ಪದ್ಯ ೭೦: ಗಾಂಧಾರಿಯು ಧೃತರಾಷ್ಟ್ರನಿಗೆ ಏನು ಹೇಳಿದಳು?

ಏಕೆ ನಿಮಗೀ ಚಿಂತೆಯಿಂದೆರ
ಡೌಕಿದವು ದುಷ್ಕಾರ್ಯ ಸಂಧಿ ವಿ
ವೇಕ ನಿಕರದಲೊರೆದು ಮೋಹರಿಸೊಂದು ಬಾಹೆಯಲಿ
ಈ ಕುರುವ್ರಜ ನೂರ ಹಿಡಿ ಕುಂ
ತೀ ಕುಮಾರರ ಬಿಡು ತನೂಜರ
ನೂಕು ಹಿಡಿ ಪಾಂಡವರನೆಂದಳು ಪತಿಗೆ ಗಾಂಧಾರಿ (ಸಭಾ ಪರ್ವ, ೧೩ ಸಂಧಿ, ೭೦ ಪದ್ಯ)

ತಾತ್ಪರ್ಯ:
ನಿಮಗೆ ಚಿಂತೆಯಾದರು ಏಕೆ, ಈಗ ಎರಡು ಕಾರ್ಯಗಳು ಎದುರಾಗಿವೆ, ವಿವೇಕದ ಕೆಲಸ ಅಥವ ದುಷ್ಕಾರ್ಯದಲ್ಲಿ ಕಾರ್ಯ. ನಮ್ಮ ಮಕ್ಕಳಾದ ನೂರ್ವರು ಕೌರವರನ್ನು ಹಿಡಿದು ಪಾಂಡವರನ್ನು ಬಿಡುವುದು, ಇಲ್ಲವೇ ನಮ್ಮ ಮಕ್ಕಳನ್ನು ಹೊರಹಾಕಿ ಪಾಂಡವರನ್ನು ಹಿಡಿಯುವುದು, ಎರಡರಲ್ಲೊಂದನ್ನು ಮಾಡಿದರಾಯಿತು ಎಂದಳು.

ಅರ್ಥ:
ಚಿಂತೆ: ಯೋಚನೆ; ಔಕು: ನೂಕು, ತಳ್ಳು; ದುಷ್ಕಾರ್ಯ: ಕೆಟ್ಟ ಕೆಲಸ; ವಿವೇಕ: ಯುಕ್ತಾಯುಕ್ತ ವಿಚಾರ, ವಿವೇಚನೆ; ಸಂಧಿ: ಸೇರಿಕೆ, ಸಂಯೋಗ; ನಿಕರ: ಗುಂಪು; ಒರೆ: ಶೋಧಿಸಿ ನೋಡು; ಮೋಹರ: ಯುದ್ಧ; ಬಾಹೆ: ಪಕ್ಕ, ಪಾರ್ಶ್ವ; ವ್ರಜ: ಗುಂಪು; ಹಿಡಿ: ಹಿಡಿಕೆ, ಕಾವು; ಬಿಡು: ತೊರೆ; ನೂಕು: ತಳ್ಳು; ತನೂಜ: ಮಕ್ಕಳು;

ಪದವಿಂಗಡಣೆ:
ಏಕೆ+ ನಿಮಗೀ +ಚಿಂತೆ+ಇಂದ್+ಎರಡ್
ಔಕಿದವು +ದುಷ್ಕಾರ್ಯ +ಸಂಧಿ +ವಿ
ವೇಕ +ನಿಕರದಲ್+ಒರೆದು +ಮೋಹರಿಸೊಂದು+ ಬಾಹೆಯಲಿ
ಈ +ಕುರುವ್ರಜ +ನೂರ +ಹಿಡಿ +ಕುಂ
ತೀ +ಕುಮಾರರ +ಬಿಡು +ತನೂಜರ
ನೂಕು +ಹಿಡಿ +ಪಾಂಡವರನ್+ಎಂದಳು +ಪತಿಗೆ +ಗಾಂಧಾರಿ

ಅಚ್ಚರಿ:
(೧) ಬಿಡು, ನೂಕು – ಸಾಮ್ಯಾರ್ಥ ಪದಗಳ ಬಳಕೆ

ನಿಮ್ಮ ಟಿಪ್ಪಣಿ ಬರೆಯಿರಿ