ಹೂಡಿಜಗವನು ಜಗದ ಜೀವರ
ಕೂಡೆ ಬೆರಸಿ ಸಮಸ್ತವಿಷಯದೊ
ಳಾಡಿ ಸೊಗಸುವನಾತನುಪಭೋಗ ಪ್ರಪಂಚದಲಿ
ಹೂಡದಳಿಯದ ಗಮಿಸಿ ಮರಳದ
ಕೂಡದಗಲದ ನಿತ್ಯ ತೃಪ್ತನಿ
ರೂಢನೊಡನೆಚ್ಚಾಡಿದೆವಲಾ ಶಿವ ಶಿವಾಯೆಂದ (ಅರಣ್ಯ ಪರ್ವ, ೭ ಸಂಧಿ, ೬೧ ಪದ್ಯ)
ತಾತ್ಪರ್ಯ:
ಜಗತ್ತನ್ನು ಹೂಡಿ ಅಲ್ಲಿ ಜೀವರೊಡನೆ ಸೇರಿ ವಿಷಯ ಭೋಗಗಳಿಂದ ಸಂತೋಷ ಪಡುವವನೂ, ಸೃಷ್ಟಿಯಾಗದ, ನಾಶವಾಗದ ಹೋಗಿ ಬಾರದಿರುವ ಕೂಡದ ಅಗಲದ, ನಿತ್ಯತೃಪ್ತನೂ ನಿರೂಢನೂ ಆದ ಶಿವನೊಡನೆ ನಾನು ಯುದ್ಧ ಮಾಡಿದೆನಲ್ಲವೇ ಎಂದು ಅರ್ಜುನನು ತನ್ನ ತಪ್ಪು ತಿಳುವಳಿಕೆಗಾಗಿ ಕೊರಗಿದನು.
ಅರ್ಥ:
ಹೂಡು: ಸಿದ್ಧಪಡಿಸು; ಜಗ: ಪ್ರಪಂಚ; ಜೀವರ: ಜೀವಿ; ಕೂಡೆ: ಜೊತೆ; ಬೆರಸು: ಕಲಸು; ಸಮಸ್ತ: ಎಲ್ಲಾ; ವಿಷಯ: ಇಂದ್ರಿಯ ಗೋಚರವಾಗುವ ಶಬ್ದ; ಸೊಗಸು: ಎಲುವು; ಉಪಭೋಗ: ವಿಷಯಾನುಭವ; ಪ್ರಪಂಚ: ಜಗತ್ತು; ಅಳಿ: ಸಾವು, ನಾಶ; ಗಮಿಸು: ಚಲಿಸು; ಮರಳು: ಹಿಂದಿರುಗು; ಕೂಡು: ಜೊತೆಯಾಗು; ಅಗಲ: ವಿಸ್ತಾರ; ನಿತ್ಯ: ಯಾವಾಗಲು; ತೃಪ್ತ: ಸಂತುಷ್ಟಿ; ನಿರೂಢಿ: ಸಾಮಾನ್ಯ; ಎಚ್ಚು: ಬಾಣಬಿಡು;
ಪದವಿಂಗಡಣೆ:
ಹೂಡಿ+ಜಗವನು+ ಜಗದ+ ಜೀವರ
ಕೂಡೆ +ಬೆರಸಿ +ಸಮಸ್ತ+ವಿಷಯದೊಳ್
ಆಡಿ +ಸೊಗಸುವನ್+ಆತನ್+ಉಪಭೋಗ +ಪ್ರಪಂಚದಲಿ
ಹೂಡದ್+ಅಳಿಯದ +ಗಮಿಸಿ +ಮರಳದ
ಕೂಡದ್+ಅಗಲದ +ನಿತ್ಯ +ತೃಪ್ತ+ನಿ
ರೂಢನ್+ಒಡನ್+ಎಚ್ಚಾಡಿದೆವಲಾ +ಶಿವ +ಶಿವಾಯೆಂದ
ಅಚ್ಚರಿ:
(೧) ಶಂಕರನ ಗುಣಗಳ ವರ್ಣನೆ: ನಿರೂಢ, ಹೂಡದಳಿಯದ, ಕೂಡನಗಲದ, ನಿತ್ಯತೃಪ್ತ, ಗಮಿಸಿ ಮರಳದ