ಈಸು ಕಳವಳವೇನು ಚಿತ್ತದ
ಬೈಸಿಕೆಗೆ ಡೊಳ್ಳಾಸವೇಕೆ ವಿ
ಳಾಸ ಕೂಣೆಯವೇನು ಹೇಳಾ ನೆನಹಿನಭಿರುಚಿಯ
ವಾಸಿಗಳ ಪೈಸರವನೆನ್ನಲಿ
ಸೂಸಬಾರದೆ ನಿನ್ನ ಹರುಷಕೆ
ಪೈಸರವದೇನೆಂದು ಬೆಸಗೊಂಡನು ಸುಯೋಧನನ (ಸಭಾ ಪರ್ವ, ೧೩ ಸಂಧಿ, ೨೮ ಪದ್ಯ)
ತಾತ್ಪರ್ಯ:
ಧೃತರಾಷ್ಟ್ರನು, ಮಗನೇ ನಿನಗೇಕೆ ಇಂತಹ ಗೊಂದಲ, ಹೇಳು. ನೀನು ನಿನ್ನ ಮನಸ್ಥಿತಿಯನ್ನು ಏಕೆ ಕದಡಿಕೊಂಡಿದ್ದೀಯ? ನಿನ್ನ ಸಂತೋಷಕ್ಕೆ ಏನು ಕೊರತೆ? ನೀನು ಏನನ್ನು ಬಯಸುವೆ ಹೇಳು ನಿನ್ನ ಹಿರಿಮೆಯು ಛಲವು ಪಂಥವು ಏಕೆ ಜಾರಿಹೋಗಿವೆ? ಅದನ್ನು ನನಗೆ ಹೇಳಬಾರದೆ ನಿನ್ನ ಸಂತೋಷವು ಜಾರಿಹೋಗಲು ಕಾರಣವಾದರು ಏನು ಎಂದು ತನ್ನ ಮಗನನ್ನು ಕೇಳಿದನು.
ಅರ್ಥ:
ಕಳವಳ: ಗೊಂದಲ, ತೊಂದರೆ; ಚಿತ್ತ: ಮನಸ್ಸು; ಬೈಸಿಕೆ: ಅಚಲತೆ, ದೃಢತೆ; ಡೊಳ್ಳಾಸ: ಮೋಸ, ಕಪಟ; ವಿಳಾಸ: ವಿಹಾರ, ಚೆಲುವು; ಕೂಣೆ: ಕೊರತೆ; ಹೇಳು: ತಿಳಿಸು; ನೆನಹು: ನೆನಪು; ಅಭಿರುಚಿ: ಆಸಕ್ತಿ, ಒಲವು, ಪ್ರೀತಿ; ವಾಸಿ:ಕೀರ್ತಿ; ಪೈಸರ: ವಿಸ್ತಾರ, ವ್ಯಾಪ್ತಿ, ಹರಹು; ಸೂಸು: ಎರಚುವಿಕೆ, ಚಲ್ಲುವಿಕೆ; ಹರುಷ: ಸಂತೋಷ; ಪೈಸರ: ಹಿಂದಕ್ಕೆ ಸರಿಯುವುದು, ಸೋಲು, ಭಂಗ; ಬೆಸ: ಕೇಳುವುದು;
ಪದವಿಂಗಡಣೆ:
ಈಸು +ಕಳವಳವೇನು +ಚಿತ್ತದ
ಬೈಸಿಕೆಗೆ+ ಡೊಳ್ಳಾಸವೇಕೆ+ ವಿ
ಳಾಸ+ ಕೂಣೆಯವೇನು+ ಹೇಳಾ+ ನೆನಹಿನ್+ಅಭಿರುಚಿಯ
ವಾಸಿಗಳ+ ಪೈಸರವನ್+ಎನ್ನಲಿ
ಸೂಸಬಾರದೆ+ ನಿನ್ನ +ಹರುಷಕೆ
ಪೈಸರವದೇನೆಂದು+ ಬೆಸಗೊಂಡನು+ ಸುಯೋಧನನ
ಅಚ್ಚರಿ:
(೧) ಹೇಳು ಎನ್ನಲು ಬಳಸಿದ ಪದಗಳು – ಸೂಸಬಾರದೆ, ಬೆಸಗೊಂಡು, ಹೇಳಾ