ಪದ್ಯ ೫೨: ದುರ್ಯೋಧನನು ಪಣಕ್ಕೆ ಏನನ್ನು ಇಟ್ಟನು?

ಕನಕಮಯ ರಥವೆರಡು ಸಾವಿರ
ಮೊನೆಗೆ ಹೂಡಿದವೆಂಟು ಸಾವಿರ
ವಿನುತ ವಾಜಿಗಳೊಡ್ಡವೆಂದನು ಧರ್ಮನಂದನನು
ಜನಪತಿಗೆ ತಾನೈಸಲೇ ಹಾ
ಯ್ಕೆನುತ ಸಾರಿಯ ಕೆದರಿದನು ದು
ರ್ಜನರಿಗೊಲಿದುದು ದೈವಗತಿ ಬೊಬ್ಬಿರಿದನಾ ಶಕುನಿ (ಸಭಾ ಪರ್ವ, ೧೪ ಸಂಧಿ, ೫೨ ಪದ್ಯ)

ತಾತ್ಪರ್ಯ:
ಬಂಗಾರದಿಂದ ಮಾಡಿದ ಎರಡು ಸಾವಿರ ರಥಗಳು, ಅವಕ್ಕೆ ಕಟ್ಟಿದ ಎಂಟು ಸಾವಿರ ಕುದುರೆಗಳು ನನ್ನ ಪಣ ಎಂದು ಧರ್ಮನಂದನನು ಒಡ್ಡಿದನು. ಇದೆಲ್ಲಾ ಕೌರವರಾಯನಿಗೆ ತಾನೆ ಎಂದು ಹೇಳುತ್ತಾ ಶಕುನಿಯು ಕಾಯಿಗಳನ್ನು ನಡೆಸಿದನು. ದೈವವು ದುಷ್ಟರಿಗೊಲಿಯಿತು ಎಂದು ಶಕುನಿಯು ಬೊಬ್ಬಿರಿದನು.

ಅರ್ಥ:
ಕನಕ: ಚಿನ್ನ, ಬಂಗಾರ; ರಥ: ಬಂಡಿ; ಸಾವಿರ: ಸಹಸ್ರ; ಮೊನೆ: ತುದಿ, ಕೊನೆ; ಹೂಡಿದ: ಜೋಡಿಸಿದ; ವಿನುತ: ಹೊಗಳಲ್ಪಟ್ಟ, ಸ್ತುತಿಗೊಂಡ; ವಾಜಿ: ಕುದುರೆ; ಒಡ್ಡ: ಜೂಜಿನಲ್ಲಿ ಪಣಕ್ಕೆ ಇಡುವ ದ್ರವ್ಯ; ನಂದನ: ಮಗ; ಜನಪ: ರಾಜ; ಐಸಲೇ: ಅಲ್ಲವೇ; ಹಾಯ್ಕು: ಹಾಕು, ಹೊರಬೀಳು; ಸಾರಿ: ಪಗಡೆಯಾಟದಲ್ಲಿ ಉಪಯೋಗಿಸುವ ಕಾಯಿ; ಕೆದರು: ಹರಡು; ದುರ್ಜನ: ದುಷ್ಟ; ಒಲಿ: ಬಯಸು, ಅಪೇಕ್ಷಿಸು; ದೈವ: ಭಗವಂತ; ಗತಿ: ಅವಸ್ಥೆ, ದಿಕ್ಕು; ಬೊಬ್ಬಿರಿ: ಕೂಗು;

ಪದವಿಂಗಡಣೆ:
ಕನಕಮಯ +ರಥವ್+ಎರಡು +ಸಾವಿರ
ಮೊನೆಗೆ +ಹೂಡಿದವ್+ಎಂಟು +ಸಾವಿರ
ವಿನುತ+ ವಾಜಿಗಳ್+ಒಡ್ಡವ್+ಎಂದನು +ಧರ್ಮನಂದನನು
ಜನಪತಿಗೆ +ತಾನ್+ಐಸಲೇ +ಹಾ
ಯ್ಕೆನುತ +ಸಾರಿಯ +ಕೆದರಿದನು+ ದು
ರ್ಜನರಿಗ್+ಒಲಿದುದು +ದೈವಗತಿ +ಬೊಬ್ಬಿರಿದನಾ +ಶಕುನಿ

ಅಚ್ಚರಿ:
(೧) ಸಾವಿರ – ೧, ೨ ಸಾಲಿನ ಕೊನೆ ಪದ

ನಿಮ್ಮ ಟಿಪ್ಪಣಿ ಬರೆಯಿರಿ