ಪದ್ಯ ೮೪: ಅರ್ಜುನನು ಹೇಗೆ ಪ್ರಜ್ವಲಿಸಿದನು?

ನೂರು ಪಶುಗೆಡಹಿಗೆ ಸುರೇಂದ್ರನು
ಮಾರುವನು ಗದ್ದುಗೆಯ ಬರಿದೇ
ಸೂರೆಗೊಂಡನು ಸುರಪತಿಯ ಸಿಂಹಾಸನದ ಸಿರಿಯ
ಮೂರು ಯುಗದರಸುಗಳೊಳೀತಗೆ
ತೋರಲೆಣೆಯಿಲ್ಲೆನಲು ಶಕ್ರನ
ನೂರು ಮಡಿ ತೇಜದಲಿ ತೊಳತೊಳಗಿದನು ಕಲಿಪಾರ್ಥ (ಅರಣ್ಯ ಪರ್ವ, ೮ ಸಂಧಿ, ೮೪ ಪದ್ಯ)

ತಾತ್ಪರ್ಯ:
ನೂರು ಅಶ್ವಮೇಧಗಳನ್ನು ಮಾಡಿದಂತವನಿಗೆ ಇಂದ್ರನು ತನ್ನ ಸಿಂಹಾಸನದಲ್ಲಿ ಸ್ಥಳ ಕೊಡುತ್ತಾನೆ. ಇವನಾದರೋ ಏನೂ ಇಲ್ಲದೆ ಇಂದ್ರನ ಸಿಂಹಾಸನವನ್ನು ಏರಿದನು. ಕೃತ, ತ್ರೇತಾ, ದ್ವಾಪರ ಯುಗಗಳ ಯಾವ ಅರಸರೂ ಇವನಿಗೆ ಸಮನಲ್ಲ ಎನ್ನುವಂತೆ ಅರ್ಜುನನು
ಇಂದ್ರನ ನೂರು ಪಟ್ಟು ತೇಜಸ್ಸಿನಿಂದ ಬೆಳಗಿದನು.

ಅರ್ಥ:
ನೂರು: ಶತ; ಪಶು: ಮೃಗ; ಕೆಡಹು: ಸಾಯಿಸು, ಬಲಿಕೊಡು; ಸುರೇಂದ್ರ: ಇಂದ್ರ; ಮಾರು: ನೀಡು; ಗದ್ದುಗೆ: ಪೀಠ; ಬರಿ: ಪಕ್ಕ, ಸುಮ್ಮನೆ; ಸೂರೆ: ಸುಲಿಗೆ; ಸುರಪತಿ: ಇಂದ್ರ; ಸಿಂಹಾಸನ: ರಾಜರ ಆಸನ; ಸಿರಿ: ಐಶ್ವರ್ಯ; ಯುಗ: ದೀರ್ಘವಾದ ಕಾಲಖಂಡ; ಅರಸು: ರಾಜ; ತೋರಲು: ಗೋಚರಿಸಲು ಎಣೆ: ಸರಿಸಾಟಿ; ಶಕ್ರ: ಇಂದ್ರ; ಮಡಿ: ಪಟ್ಟು; ತೇಜ: ಪ್ರಕಾಶ; ತೊಳ: ಪ್ರಕಾಶಿಸು; ಕಲಿ: ಶೂರ;

ಪದವಿಂಗಡಣೆ:
ನೂರು +ಪಶುಗೆಡಹಿಗೆ+ ಸುರೇಂದ್ರನು
ಮಾರುವನು +ಗದ್ದುಗೆಯ+ ಬರಿದೇ
ಸೂರೆಗೊಂಡನು+ ಸುರಪತಿಯ+ ಸಿಂಹಾಸನದ+ ಸಿರಿಯ
ಮೂರು +ಯುಗದ್+ಅರಸುಗಳೊಳ್+ಈತಗೆ
ತೋರಲ್+ಎಣೆಯಿಲ್ಲ್+ಎನಲು +ಶಕ್ರನ
ನೂರು +ಮಡಿ +ತೇಜದಲಿ+ ತೊಳತೊಳಗಿದನು +ಕಲಿಪಾರ್ಥ

ಅಚ್ಚರಿ:
(೧) ಸ ಕಾರದ ಸಾಲು ಪದ – ಸೂರೆಗೊಂಡನು ಸುರಪತಿಯ ಸಿಂಹಾಸನದ ಸಿರಿಯ
(೨) ಸುರೇಂದ್ರ, ಸುರಪತಿ, ಶಕ್ರ – ಇಂದ್ರನನ್ನು ಕರೆದ ಬಗೆ

ನಿಮ್ಮ ಟಿಪ್ಪಣಿ ಬರೆಯಿರಿ