ನೂಕಿಸಾ ತೊತ್ತಿರ ಮನೆಗೆ ತಡ
ವೇಕೆ ತರುಣಿಯನಿನ್ನು ನೀನು ವಿ
ವೇಕದಲಿ ನನ್ನಂತೆ ತೆಗೆ ಸಾಕಿವರ ಮಾತೇನು
ಈ ಕುಠಾರರ ಕಳುಹಿ ಕಳೆ ತಾ
ವೇಕೆ ನೃಪಸಭೆಯಲಿ ವರಾಸನ
ವೇಕೆನುತ ಕುರುಪತಿಗೆ ನುಡಿದನು ಕರ್ಣ ಖಾತಿಯಲಿ (ಸಭಾ ಪರ್ವ, ೧೬ ಸಂಧಿ, ೨೦ ಪದ್ಯ)
ತಾತ್ಪರ್ಯ:
ರಾಜ, ದಾಸಿಯಾದ ದ್ರೌಪದಿಯನ್ನು ನೀನು ದಾಸಿಯರ ಮನೆಗೆ ನೂಕು, ನಾನು ಹೇಳಿದಂತೆ ಯುಕ್ತಾಯುಕ್ತತೆಯಲ್ಲಿ ನಿರ್ಧರಿಸು, ತಡಮಾಡಬೇಡ ಮತ್ತು ಇವರೊಡನೆ ಹೆಚ್ಚಿನ ಮಾತು ಸಹ ಬೇಕಿಲ್ಲ. ಈ ದುಷ್ಟರನ್ನು ರಾಜಸಭೆಯಿಂದ ಕಳುಹಿಸು, ಇವರಿಗೇಕೆ ಇಲ್ಲಿಯ ಶ್ರೇಷ್ಠವಾದ ಆಸನ ಎಂದು ಕರ್ಣನು ಕೋಪದಿಂದ ನುಡಿದನು.
ಅರ್ಥ:
ನೂಕು: ತಳ್ಳು; ತೊತ್ತು: ದಾಸಿ; ಮನೆ: ಆಲಯ; ತಡ: ನಿಧಾನ; ತರುಣಿ: ಹೆಣ್ಣು; ವಿವೇಕ: ಯುಕ್ತಾಯುಕ್ತ ವಿಚಾರ, ವಿವೇಚನೆ; ತೆಗೆ: ಹೊರಹಾಕು; ಸಾಕು: ನಿಲ್ಲಿಸು; ಮಾತು: ವಾಣಿ; ಕುಠಾರ: ದುಷ್ಟ; ಕಳುಹು: ನಿರ್ಗಮಿಸು; ಕಳೆ: ಬೀಡು, ತೊರೆ; ನೃಪ: ರಾಜ; ಸಭೆ: ಓಲಗ; ವರಾಸನ: ಶ್ರೇಷ್ಠವಾದ ಆಸನ; ಖಾತಿ: ಕೋಪ, ಕ್ರೋಧ;
ಪದವಿಂಗಡಣೆ:
ನೂಕಿಸ್+ಆ+ ತೊತ್ತಿರ+ ಮನೆಗೆ+ ತಡ
ವೇಕೆ +ತರುಣಿಯನ್+ಇನ್ನು +ನೀನು +ವಿ
ವೇಕದಲಿ+ ನನ್ನಂತೆ +ತೆಗೆ +ಸಾಕಿವರ+ ಮಾತೇನು
ಈ +ಕುಠಾರರ+ ಕಳುಹಿ +ಕಳೆ +ತಾ
ವೇಕೆ +ನೃಪಸಭೆಯಲಿ +ವರಾಸನವ್
ಏಕೆನುತ+ ಕುರುಪತಿಗೆ+ ನುಡಿದನು +ಕರ್ಣ +ಖಾತಿಯಲಿ
ಅಚ್ಚರಿ:
(೧) ಕ ಕಾರದ ತ್ರಿವಳಿ ಪದ – ಕುಠಾರರ ಕಳುಹಿ ಕಳೆ