ಪದ್ಯ ೨೩: ಧರ್ಮಜನು ಭೀಮನ ನಂತರ ಯಾರನ್ನು ಪಣಕ್ಕೆ ಒಡ್ಡಿದನು?

ಆ ಹಲಗೆ ಸೋತುದು ಯುಧಿಷ್ಠಿರ
ನೂಹೆ ಮುರಿದುದು ಮುಂದುಗೆಟ್ಟನು
ರಾಹು ಹಾಯ್ದ ಹಿಮಾಂಶುಮಂಡಲದುಳಿದ ಕಳೆಯಂತೆ
ತೋಹಿನಲಿ ತುಟ್ಟಿಸಿದ ಮೃಗದವೊ
ಲೂಹೆಯಳಿದುದು ಯಂತ್ರ ಸೂತ್ರದ
ಹೂಹೆಯಂತಿರೆ ಹಗೆಗೆ ತೆತ್ತನು ನೃಪತಿ ತನುಧನವ (ಸಭಾ ಪರ್ವ, ೧೫ ಸಂಧಿ, ೨೩ ಪದ್ಯ)

ತಾತ್ಪರ್ಯ:
ಧರ್ಮಜನು ಆ ಆಟವನ್ನು ಸೋತನು. ಅವನ ಲೆಕ್ಕಾಚಾರ ತಪ್ಪಿತು, ಮುಂದೆ ತೋರದಂತಾಯಿತು, ರಾಹುವಿನಿಂದ ಕಳೆಗುಂದಿದ ಚಂದ್ರಮಂಡಲದಂತೆ, ಸಂಕೇತ ಸ್ಥಾನದಲ್ಲಿ ಬೇಟೆಗಾರರಿಗೆ ಸಿಕ್ಕಿಬಿದ್ದ ಮೃಗದಂತೆ, ಯಂತ್ರದ ಸೂತ್ರಕ್ಕೆ ಸಿಕ್ಕ ಗೊಂಬೆಯಂತೆ, ನಿಸ್ತೇಜನಾದ ಧರ್ಮರಾಯನು ವಿರೋಧಿಗೆ ತನ್ನ ದೇಹವನ್ನೇ ಪಣವಾಗಿ ಒಡ್ಡಿದನು.

ಅರ್ಥ:
ಹಲಗೆ: ಪಗಡೆಯ ಹಾಸು; ಸೋತು: ಪರಾಭವ; ಉಹೆ: ಅಂದಾಜು; ಮುರಿ: ಸೀಳು; ಮುಂದುಗೆಡು: ಮುಂದೆ ತೋರು; ಹಾಯಿ: ಚಾಚು, ಮೇಲೆ ಬೀಳು; ಹಿಮಾಂಶು: ಚಂದ್ರ; ಮಂಡಲ: ವರ್ತುಲಾಕಾರ; ಉಳಿದ: ಮಿಕ್ಕ; ಕಳೆ:ಕಾಂತಿ, ತೇಜ; ತೋಹು: ಬೇಟೆಯಾಡಲು ವನ್ಯಮೃಗಗಳನ್ನು ಆಕರ್ಷಿಸುವ ಸ್ಥಳ; ತುಟ್ಟಿಸು: ಶಕ್ತಿಗುಂದು, ಬಲಹೀನವಾಗು; ಮೃಗ: ಪ್ರಾಣಿ; ಅಳಿ: ನಾಶ; ಯಂತ್ರ: ಉಪಕರಣ; ಸೂತ್ರ: ನಿಯಮ; ಹಗೆ: ವೈರ; ತೆತ್ತು: ನೀಡು; ತನು: ದೇಹ; ಧನ: ಐಶ್ವರ್ಯ;

ಪದವಿಂಗಡಣೆ:
ಆ +ಹಲಗೆ +ಸೋತುದು +ಯುಧಿಷ್ಠಿರನ್
ಊಹೆ +ಮುರಿದುದು +ಮುಂದುಗೆಟ್ಟನು
ರಾಹು+ ಹಾಯ್ದ +ಹಿಮಾಂಶು+ಮಂಡಲದ್+ಉಳಿದ +ಕಳೆಯಂತೆ
ತೋಹಿನಲಿ+ ತುಟ್ಟಿಸಿದ +ಮೃಗದವೊಲ್
ಊಹೆ+ಅಳಿದುದು +ಯಂತ್ರ +ಸೂತ್ರದ
ಹೂಹೆಯಂತಿರೆ+ ಹಗೆಗೆ+ ತೆತ್ತನು +ನೃಪತಿ +ತನು+ಧನವ

ಅಚ್ಚರಿ:
(೧) ಉಪಮಾನದ ಪ್ರಯೋಗ – ರಾಹು ಹಾಯ್ದ ಹಿಮಾಂಶುಮಂಡಲದುಳಿದ ಕಳೆಯಂತೆ; ತೋಹಿನಲಿ ತುಟ್ಟಿಸಿದ ಮೃಗದವೊಲೂಹೆಯಳಿದುದು ಯಂತ್ರ ಸೂತ್ರದ ಹೂಹೆಯಂತಿರೆ

ನಿಮ್ಮ ಟಿಪ್ಪಣಿ ಬರೆಯಿರಿ