ಪದ್ಯ ೨೫: ಊರ್ವಶಿ ಹೇಗೆ ಭರತಕುಲದ ಜನನಿ?

ನಾರಿ ನೀ ಪೂರ್ವದಲಿ ನಮ್ಮ ಪು
ರೂರವನ ಸತಿ ನಿನಗೆ ಬಳಿಕ ಕು
ಮಾರ ಜನಿಸಿದನಾಯುವಾತನೊಳುದಿಸಿದನು ನಹುಷ
ವೀರರಾಜ ಪರಂಪರೆಯು ಬರ
ಲಾರಿಗಾವುದಿಸಿದೆವು ನಮ್ಮ ವಿ
ಚಾರಿಸಿದುದಿಲ್ಲಾಯೆನುತ ವಿನಯದಲಿ ನರ ನುಡಿದ (ಅರಣ್ಯ ಪರ್ವ, ೯ ಸಂಧಿ, ೨೫ ಪದ್ಯ)

ತಾತ್ಪರ್ಯ:
ಅರ್ಜುನನು ತನ್ನ ಮಾತನ್ನು ಮುಂದುವರೆಸುತ್ತಾ, ತಾಯಿ, ನೀವು ನಮ್ಮ ಪೂರ್ವಜರಾದ ಪುರೂರವನ ಪತ್ನಿಯಾಗಿದ್ದಿರಿ, ನಿಮಗೆ ಆಯುವೆಂಬ ಮಗನು ಹುಟ್ಟಿದನು, ಆಯಿವಿಗೆ ನಹುಷನು ಮಗ. ಈ ವೀರ ರಾಜರ ಪರಂಪರೆಯಲ್ಲಿ ಯಾರು ಯಾರು ಹುಟ್ಟಿದರು, ನಾವು ಯಾರ ಮಕ್ಕಳೆಂದು ನೀವು ವಿಚಾರಿಸಲಿಲ್ಲವೇ? ಎಂದು ಅರ್ಜುನನು ವಿನಯದಿಂದ ಕೇಳಿದನು.

ಅರ್ಥ:
ನಾರಿ: ಹೆಣ್ಣು; ಪೂರ್ವ: ಹಿಂದೆ; ಸತಿ: ಹೆಂಡತಿ; ಬಳಿಕ: ನಂತರ; ಕುಮಾರ: ಮಗ; ಜನಿಸು: ಹುಟ್ಟು; ಉದಿಸು: ಹುಟ್ಟು; ವೀರ: ಶೂರ; ರಾಜ: ನೃಪ; ಪರಂಪರೆ: ಪರಿವಿಡಿ, ಹಿನ್ನಲೆ, ಕುಲ; ಬರಲು: ಆಗಮಿಸು; ವಿಚಾರಿಸು: ತಿಳಿದುಕೊಳ್ಳು; ವಿನಯ: ಸೌಜನ್ಯ; ನರ: ಅರ್ಜುನ; ನುಡಿ: ಮಾತಾಡು;

ಪದವಿಂಗಡಣೆ:
ನಾರಿ +ನೀ +ಪೂರ್ವದಲಿ +ನಮ್ಮ +ಪು
ರೂರವನ +ಸತಿ +ನಿನಗೆ +ಬಳಿಕ +ಕು
ಮಾರ +ಜನಿಸಿದನ್+ಆಯುವ್+ಆತನೊಳ್+ಉದಿಸಿದನು +ನಹುಷ
ವೀರ+ರಾಜ +ಪರಂಪರೆಯು +ಬರಲ್
ಆರಿಗ್+ಆವ್+ಉದಿಸಿದೆವು +ನಮ್ಮ +ವಿ
ಚಾರಿಸಿದುದ್+ಇಲ್ಲಾ+ಎನುತ +ವಿನಯದಲಿ +ನರ+ ನುಡಿದ

ಅಚ್ಚರಿ:
(೧) ಊರ್ವಶಿಯ ಹಿನ್ನಲೆ – ನಾರಿ ನೀ ಪೂರ್ವದಲಿ ನಮ್ಮ ಪುರೂರವನ ಸತಿ

ನಿಮ್ಮ ಟಿಪ್ಪಣಿ ಬರೆಯಿರಿ