ಈತ ನರನೆಂಬುವ ಕಣಾ ಸಂ
ಗಾತಿ ನಾರಾಯಣ ಋಷಿಗೆ ತಾ
ನೀತಗಳು ಹರಿಯಂಶ ಭೂತರು ಭಕ್ತರಿವರೆಮಗೆ
ಈತನೆಮ್ಮಯ ಪಾಶುಪತ ವಿ
ಖ್ಯಾತ ಬಾಣವ ಬೇಡಿ ತಪದಲಿ
ವೀತರಾಗದ್ವೇಷನಾದನು ಕಾಂತೆ ಕೇಳೆಂದ (ಅರಣ್ಯ ಪರ್ವ, ೭ ಸಂಧಿ, ೨೬ ಪದ್ಯ)
ತಾತ್ಪರ್ಯ:
ಪ್ರಿಯೆ ಪಾರ್ವತಿ ಕೇಳು, ಇವನು ನರನೆಂಬ ಋಷಿ, ಇವನು ನಾರಾಯಣ ಋಷಿಯ ಸ್ನೇಹಿತ, ಇವರು ವಿಷ್ಣುವಿನ ಅಂಶ ಸಂಭೂತರು, ಇವನು ನಮ್ಮ ಭಕ್ತನು, ಇವನು ತಪಸ್ಸು ಮಾಡಿ ಪಾಶ್ಪತಾಸ್ತ್ರವನ್ನು ಬೇಡಿಕೊಂಡು ರಾಗ ದ್ವೇಷಗಳನ್ನು ಕಳೆದುಕೊಂಡವನು ಎಂದು ಹೇಳಿದನು.
ಅರ್ಥ:
ನರ: ಅರ್ಜುನ; ಸಂಗಾತಿ: ಜೊತೆ; ಋಷಿ: ಮುನಿ; ಅಂಶ: ಭಾಗ, ಅವತಾರ ರೂಪ; ಭೂತ:ಪರಮಾತ್ಮ; ಭಕ್ತ: ಆರಾಧಕ; ವಿಖ್ಯಾತ: ಪ್ರಸಿದ್ಧ; ಬಾಣ: ಶರ; ಬೇಡು: ಕೇಳು; ತಪ: ಧ್ಯಾನ; ವೀತ: ಕಳೆದ, ಬಿಟ್ಟ; ರಾಗ:ಪ್ರೀತಿ, ಮೋಹ; ದ್ವೇಷ: ಹಗೆ, ವೈರತ್ವ; ಕಾಂತೆ: ಪ್ರಿಯತಮೆ; ಕೇಳು: ಆಲಿಸು;
ಪದವಿಂಗಡಣೆ:
ಈತ +ನರನ್+ಎಂಬುವ +ಕಣಾ+ ಸಂ
ಗಾತಿ+ ನಾರಾಯಣ+ ಋಷಿಗೆ+ ತಾನ್
ಈತಗಳು+ ಹರಿಯಂಶ +ಭೂತರು +ಭಕ್ತರ್+ಇವರ್+ಎಮಗೆ
ಈತನ್+ಎಮ್ಮಯ +ಪಾಶುಪತ+ ವಿ
ಖ್ಯಾತ +ಬಾಣವ +ಬೇಡಿ +ತಪದಲಿ
ವೀತ+ರಾಗ+ದ್ವೇಷನಾದನು+ ಕಾಂತೆ +ಕೇಳೆಂದ
ಅಚ್ಚರಿ:
(೧) ಈತ, ಖ್ಯಾತ, ವೀತ – ಪ್ರಾಸ ಪದಗಳು
(೨) ನರ, ನಾರಾಯಣರ ಪರಿಚಯ ಮಾಡುವ ಪದ್ಯ