ಜಯವಹುದೆ ನಿರ್ವೇದದಲಿ ನಿ
ರ್ಭಯವಹುದೆ ಬಿಸುಸುಯ್ಲಿನಲಿ ನಿ
ರ್ಣಯವಹುದೆ ರಿಪುನೃಪರಿಗಿದು ತಾ ನೀತಿಮಾರ್ಗದಲಿ
ನಿಯತವಿದು ನಿಶ್ಯೇಷ ನಿಮ್ಮ
ನ್ವಯಕೆ ನಿರ್ವಾಹವನು ಗಾಂಧಾ
ರಿಯಲಿ ನಿಮ್ಮಯ್ಯನಲಿ ಬೆಸಗೊಳ್ಳೆಂದನಾ ಶಕುನಿ (ಸಭಾ ಪರ್ವ, ೧೭ ಸಂಧಿ, ೭ ಪದ್ಯ)
ತಾತ್ಪರ್ಯ:
ಎಲೇ ದುರ್ಯೋಧನ, ನೀನು ವೈರಾಗ್ಯದಿಂದಿದ್ದರೆ ಜಯವುಂಟಾಗುವುದೇ? ಬಿಸಿಯಾಗಿ ನಿಟ್ಟುಸಿರಿಟ್ಟರೆ ಭಯವು ಹೋಗುತ್ತದೆಯೇ? ಶತ್ರುರಾಜರು ಅಡುಗುವರೇ? ನೀತಿಯನ್ನೇ ನಂಬಿಕೊಂಡು ನಡೆದರೆ ನಮಗೇನು ಉಳಿಯುವುದಿಲ್ಲ, ನಿಮ್ಮ ತಂದೆ ತಾಯಿಗಳನ್ನು ನಿಮ್ಮ ವಂಶಕ್ಕೆ ಮುಂದೇನು ಗತಿ ಎಂದು ಕೇಳಿರಿ, ಎಂದು ಶಕುನಿ ದುರ್ಯೋಧನನಿಗೆ ಸಲಹೆ ನೀಡಿದನು.
ಅರ್ಥ:
ಜಯ: ಗೆಲುವು; ನಿರ್ವೇದ: ವೈರಾಗ್ಯ, ವಿರಕ್ತಿ; ನಿರ್ಭಯ: ನಿರ್ಭೀತಿ, ಧೈರ್ಯ; ಬಿಸುಸುಯ್: ನಿಟ್ಟುಸಿರುಬಿಡು; ನಿರ್ಣಯ: ತೀರ್ಮಾನ; ರಿಪು: ವೈರಿ; ನೃಪ: ರಾಜ; ನೀತಿ: ವಿವೇಚನೆ; ಮಾರ್ಗ: ದಾರಿ; ನಿಯತ: ನಿಶ್ಚಿತವಾದುದು; ನಿಶ್ಯೇಷ: ಏನು ಉಳಿಯದ; ಅನ್ವಯ: ಹೊಂದಿಕೆ ಅಥವಾ ವಂಶ; ನಿರ್ವಾಹ: ಆಧಾರ, ಆಶ್ರಯ; ಅಯ್ಯ: ತಂದೆ; ಬೆಸಗೊಳ್: ಕೇಳು;
ಪದವಿಂಗಡಣೆ:
ಜಯವಹುದೆ +ನಿರ್ವೇದದಲಿ+ ನಿ
ರ್ಭಯವಹುದೆ+ ಬಿಸುಸುಯ್ಲಿನಲಿ+ ನಿ
ರ್ಣಯವಹುದೆ+ ರಿಪು+ನೃಪರಿಗಿದು +ತಾ +ನೀತಿಮಾರ್ಗದಲಿ
ನಿಯತವಿದು +ನಿಶ್ಯೇಷ +ನಿಮ್
ಅನ್ವಯಕೆ +ನಿರ್ವಾಹವನು+ ಗಾಂಧಾ
ರಿಯಲಿ +ನಿಮ್ಮಯ್ಯನಲಿ+ ಬೆಸಗೊಳ್ಳೆಂದನಾ +ಶಕುನಿ
ಅಚ್ಚರಿ:
(೧) ನಿ ಕಾರ ಪದಗಳ ಬಳಕೆ – ನಿರ್ವೇದ, ನಿರ್ಭಯ, ನಿರ್ಣಯ, ನೀತಿಮಾರ್ಗ, ನಿಯತ, ನಿಶ್ಯೇಷ, ನಿಮ್ಮನ್ವಯ, ನಿರ್ವಾಹ, ನಿಮ್ಮಯ್ಯ