ ಆಚರಣೆ; ವಿಧಿ: ನಿಯಮ; ಸನ್ನಿಹಿತ: ಹತ್ತಿರ, ಸಮೀಪ; ಅರಿ: ತಿಳಿ; ಮೂಜಗ: ತ್ರಿಲೋಕ; ಜನ: ಮನುಷ್ಯ; ಮಹಿಳೆ: ನಾರಿ; ಒಡಗೂಡು: ಸೇರು; ನಿಸ್ಪೃಹ: ಆಸೆ ಇಲ್ಲದವ; ಹರ: ಶಿವ; ಇಂದುಮುಖಿ: ಚಂದ್ರನಂತ ಮುಖವುಳ್ಳವಳು;

ಪದವಿಂಗಡಣೆ:
ಅಹುದ್+ಅಹುದಲೇ +ಶ್ರೌತ +ಪಥದಲಿ
ಬಹಿರಿ +ನೀವೇ +ಸ್ಮಾರ್ತ +ವಿಧಿ +ಸ
ನ್ನಿಹಿತರ್+ಎಂಬುದನ್+ಅರಿಯದೇ +ಮೂಜಗದ+ ಜನವೆಲ್ಲ
ಮಹಿಳೆ+ಒಬ್ಬಳೊಳ್+ಐವರ್+ಒಡಗೂ
ಡಿಹರು +ನೀವೇನಲ್ಲಲೇ +ನಿ
ಸ್ಪೃಹರು +ನೀವ್ +ನಮ್ಮಲ್ಲಿ+ ಹರಹರ+ಎಂದಳ್+ಇಂದುಮುಖಿ

ಅಚ್ಚರಿ:
(೧) ಅರ್ಜುನನನ್ನು ಹಂಗಿಸುವ ಪರಿ – ಮಹಿಳೆಯೊಬ್ಬಳೊಳೈವರೊಡಗೂಡಿಹರು ನೀವೇನಲ್ಲಲೇ

ಪದ್ಯ ೨೯: ಅರ್ಜುನನ ತರ್ಕಬದ್ಧ ಉತ್ತರವೇನು?

ಇದು ಮನುಷ್ಯ ಶರೀರ ತದ್ಧ
ರ್ಮದಲಿ ತನ್ನವಸಾನ ಪರಿಯಂ
ತಿದರೊಳವ್ಯಭಿಚಾರದಲಿ ವರ್ತಿಸಿದ ಬಳಿಕಿನಲಿ
ತ್ರಿದಶರಲ್ಲಿಗೆ ಬಂದರಾ ಮಾ
ರ್ಗದಲಿ ನಡೆವುದು ದೇವತಾ ದೇ
ಹದಲಿ ಬಲವತ್ತರವು ದೇಹ ವಿಶೇಷ ವಿಧಿಯೆಂದ (ಅರಣ್ಯ ಪರ್ವ, ೯ ಸಂಧಿ, ೨೯ ಪದ್ಯ)

ತಾತ್ಪರ್ಯ:
ತಾಯಿ, ನನ್ನದು ಮಾನವ ಶರೀರ, ನಾನು ಸಾಯುವವರೆಗೂ ಮನುಷ್ಯ ಧರ್ಮದಂತೆ ಅವ್ಯಭಿಚಾರದಿಂದ ಬದುಕನ್ನು ಸಾಗಿಸಿ, ತದನಂತರ ದೇವಲೋಕಕ್ಕೆ ಬಂದ ಮೇಲೆ ದೇವತೆಗಳಂತೆ ನಡೆಯಬೇಕು, ದೇವತಾ ದೇಹವು ಬಲವತ್ತರವಾದುದು, ಅದಕ್ಕೆ ವಿಧಿ ಬೇರೆ ಎಂದು ಅರ್ಜುನನು ಹೇಳಿದನು.

ಅರ್ಥ:
ಮನುಷ್ಯ: ನರ; ಶರೀರ: ದೇಹ; ಧರ್ಮ: ಧಾರಣೆ ಮಾಡಿದುದು; ಅವಸಾನ: ಅಂತ್ಯ; ಪರಿಯಂತ: ವರೆಗೂ; ವ್ಯಭಿಚಾರ: ಅಪಾಮಾರ್ಗ; ವರ್ತಿಸು: ನಡೆದು, ಸಾಗು; ಬಳಿಕ: ನಂತರ; ತ್ರಿದಶ: ದೇವತೆ;ಬಂದು: ಆಗಮಿಸು; ಮಾರ್ಗ: ದಾರಿ; ನಡೆ: ಸಾಗು; ದೇವತೆ: ಸುರ; ದೇಹ: ತನು; ಬಲ: ಬಲಿಷ್ಟ; ವಿಶೇಷ: ಅಸಾಮಾನ್ಯ, ವಿಶಿಷ್ಟ; ವಿಧಿ: ನಿಯಮ;

ಪದವಿಂಗಡಣೆ:
ಇದು +ಮನುಷ್ಯ +ಶರೀರ +ತದ್ಧ
ರ್ಮದಲಿ+ ತನ್+ಅವಸಾನ +ಪರಿಯಂತ್
ಇದರೊಳ್+ಅವ್ಯಭಿಚಾರದಲಿ+ ವರ್ತಿಸಿದ+ ಬಳಿಕಿನಲಿ
ತ್ರಿದಶರಲ್ಲಿಗೆ +ಬಂದರ್+ಆ+ ಮಾ
ರ್ಗದಲಿ +ನಡೆವುದು +ದೇವತಾ +ದೇ
ಹದಲಿ+ ಬಲವತ್ತರವು+ ದೇಹ +ವಿಶೇಷ +ವಿಧಿಯೆಂದ

ಅಚ್ಚರಿ:
(೧) ಶರೀರ, ದೇಹ; ತ್ರಿದಶ, ದೇವತ – ಸಮನಾರ್ಥಕ ಪದ

ಪದ್ಯ ೨೮: ಊರ್ವಶಿಯು ಅರ್ಜುನನನ್ನು ಹೇಗೆ ಬೈದಳು?

ಮರೆಯ ಮಾತಂತಿರಲಿ ಸಾಕದ
ಮರೆದು ಕಳೆ ಮಾನಿನಿಯರಿಚ್ಛೆಯ
ನರಿಯದವನು ಸುರೇಂದ್ರನಾಗಲಿ ಚಂದ್ರನಾಗಿರಲಿ
ಕುರಿಕಣಾ ಫಡ ಖೂಳ ನೀನೆಂ
ತರಿವೆಯೆನೆ ನಡನಡುಗಿ ಕೈಮುಗಿ
ದೆರಗಿ ಮಗುಳೀಮಾತನೆಂದನು ಪಾರ್ಥ ಕೈಮುಗಿದು (ಅರಣ್ಯ ಪರ್ವ, ೯ ಸಂಧಿ, ೨೮ ಪದ್ಯ)

ತಾತ್ಪರ್ಯ:
ಎಲೈ ಅರ್ಜುನ, ವಿಷಯವನ್ನು ಮುಚ್ಚಿ ಆಡುವ ಮಾತುಗಳನ್ನು ಮರೆತು ಬಿಡು, ಯುವತಿಯರ ಇಚ್ಛೆಯನ್ನು ಅರ್ಥಮಾಡಿಕೊಳ್ಳದವನು ಇಂದ್ರನೇ ಆಗಿರಲಿ, ಚಂದ್ರನೇ ಆಗಿರಲಿ ಅವನೊಬ್ಬ ಕುರಿ. ಕೋಪಗೊಂಡ ಊರ್ವಶಿ ಅರ್ಜುನನಿಗೆ, ನೀಚಾ, ನೀನು ಇದನ್ನು ತಿಳಿದುಕೊಳ್ಳಲು ಅಸಾಧ್ಯ ಎಂದು ಹೇಳಲು, ಅರ್ಜುನನು ಹೆದರಿ ನಡುಗುತ್ತಾ ಕೈಮುಗಿದು ನಮಸ್ಕರಿಸಿ ಹೀಗೆ ಹೇಳಿದನು.

ಅರ್ಥ:
ಮರೆ: ನೆನಪಿನಿಂದ ದೂರ ಮಾಡು; ಮಾತು: ವಾಣಿ, ನುಡಿ; ಸಾಕು: ಕೊನೆ, ಅಂತ್ಯ; ಕಳೆ: ತೊರೆ, ಹೋಗಲಾಡಿಸು; ಮಾನಿನಿ: ಹೆಣ್ಣು; ಇಚ್ಛೆ: ಆಸೆ; ಅರಿ: ತಿಳಿ; ಸುರೇಂದ್ರ: ಇಂದ್ರ; ಚಂದ್ರ: ಶಶಿ; ಕುರಿ: ಮೇಷ; ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ಖೂಳ: ದುಷ್ಟ; ನಡನಡುಗು: ಹೆದರು; ಕೈಮುಗಿ: ಹಸ್ತಗಳನ್ನು ಜೋಡಿಸಿ; ಎರಗು: ನಮಸ್ಕರಿಸು; ಮಗುಳು:ಪುನಃ, ಮತ್ತೆ; ಮಾತು: ನುಡಿ;

ಪದವಿಂಗಡಣೆ:
ಮರೆಯ +ಮಾತಂತಿರಲಿ +ಸಾಕದ
ಮರೆದು +ಕಳೆ +ಮಾನಿನಿಯರ್+ಇಚ್ಛೆಯನ್
ಅರಿಯದವನು+ ಸುರೇಂದ್ರನಾಗಲಿ+ ಚಂದ್ರನಾಗಿರಲಿ
ಕುರಿ+ಕಣಾ +ಫಡ+ ಖೂಳ +ನೀನೆಂತ್
ಅರಿವೆ+ಎನೆ +ನಡನಡುಗಿ +ಕೈಮುಗಿದ್
ಎರಗಿ+ ಮಗುಳ್+ಈ+ಮಾತನ್+ಎಂದನು +ಪಾರ್ಥ +ಕೈಮುಗಿದು

ಅಚ್ಚರಿ:
(೧) ಕೈಮುಗಿ – ೫, ೬ ಸಾಲಿನ ಕೊನೆ ಪದ
(೨) ಅರ್ಜುನನನ್ನು ಬೈದ ಪರಿ – ಮಾನಿನಿಯರಿಚ್ಛೆಯನರಿಯದವನು ಸುರೇಂದ್ರನಾಗಲಿ ಚಂದ್ರನಾಗಿರಲಿ ಕುರಿಕಣಾ ಫಡ ಖೂಳ ನೀನೆಂತರಿವೆ

ಪದ್ಯ ೨೭: ಊರ್ವಶಿಯು ತನ್ನ ಹಿರಿಮೆಯನ್ನು ಹೇಗೆ ಹೇಳಿದಳು?

ಅಯ್ಯನಯ್ಯನು ನಿಮ್ಮವರ ಮು
ತ್ತಯ್ಯನಾತನ ಭಾವ ಮೈದುನ
ನಯ್ಯನಗ್ರಜರನುಜರೆಂಬೀ ಜ್ಞಾತಿ ಬಾಂಧವರ
ಕೈಯಲರಿಗಳಹೊಯ್ದು ಶಿರನರಿ
ದುಯ್ಯಲಾಡಿದವರ್ಗೆ ಮೇಣ್ ಮಖ
ದಯ್ಯಗಳಿಗಾನೊಬ್ಬಳೆಂದಳು ನಗುತ ನಳಿನಾಕ್ಷಿ (ಅರಣ್ಯ ಪರ್ವ, ೯ ಸಂಧಿ, ೨೭ ಪದ್ಯ)

ತಾತ್ಪರ್ಯ:
ಎಲೈ ಅರ್ಜುನ ಕೇಳು, ನಿಮ್ಮ ತಂದೆ, ಅವನ ತಂದೆ, ನಿಮ್ಮ ಮುತ್ತಜ್ಜ, ಅವನ ಭಾವಮೈದುನ, ಅವನ ತಂದೆ, ಅಣ್ಣ, ತಮ್ಮ ಎಂಬ ನಿಮ್ಮ ತಂದೆಯ ಕಡೆಯ ಬಾಂಧವರಿಗೆ, ಯುದ್ಧರಂಗದಲ್ಲಿ ಶತ್ರುಗಳ ಜೊತೆಗೆ ಯುದ್ಧ ಮಾಡಿ ತಲೆಗಳನ್ನು ಚೆಂಡಾಡಿದವರಿಗೆ, ಅಷ್ಟೆ ಅಲ್ಲ, ಯಜ್ಞಗಳನ್ನು ಮಾಡಿದ ಸಂಭಾವಿತರಿಗೆ ಇರುವವಳು ನಾನೊಬ್ಬಳೇ, ಎಂದು ಊರ್ವಶಿಯು ನಗುತ ಅರ್ಜುನನಿಗೆ ತನ್ನ ಹಿರಿಮೆಯನ್ನು ಹೇಳಿಕೊಂಡಳು.

ಅರ್ಥ:
ಅಯ್ಯ: ತಂದೆ; ಮುತ್ತಯ್ಯ: ಮುತ್ತಾತ; ಭಾವಮೈದುನ: ಗಂಡನ ಯಾ ಹೆಂಡತಿಯ ಸಹೋದರ; ಅಗ್ರಜ: ಹಿರ; ಅನುಜ: ಸಹೋದರ; ಜ್ಞಾತಿ: ತಂದೆಯ ಕಡೆಯ ಬಂಧು; ಬಾಂಧವ: ಸಂಬಂಧಿಕರು; ಅರಿ: ಶತ್ರು; ಹೊಯ್ದು: ತೊರೆ; ಶಿರ: ತಲೆ; ಅರಿ: ಕತ್ತರಿಸು; ಮೇಣ್: ಮತ್ತು; ಮಖ: ಯಾಗ; ನಗುತ: ಸಂತಸ; ನಳಿನಾಕ್ಷಿ: ಕಮಲದಂತ ಕಣ್ಣುಳ್ಳವಳು;

ಪದವಿಂಗಡಣೆ:
ಅಯ್ಯನ್+ಅಯ್ಯನು +ನಿಮ್ಮವರ+ ಮು
ತ್ತಯ್ಯನ್+ಆತನ +ಭಾವ ಮೈದುನನ್
ಅಯ್ಯನ್+ಅಗ್ರಜರ್+ಅನುಜರ್+ಎಂಬೀ +ಜ್ಞಾತಿ +ಬಾಂಧವರ
ಕೈಯಲ್+ಅರಿಗಳ+ಹೊಯ್ದು +ಶಿರನ್+ಅರಿ
ದುಯ್ಯಲ್+ಆಡಿದವರ್ಗೆ+ ಮೇಣ್+ ಮಖದ್
ಅಯ್ಯಗಳಿಗ್+ಆನೊಬ್ಬಳ್+ಎಂದಳು +ನಗುತ +ನಳಿನಾಕ್ಷಿ

ಅಚ್ಚರಿ:
(೧) ಅಯ್ಯ, ಮುತ್ತಯ್ಯ – ಪ್ರಾಸ ಪದಗಳು
(೨) ಅಯ್ಯ, ಮುತ್ತಯ್ಯ, ಭಾವಮೈದುನ, ಅಗ್ರಜ, ಅನುಜ, ಜ್ಞಾತಿ – ಸಂಬಂಧಗಳನ್ನು ವಿವರಿಸುವ ಪದ

ಪದ್ಯ ೨೬: ಊರ್ವಶಿಯು ಅರ್ಜುನನಿಗೆ ಏನು ಹೇಳಿದಳು?

ಪ್ರಣವದರ್ಥವಿಚಾರವೆತ್ತಲು
ಗಣಿಕೆಯರ ಮನೆಯ ಸ್ವರಾಕ್ಷರ
ಗಣಿತ ಲಕ್ಷಣವೆತ್ತ ರತಿಕೇಳೀ ವಿಧಾನದಲಿ
ಬಣಗು ಭಾರತವರ್ಷದವದಿರ
ಭಣಿತ ನಮ್ಮೀ ದೇವಲೋಕಕೆ
ಸಣಬಿನಾರವೆ ಚೈತ್ರರಥದೊಳಗೆಂದಳಿಂದುಮುಖಿ (ಅರಣ್ಯ ಪರ್ವ, ೯ ಸಂಧಿ, ೨೬ ಪದ್ಯ)

ತಾತ್ಪರ್ಯ:
ಅರ್ಜುನನ ಮಾತನ್ನು ಕೇಳಿ ಊರ್ವಶಿಯು, ಅರ್ಜುನ, ವೇಶ್ಯೆಯರ ಮನೆಯ ಸಂಗೀತದ ತಾಳದ ಗಣಿತವೆಲ್ಲಿ, ಓಂಕಾರದ ಅರ್ಥದ ವಿಚಾರವೆಲ್ಲಿ, ಸಂದರ್ಭದಲ್ಲಿ ಜೊಳ್ಳುಗಳಾದ ಭಾರತ ವರ್ಷದವರ ಮಾತು, ನಮ್ಮ ಚೈತ್ರರಥ ಉದ್ಯಾನಕ್ಕೂ, ಸಣಬಿನ ಹೊಲಕ್ಕು ಹೋಲಿಕೆಯಿದ್ದ ಹಾಗೆ ಎಂದು ಊರ್ವಶಿ ಉತ್ತರಿಸಿದಳು.

ಅರ್ಥ:
ಪ್ರಣವ: ಓಂಕಾರ; ಅರ್ಥ: ಶಬ್ದದ ಅಭಿಪ್ರಾಯ; ವಿಚಾರ: ವಿಮರ್ಶೆ; ಗಣಿಕೆ: ವೇಶ್ಯೆ; ಮನೆ: ಆಲಯ; ಸ್ವರಾಕ್ಷರ: ಸಂಗೀತ; ಗಣಿತ: ಲೆಕ್ಕಾಚಾರ; ಲಕ್ಷಣ: ಗುರುತು, ಚಿಹ್ನೆ; ರತಿಕೇಳಿ: ಸುರತಕ್ರೀಡೆ, ಸಂಭೋಗ; ಕೇಳು: ಆಲಿಸು; ವಿಧಾನ: ರೀತಿ; ಬಣಗು: ಅಲ್ಪವ್ಯಕ್ತಿ; ಭಣಿತೆ: ಸಂಭಾಷಣೆ, ಮಾತುಕತೆ; ದೇವಲೋಕ: ಸ್ವರ್ಗ; ಸಣಬು: ಒಂದು ಬಗೆಯ ಸಸ್ಯ; ಚೈತ್ರ:ವಸಂತಮಾಸ; ರಥ: ಬಂಡಿ; ಚೈತ್ರರಥ: ಅರಳಿರುವ ಗಿಡಮರಗಳ ಉದ್ಯಾನ; ಇಂದುಮುಖಿ: ಚಂದ್ರನನಂತ ಮುಖವುಳ್ಳವಳು;

ಪದವಿಂಗಡಣೆ:
ಪ್ರಣವದ್+ಅರ್ಥ+ವಿಚಾರವ್+ಎತ್ತಲು
ಗಣಿಕೆಯರ +ಮನೆಯ +ಸ್ವರಾಕ್ಷರ
ಗಣಿತ +ಲಕ್ಷಣವೆತ್ತ+ ರತಿಕೇಳೀ+ ವಿಧಾನದಲಿ
ಬಣಗು +ಭಾರತವರ್ಷದ್+ಅವದಿರ
ಭಣಿತ +ನಮ್ಮೀ +ದೇವಲೋಕಕೆ
ಸಣಬಿನಾರವೆ+ ಚೈತ್ರರಥದೊಳಗ್+ಎಂದಳ್+ಇಂದುಮುಖಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಸಣಬಿನಾರವೆ ಚೈತ್ರರಥದೊಳಗೆ
(೨) ಹೋಲಿಸುವ ಪರಿ – ಪ್ರಣವದರ್ಥವಿಚಾರವೆತ್ತಲುಗಣಿಕೆಯರ ಮನೆಯ ಸ್ವರಾಕ್ಷರ ಗಣಿತ ಲಕ್ಷಣವೆತ್ತ