ಪದ್ಯ ೧: ಅರ್ಜುನನ ಮನಸ್ಥೈರ್ಯ ಹೇಗಿತ್ತು?

ಕೇಳು ಜನಮೇಜಯ ಧರಿತ್ರೀ
ಪಾಲ ಪಾರ್ಥನ ಮೈಯ ಹುಲುರೋ
ಮಾಳಿ ಹರಿಯದು ಮನುಮಥನ ಖಂಡೆಯದ ಗಾಯದಲಿ
ಬೀಳು ಕೊಟ್ಟಳು ಚಿತ್ರಸೇನನ
ನಾ ಲತಾಂಗಿ ಸರಸ್ರ ಸಂಖ್ಯೆಯ
ಖೇಳಮೇಳದ ಸತಿಯರನು ಕರೆಸಿದಳು ಹರುಷದಲಿ (ಅರಣ್ಯ ಪರ್ವ, ೯ ಸಂಧಿ, ೧ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಅರ್ಜುನನ ತನುವಿನ ಒಂದು ಕೂದಲೂ ಕಾಮನ ಖಡ್ಗದ ಹೊಡೆತದಿಂದ ಮುಕ್ಕಾಗಲಿಲ್ಲ, ಇತ್ತ ಊರ್ವಶಿಯು ಚಿತ್ರಸೇನನನ್ನು ಕಳುಹಿಸಿ, ತನ್ನ ಸಾವಿರಾರು ಸೇವಕಿಯರನ್ನು ಕರೆಸಿದಳು.

ಅರ್ಥ:
ಕೇಳು: ಆಲಿಸು; ಧರಿತ್ರೀ: ಭೂಮಿ; ಧರಿತ್ರೀಪಾಲ: ರಾಜ; ಮೈಯ: ತನು; ಹುಲು: ಅಲ್ಪ; ರೋಮಾಳಿ: ಕೂದಲು; ಹರಿ: ಚಲಿಸು, ಸೀಳು; ಮನುಮಥ: ಕಾಮ; ಖಂಡೆಯ: ಕತ್ತಿ, ಖಡ್ಗ; ಗಾಯ: ಪೆಟ್ಟು; ಬೀಳುಕೊಡು: ತೆರಳು, ಕಳುಹಿಸು; ಲತಾಂಗಿ: ಸುಂದರಿ; ಸಹಸ್ರ: ಸಾವಿರ; ಸಂಖ್ಯೆ: ಎಣಿಕೆ; ಖೇಳ: ಆಟ; ಮೇಳ: ಗುಂಪು; ಸತಿ: ಹೆಂಗಸು; ಕರೆಸು: ಬರೆಮಾಡು; ಹರುಷ: ಸಂತಸ;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ಪಾರ್ಥನ +ಮೈಯ +ಹುಲು+ರೋ
ಮಾಳಿ+ ಹರಿಯದು +ಮನುಮಥನ +ಖಂಡೆಯದ +ಗಾಯದಲಿ
ಬೀಳು +ಕೊಟ್ಟಳು +ಚಿತ್ರಸೇನನನ್
ಆ +ಲತಾಂಗಿ +ಸರಸ್ರ +ಸಂಖ್ಯೆಯ
ಖೇಳಮೇಳದ +ಸತಿಯರನು +ಕರೆಸಿದಳು+ ಹರುಷದಲಿ

ಅಚ್ಚರಿ:
(೧) ಖೇಳಮೇಳ – ಪದದ ರಚನೆ
(೨) ಪಾರ್ಥನ ಸ್ಥೈರ್ಯ: ಪಾರ್ಥನ ಮೈಯ ಹುಲುರೋಮಾಳಿ ಹರಿಯದು ಮನುಮಥನ ಖಂಡೆಯದ ಗಾಯದಲಿ

ನಿಮ್ಮ ಟಿಪ್ಪಣಿ ಬರೆಯಿರಿ