ಗಾಯವನು ಮನ್ನಿಸುತ ಶಿವ ಪೂ
ರಾಯದಲಿ ಮೆಟ್ಟಿದನು ಪಾರ್ಥನ
ಬಾಯೊಳೊಕ್ಕುದು ರುಧಿರ ನಾಸಿಕದೆರಡು ಬಾಹೆಯಲಿ
ನೋಯೆನೊಂದನು ಮೀರಿ ಮುನಿಯಲಿ
ಪಾಯವಾದುದಕಟಕಟಾ ತ
ಪ್ಪಾಯಿತೇ ತಪ್ಪಾಯ್ತೆನುತ ಮರುಗಿದನು ಮದನಾರಿ (ಅರಣ್ಯ ಪರ್ವ, ೭ ಸಂಧಿ, ೩೬ ಪದ್ಯ)
ತಾತ್ಪರ್ಯ:
ಅರ್ಜುನನ ಘಾತದಿಂದ ಆದ ಪೆಟ್ಟನ್ನು ಸೈರಿಸಿ, ಶಿವನು ಅರ್ಜುನನನ್ನು ಪೂರ್ಣ ಶಕ್ತಿಯಿಂದ ಮೆಟ್ಟಿದನು. ಅರ್ಜುನನ ಬಾಯಲ್ಲಿ ಮೂಗಿನ ಎರಡು ಹೊಳ್ಳೆಗಳಲ್ಲಿ ರಕ್ತ ಬಂದಿತು. ಅರ್ಜುನನಿಗೆ ನೋವಾಯಿತೆಂದುಕೊಂಡು ಶಿವನು ಬಹಳವಾಗಿ ನೊಂದನು. ನಾನು ಸ್ವಲ್ಪ ಕೋಪಗೊಂಡುದರಿಂದ ತಪ್ಪಾಯಿತೇ, ನನ್ನಿಂದೇನಾದರೂ ತಪ್ಪಾಯಿತೇ ಎಂದು ಶಿವನು ಮರುಗಿದನು.
ಅರ್ಥ:
ಗಾಯ: ಪೆಟ್ಟು; ಮನ್ನಿಸು: ಒಪ್ಪು, ಅಂಗೀಕರಿಸು; ಶಿವ: ಶಂಕರ; ಪೂರಾಯ: ಪರಿಪೂರ್ಣ; ಮೆಟ್ಟು: ತುಳಿತ; ಬಾಯಿ: ಮುಖದ ಅವಯವ; ಉಕ್ಕು: ಹೊಮ್ಮಿ ಬರು; ರುಧಿರ: ರಕ್ತ; ನಾಸಿಕ: ಮೂಗು; ಬಾಹೆ: ಪಾರ್ಶ್ವ, ಹೊರವಲಯ; ಮೀರು: ಉಲ್ಲಂಘಿಸು; ಮುನಿ: ಸಿಟ್ಟಾಗು, ಕೋಪಗೊಳ್ಳು; ಅಪಾಯ: ಕೇಡು, ತೊಂದರೆ; ಅಕಟಕಟಾ: ಅಯ್ಯೋ; ತಪ್ಪು: ಸುಳ್ಳಾಗು; ಮರುಗು: ತಳಮಳ, ಸಂಕಟ; ಮದನಾರಿ: ಶಿವ, ಮದನ ವೈರಿ;
ಪದವಿಂಗಡಣೆ:
ಗಾಯವನು +ಮನ್ನಿಸುತ +ಶಿವ +ಪೂ
ರಾಯದಲಿ+ ಮೆಟ್ಟಿದನು +ಪಾರ್ಥನ
ಬಾಯೊಳ್+ಉಕ್ಕುದು +ರುಧಿರ +ನಾಸಿಕದ್+ಎರಡು+ ಬಾಹೆಯಲಿ
ನೋಯೆನೊಂದನು +ಮೀರಿ +ಮುನಿಯಲಿ
ಪಾಯವಾದುದ್+ಅಕಟಕಟಾ+ ತ
ಪ್ಪಾಯಿತೇ +ತಪ್ಪಾಯ್ತೆನುತ +ಮರುಗಿದನು +ಮದನಾರಿ
ಅಚ್ಚರಿ:
(೧) ಶಿವನು ದುಃಖಿಸಿದ ಪರಿ – ನೋಯೆನೊಂದನು ಮೀರಿ ಮುನಿಯಲಿ ಪಾಯವಾದುದಕಟಕಟಾ ತಪ್ಪಾಯಿತೇ ತಪ್ಪಾಯ್ತೆನುತ ಮರುಗಿದನು ಮದನಾರಿ