ಪದ್ಯ ೮೫: ಅರ್ಜುನನನ್ನು ನೋಡಲು ಯಾರು ಬಂದರು?

ನುಸಿಗಳಿವದಿರು ಮರ್ತ್ಯರೆಂಬವ
ರೊಸಗೆಯಮರಾವತಿಯೊಳೇನಿದು
ಹೊಸತಲಾ ಬಂದಾತನಾರೋ ಪೂತುರೇಯೆನುತ
ವಸುಗಳಾದಿತ್ಯರು ಭುಜಂಗಮ
ವಿಸರ ಗಂಧರ್ವಾದಿ ದೇವ
ಪ್ರಸರ ಬಂದುದು ಕಾಣಿಕೆಗೆ ಪುರುಹೂತ ನಂದನನ (ಅರಣ್ಯ ಪರ್ವ, ೮ ಸಂಧಿ, ೮೫ ಪದ್ಯ)

ತಾತ್ಪರ್ಯ:
ಮನುಷ್ಯರು ದೇವತೆಗಳಿಗೆ ನುಸಿಗಳಿದ್ದ ಹಾಗೆ, ಅಂತಹದರಲ್ಲಿ ಈ ಹುಲು ಮಾನವನು ಬಂದುದಕ್ಕೆ ಅಮರಾವತಿಯಲ್ಲೇಕೆ ಶುಭಸಮಾರಂಭ? ಬಂದವನು ಯಾರೋ ಹೋಗಿ ನೋಡೋಣ ಎಂದು ವಸುಗಳು, ಆದಿತ್ಯರು, ಸರ್ಪಗಳು, ಗಂಧರ್ವರ ಗುಂಪುಗಳು ಅರ್ಜುನನನ್ನು ನೋಡಲು ಬಂದರು.

ಅರ್ಥ:
ನುಸಿ: ಹುಡಿ, ಧೂಳು; ಇವದಿರು: ಇವರು; ಮರ್ತ್ಯ: ಮನುಷ್ಯ; ಒಸಗೆ: ಶುಭ, ಮಂಗಳಕಾರ್ಯ;
ಹೊಸತು: ನವೀನ; ಬಂದು: ಆಗಮಿಸು; ಪೂತುರೆ: ಭಲೇ, ಭೇಷ್; ವಸು: ದೇವತೆಗಳ ಒಂದು ವರ್ಗ; ಆದಿತ್ಯ: ಸೂರ್ಯ; ಭುಜಂಗ: ಹಾವು; ವಿಸರ: ವಿಸ್ತಾರ, ವ್ಯಾಪ್ತಿ; ಗಂಧರ್ವ: ದೇವಲೋಕದ ಸಂಗೀತಗಾರ; ಪ್ರಸರ: ಹರಡುವುದು; ಕಾಣಿಕೆ: ಉಡುಗೊರೆ, ದಕ್ಷಿಣೆ; ಪುರುಹೂತ: ಇಂದ್ರ; ನಂದನ: ಮಗ;

ಪದವಿಂಗಡಣೆ:
ನುಸಿಗಳ್+ಇವದಿರು +ಮರ್ತ್ಯರೆಂಬ್+ಅವರ್
ಒಸಗೆ+ಅಮರಾವತಿಯೊಳ್+ಏನಿದು
ಹೊಸತಲಾ +ಬಂದಾತನ್+ ಆರೋ +ಪೂತುರೇ+ಎನುತ
ವಸುಗಳ್+ಅದಿತ್ಯರು +ಭುಜಂಗಮ
ವಿಸರ +ಗಂಧರ್ವಾದಿ+ ದೇವ
ಪ್ರಸರ +ಬಂದುದು+ ಕಾಣಿಕೆಗೆ+ ಪುರುಹೂತ+ ನಂದನನ

ಅಚ್ಚರಿ:
(೧) ದೇವತೆಗಳ ವರ್ಗ: ಅದಿತ್ಯರು, ಭುಜಂಗ, ಗಂಧರ್ವ

ನಿಮ್ಮ ಟಿಪ್ಪಣಿ ಬರೆಯಿರಿ