ಅಹಹ ದೈವಪ್ರೇಮವಿದೆಲಾ
ಮಹಿಳೆಯಲಿ ಮಾನವರ ಕೃತಿ ಗೆಲ
ಬಹುದೆ ಗರುವೆಯ ಗಾಹಿಸಿತು ಗೋವಿಂದನಭಿಧಾನ
ಅಹಿತವಹ ಕುರುರಾಜ ಕುಲಘನ
ಗಹನ ಭೀಮಧನಂಜಯಾದ್ಯರ
ವಿಹರಣದಲಿ ವಿನಾಶವಹುದೆಂದುದು ಬುಧಸ್ತೋಮ (ಸಭಾ ಪರ್ವ, ೧೬ ಸಂಧಿ, ೪ ಪದ್ಯ)
ತಾತ್ಪರ್ಯ:
ಆಹಾ! ದೈವಪ್ರೇಮವೆಂದರೆ ಇದು. ಈ ಮಹಿಳೆಯನ್ನು ಮನುಷ್ಯರ ದುರ್ಬಲಯತ್ನಗಳು ಸಂಚುಗಳು ಏನು ಮಾಡಿಯಾವು? ಶ್ರೀಕೃಷ್ಣನ ನಾಮಸ್ಮರಣೆಯೇ ಇವಳನ್ನು ಕಾಪಾಡಿತು. ಪಾಂಡವರ ಶತ್ರುಗಳಾದ ಕೌರವರೆಂಬ ಕಾಡು ಭೀಮಾರ್ಜುನರ ತುಳಿತದಿಂದ ನಾಶವಾಗುತ್ತದೆ ಎಂದು ಸಭೆಯಲ್ಲಿದ್ದ ಪಂಡಿತರಗುಂಪು ಹೇಳಿದರು.
ಅರ್ಥ:
ದೈವ: ಭಗವಂತ; ಪ್ರೇಮ: ಒಲವು; ಮಹಿಳೆ: ಸ್ತ್ರೀ; ಮಾನವ: ನರ, ಮನುಷ್ಯ; ಕೃತಿ: ಕಾರ್ಯ; ಗೆಲವು: ಜಯ; ಗರುವೆ:ಹಿರಿಯಳು; ಗಾಹು: ತಿಳುವಳಿಕೆ, ಮೋಸ; ಅಭಿಧಾನ: ಹೆಸರು , ಮಾತು; ಅಹಿತ: ವೈರಿ; ರಾಜ: ನೃಪ; ಕುರುರಾಜ: ದುರ್ಯೋಧನ; ಕುಲ: ವಂಶ; ಘನ: ಶ್ರೇಷ್ಠ; ಗಹನ: ಕಾಡು, ಅಡವಿ; ಆದಿ: ಮೊದಲಾದ; ವಿಹರಣ: ತಿರುಗಾಟ; ವಿನಾಶ: ಹಾಳು, ಸರ್ವನಾಶ; ಬುಧ: ಪಂಡಿತ; ಸ್ತೋಮ: ಗುಂಪು;
ಪದವಿಂಗಡಣೆ:
ಅಹಹ +ದೈವ+ಪ್ರೇಮವಿದೆಲ
ಆ+ಮಹಿಳೆಯಲಿ+ ಮಾನವರ +ಕೃತಿ +ಗೆಲ
ಬಹುದೆ +ಗರುವೆಯ +ಗಾಹಿಸಿತು +ಗೋವಿಂದನ್+ಅಭಿಧಾನ
ಅಹಿತವಹ+ ಕುರುರಾಜ +ಕುಲಘನ
ಗಹನ+ ಭೀಮ+ಧನಂಜಯಾದ್ಯರ
ವಿಹರಣದಲಿ +ವಿನಾಶವಹುದ್+ಎಂದುದು +ಬುಧ+ಸ್ತೋಮ
ಅಚ್ಚರಿ:
(೧) ಗ ಕಾರದ ಸಾಲು ಪದಗಳು – ಗೆಲಬಹುದೆ ಗರುವೆಯ ಗಾಹಿಸಿತು ಗೋವಿಂದನಭಿಧಾನ
(೨) ಕುರುಕುಲದ ನಾಶವನ್ನು ಹೇಳುವ ಪರಿ – ಅಹಿತವಹ ಕುರುರಾಜ ಕುಲಘನ ಗಹನ ಭೀಮಧನಂಜಯಾದ್ಯರ ವಿಹರಣದಲಿ ವಿನಾಶವಹುದೆಂದುದು ಬುಧಸ್ತೋಮ