ಎತ್ತಿದನು ಕಣ್ಣೆವೆಯ ಕಿರುವನಿ
ಮುತ್ತುಗಳ ಕೇವಣಿಯ ಶಕುನಿ ನೃ
ಪೋತ್ತಮನೆ ಬಾ ಕಂದ ಬಾಯೆಂದಪ್ಪಿ ಕೌರವನ
ಕಿತ್ತು ಬಿಸುಡುವೆನಹಿತರನು ನಿನ
ಗಿತ್ತೆನಿಂದ್ರಪ್ರಸ್ಥಪುರವನು
ಹೆತ್ತ ತಾಯ್ಗಾಂಧಾರಿ ಸಂತೋಷಿಸಲಿ ಬಳಿಕೆಂದ (ಸಭಾ ಪರ್ವ, ೧೩ ಸಂಧಿ, ೧೬ ಪದ್ಯ)
ತಾತ್ಪರ್ಯ:
ಶಕುನಿಯು ದುರ್ಯೋಧನನನ್ನು ಮೇಲಕೆತ್ತಿದನು. ಕೌರವನ ಕಣ್ಣುಗಳಲ್ಲಿ ಕಣ್ಣೀರಿನ ಹನಿಗಳು ಮುತ್ತಿನಂತೆ ಒಸರುತ್ತಿರುವುದನ್ನು ಕಂಡನು. ರಾಜಶ್ರೇಷ್ಠನೇ, ಮಗೂ ಬಾ ಕಂಡಾ ಬಾ ಎಂದವನನ್ನು ಅಪ್ಪಿಕೊಂಡು ಶತ್ರುಗಳನ್ನು ಕಿತ್ತುಬಿಸುಡುತ್ತೇನೆ, ಇದೋ ನಿನಗೆ ಇಂದ್ರಪ್ರಸ್ಥಪುರವನ್ನು ಕೊಟ್ಟುಬಿಟ್ಟೆ. ನಿನ್ನ ತಾಯಿ ಗಾಂಧಾರಿಯು ಇದರಿಂದ ಸಂತೋಷಿಸಲಿ ಎಂದುನು.
ಅರ್ಥ:
ಎತ್ತು: ಮೇಲಕ್ಕೆ ತರು; ಕಣ್ಣೆವೆ: ಕಣ್ಣಿನ ರೆಪ್ಪೆ; ಕಿರುವನಿ: ಚಿಕ್ಕ ಚಿಕ್ಕ ಹನಿ; ಮುತ್ತು: ಮೌಕ್ತಿಕ; ಕೇವಣಿ: ಕೀಲಿಸುವಿಕೆ; ನೃಪ: ರಾಜ; ಉತ್ತಮ: ಶ್ರೇಷ್ಠ; ಮನೆ: ಆಲಯ; ಬಾ: ಆಗಮಿಸು; ಕಂದ: ಮಗು; ಅಪ್ಪಿ: ತಬ್ಬಿಕೊ; ಕಿತ್ತು: ಹರಿದು, ಸೀಳು; ಬಿಸುಡು: ಬಿಸಾಡು; ಅಹಿತ: ವೈರಿ; ಪುರ: ಊರು; ಹೆತ್ತು: ಹುಟ್ಟು; ತಾಯಿ: ಮಾತೆ; ಸಂತೋಷ: ಸಂತಸ; ಬಳಿಕ: ಹತ್ತಿರ;
ಪದವಿಂಗಡಣೆ:
ಎತ್ತಿದನು+ ಕಣ್ಣೆವೆಯ +ಕಿರುವನಿ
ಮುತ್ತುಗಳ +ಕೇವಣಿಯ +ಶಕುನಿ +ನೃ
ಪೋತ್ತಮನೆ+ ಬಾ +ಕಂದ +ಬಾಯೆಂದಪ್ಪಿ+ ಕೌರವನ
ಕಿತ್ತು+ ಬಿಸುಡುವೆನ್+ಅಹಿತರನು +ನಿನಗ್
ಇತ್ತೆನ್+ಇಂದ್ರಪ್ರಸ್ಥ+ಪುರವನು
ಹೆತ್ತ+ ತಾಯ್+ಗಾಂಧಾರಿ +ಸಂತೋಷಿಸಲಿ +ಬಳಿಕೆಂದ
ಅಚ್ಚರಿ:
(೧) ದುರ್ಯೋಧನನ ಕಣ್ಣೀರಿನ ವರ್ಣನೆ – ಕಣ್ಣೆವೆಯ ಕಿರುವನಿ ಮುತ್ತುಗಳ ಕೇವಣಿಯ
(೨) ಶಕುನಿಯ ಪ್ರೀತಿಯ ತೋರಿಕೆ – ನೃಪೋತ್ತಮನೆ ಬಾ ಕಂದ ಬಾಯೆಂದಪ್ಪಿ ಕೌರವನ
(೩) ಶಕುನಿಯ ಸಂತೈಸುವ ಬಗೆ – ಕಿತ್ತು ಬಿಸುಡುವೆನಹಿತರನು ನಿನಗಿತ್ತೆನಿಂದ್ರಪ್ರಸ್ಥಪುರವನು