ಕನಕಮಯ ರಥವೆರಡು ಸಾವಿರ
ಮೊನೆಗೆ ಹೂಡಿದವೆಂಟು ಸಾವಿರ
ವಿನುತ ವಾಜಿಗಳೊಡ್ಡವೆಂದನು ಧರ್ಮನಂದನನು
ಜನಪತಿಗೆ ತಾನೈಸಲೇ ಹಾ
ಯ್ಕೆನುತ ಸಾರಿಯ ಕೆದರಿದನು ದು
ರ್ಜನರಿಗೊಲಿದುದು ದೈವಗತಿ ಬೊಬ್ಬಿರಿದನಾ ಶಕುನಿ (ಸಭಾ ಪರ್ವ, ೧೪ ಸಂಧಿ, ೫೨ ಪದ್ಯ)
ತಾತ್ಪರ್ಯ:
ಬಂಗಾರದಿಂದ ಮಾಡಿದ ಎರಡು ಸಾವಿರ ರಥಗಳು, ಅವಕ್ಕೆ ಕಟ್ಟಿದ ಎಂಟು ಸಾವಿರ ಕುದುರೆಗಳು ನನ್ನ ಪಣ ಎಂದು ಧರ್ಮನಂದನನು ಒಡ್ಡಿದನು. ಇದೆಲ್ಲಾ ಕೌರವರಾಯನಿಗೆ ತಾನೆ ಎಂದು ಹೇಳುತ್ತಾ ಶಕುನಿಯು ಕಾಯಿಗಳನ್ನು ನಡೆಸಿದನು. ದೈವವು ದುಷ್ಟರಿಗೊಲಿಯಿತು ಎಂದು ಶಕುನಿಯು ಬೊಬ್ಬಿರಿದನು.
ಅರ್ಥ:
ಕನಕ: ಚಿನ್ನ, ಬಂಗಾರ; ರಥ: ಬಂಡಿ; ಸಾವಿರ: ಸಹಸ್ರ; ಮೊನೆ: ತುದಿ, ಕೊನೆ; ಹೂಡಿದ: ಜೋಡಿಸಿದ; ವಿನುತ: ಹೊಗಳಲ್ಪಟ್ಟ, ಸ್ತುತಿಗೊಂಡ; ವಾಜಿ: ಕುದುರೆ; ಒಡ್ಡ: ಜೂಜಿನಲ್ಲಿ ಪಣಕ್ಕೆ ಇಡುವ ದ್ರವ್ಯ; ನಂದನ: ಮಗ; ಜನಪ: ರಾಜ; ಐಸಲೇ: ಅಲ್ಲವೇ; ಹಾಯ್ಕು: ಹಾಕು, ಹೊರಬೀಳು; ಸಾರಿ: ಪಗಡೆಯಾಟದಲ್ಲಿ ಉಪಯೋಗಿಸುವ ಕಾಯಿ; ಕೆದರು: ಹರಡು; ದುರ್ಜನ: ದುಷ್ಟ; ಒಲಿ: ಬಯಸು, ಅಪೇಕ್ಷಿಸು; ದೈವ: ಭಗವಂತ; ಗತಿ: ಅವಸ್ಥೆ, ದಿಕ್ಕು; ಬೊಬ್ಬಿರಿ: ಕೂಗು;
ಪದವಿಂಗಡಣೆ:
ಕನಕಮಯ +ರಥವ್+ಎರಡು +ಸಾವಿರ
ಮೊನೆಗೆ +ಹೂಡಿದವ್+ಎಂಟು +ಸಾವಿರ
ವಿನುತ+ ವಾಜಿಗಳ್+ಒಡ್ಡವ್+ಎಂದನು +ಧರ್ಮನಂದನನು
ಜನಪತಿಗೆ +ತಾನ್+ಐಸಲೇ +ಹಾ
ಯ್ಕೆನುತ +ಸಾರಿಯ +ಕೆದರಿದನು+ ದು
ರ್ಜನರಿಗ್+ಒಲಿದುದು +ದೈವಗತಿ +ಬೊಬ್ಬಿರಿದನಾ +ಶಕುನಿ
ಅಚ್ಚರಿ:
(೧) ಸಾವಿರ – ೧, ೨ ಸಾಲಿನ ಕೊನೆ ಪದ