ಬಾಯ ಬಿಡಲೇಕಕಟ ಬಳಲಿದೆ
ತಾಯೆ ಕೈದೋರಿಸರು ನಿನ್ನಯ
ರಾಯರೈವರು ಕೆಲಬಲದ ಜನರೇನ ಮಾಡುವರು
ನ್ಯಾಯ ನಿನ್ನದು ದೈವದೊಲುಮೆಯ
ದಾಯ ತಪ್ಪಿತು ಬರಿದೆ ಧೈರ್ಯವ
ಬೀಯ ಮಾಡದಿರೆಂದು ನುಡಿದನು ವಿದುರನಂಗನೆಗೆ (ಸಭಾ ಪರ್ವ, ೧೬ ಸಂಧಿ, ೨೯ ಪದ್ಯ)
ತಾತ್ಪರ್ಯ:
ದ್ರೌಪದಿಯ ಅಳಲನ್ನು ಕೇಳಿ ವಿದುರನು, ಎಲೈ ದ್ರೌಪದಿಯೇ, ಸುಮ್ಮನೆ ಏಕೆ ಗೋಳಿಡುವೆ? ಅತ್ತು ಅತ್ತು ನೀನು ಆಯಾಸಗೊಳ್ಳುವೆ, ನಿನ್ನ ಪತಿಗಳು ತಮ್ಮ ಪೌರುಷವನ್ನು ತೋರಿಸಲಿಲ್ಲ. ಉಳಿದವರಾದರೂ ಏನು ಮಾಡಿಯಾರು? ನಿನ್ನ ಮಾತು ನ್ಯಾಯ ಆದರೆ ದೈವವು ಯಾರಿಗೆ ಅನುಗ್ರಹ ಮಾಡಬೇಕೆಂಬ ಲೆಕ್ಕದಲ್ಲಿ ತಪ್ಪಿದೆ, ಸುಮ್ಮನೆ ಎದೆಗುಂದಬೇಡ ಎಂದು ವಿದುರನು ದ್ರೌಪದಿಗೆ ಸಹಾನುಭೂತಿಯ ಮಾತುಗಳನ್ನು ಆಡಿದನು.
ಅರ್ಥ:
ಬಾಯಿ: ಮುಖದ ಒಂದು ಅಂಗ; ಬಾಯ ಬಿಡು: ಮೊರಳಿಡು, ಹಲುಬು; ಅಕಟ: ಅಯ್ಯೋ; ಬಳಲು: ಆಯಾಸ; ತಾಯೆ: ಮಾತೆ; ಕೈದೋರು: ಪೌರುಷವನ್ನು ಬೀರು; ರಾಯರು: ಒಡೆಯ, ರಾಜ; ಕೆಲಬಲ: ಅಕ್ಕಪಕ್ಕ; ಜನರು: ಮನುಷ್ಯರು; ನ್ಯಾಯ: ಸರಿಯಾದುದು; ದೈವ: ಭಗವಂತ; ಒಲುಮೆ: ಪ್ರೀತಿ; ಆಯ: ರೀತಿ, ಪರಿಮಿತಿ; ತಪ್ಪು: ಸರಿಯಿಲ್ಲದ; ಬರಿ: ಕೇವಲ; ಧೈರ್ಯ: ದಿಟ್ಟತನ; ಬೀಯ: ವ್ಯಯ; ನುಡಿ: ಮಾತಾಡು; ಅಂಗನೆ: ಹೆಣ್ಣು;
ಪದವಿಂಗಡಣೆ:
ಬಾಯ +ಬಿಡಲೇಕ್+ಅಕಟ +ಬಳಲಿದೆ
ತಾಯೆ +ಕೈದೋರಿಸರು +ನಿನ್ನಯ
ರಾಯರ್+ಐವರು +ಕೆಲಬಲದ +ಜನರ್+ಏನ +ಮಾಡುವರು
ನ್ಯಾಯ +ನಿನ್ನದು +ದೈವದ್+ಒಲುಮೆಯದ್
ಆಯ +ತಪ್ಪಿತು +ಬರಿದೆ+ ಧೈರ್ಯವ
ಬೀಯ +ಮಾಡದಿರ್+ಎಂದು+ ನುಡಿದನು+ ವಿದುರನ್+ಅಂಗನೆಗೆ
ಅಚ್ಚರಿ:
(೧) ವಿದುರನು ಧೈರ್ಯ ಹೇಳುವ ಪರಿ – ನ್ಯಾಯ ನಿನ್ನದು ದೈವದೊಲುಮೆಯದಾಯ ತಪ್ಪಿತು ಬರಿದೆ ಧೈರ್ಯವ ಬೀಯ ಮಾಡದಿರೆಂದು ನುಡಿದನು ವಿದುರನಂಗನೆಗೆ