ಪದ್ಯ ೧೬: ಶಕುನಿಯು ದುರ್ಯೋಧನನನ್ನು ಹೇಗೆ ಸಂತೈಸಿದನು?

ಎತ್ತಿದನು ಕಣ್ಣೆವೆಯ ಕಿರುವನಿ
ಮುತ್ತುಗಳ ಕೇವಣಿಯ ಶಕುನಿ ನೃ
ಪೋತ್ತಮನೆ ಬಾ ಕಂದ ಬಾಯೆಂದಪ್ಪಿ ಕೌರವನ
ಕಿತ್ತು ಬಿಸುಡುವೆನಹಿತರನು ನಿನ
ಗಿತ್ತೆನಿಂದ್ರಪ್ರಸ್ಥಪುರವನು
ಹೆತ್ತ ತಾಯ್ಗಾಂಧಾರಿ ಸಂತೋಷಿಸಲಿ ಬಳಿಕೆಂದ (ಸಭಾ ಪರ್ವ, ೧೩ ಸಂಧಿ, ೧೬ ಪದ್ಯ)

ತಾತ್ಪರ್ಯ:
ಶಕುನಿಯು ದುರ್ಯೋಧನನನ್ನು ಮೇಲಕೆತ್ತಿದನು. ಕೌರವನ ಕಣ್ಣುಗಳಲ್ಲಿ ಕಣ್ಣೀರಿನ ಹನಿಗಳು ಮುತ್ತಿನಂತೆ ಒಸರುತ್ತಿರುವುದನ್ನು ಕಂಡನು. ರಾಜಶ್ರೇಷ್ಠನೇ, ಮಗೂ ಬಾ ಕಂಡಾ ಬಾ ಎಂದವನನ್ನು ಅಪ್ಪಿಕೊಂಡು ಶತ್ರುಗಳನ್ನು ಕಿತ್ತುಬಿಸುಡುತ್ತೇನೆ, ಇದೋ ನಿನಗೆ ಇಂದ್ರಪ್ರಸ್ಥಪುರವನ್ನು ಕೊಟ್ಟುಬಿಟ್ಟೆ. ನಿನ್ನ ತಾಯಿ ಗಾಂಧಾರಿಯು ಇದರಿಂದ ಸಂತೋಷಿಸಲಿ ಎಂದುನು.

ಅರ್ಥ:
ಎತ್ತು: ಮೇಲಕ್ಕೆ ತರು; ಕಣ್ಣೆವೆ: ಕಣ್ಣಿನ ರೆಪ್ಪೆ; ಕಿರುವನಿ: ಚಿಕ್ಕ ಚಿಕ್ಕ ಹನಿ; ಮುತ್ತು: ಮೌಕ್ತಿಕ; ಕೇವಣಿ: ಕೀಲಿಸುವಿಕೆ; ನೃಪ: ರಾಜ; ಉತ್ತಮ: ಶ್ರೇಷ್ಠ; ಮನೆ: ಆಲಯ; ಬಾ: ಆಗಮಿಸು; ಕಂದ: ಮಗು; ಅಪ್ಪಿ: ತಬ್ಬಿಕೊ; ಕಿತ್ತು: ಹರಿದು, ಸೀಳು; ಬಿಸುಡು: ಬಿಸಾಡು; ಅಹಿತ: ವೈರಿ; ಪುರ: ಊರು; ಹೆತ್ತು: ಹುಟ್ಟು; ತಾಯಿ: ಮಾತೆ; ಸಂತೋಷ: ಸಂತಸ; ಬಳಿಕ: ಹತ್ತಿರ;

ಪದವಿಂಗಡಣೆ:
ಎತ್ತಿದನು+ ಕಣ್ಣೆವೆಯ +ಕಿರುವನಿ
ಮುತ್ತುಗಳ +ಕೇವಣಿಯ +ಶಕುನಿ +ನೃ
ಪೋತ್ತಮನೆ+ ಬಾ +ಕಂದ +ಬಾಯೆಂದಪ್ಪಿ+ ಕೌರವನ
ಕಿತ್ತು+ ಬಿಸುಡುವೆನ್+ಅಹಿತರನು +ನಿನಗ್
ಇತ್ತೆನ್+ಇಂದ್ರಪ್ರಸ್ಥ+ಪುರವನು
ಹೆತ್ತ+ ತಾಯ್+ಗಾಂಧಾರಿ +ಸಂತೋಷಿಸಲಿ +ಬಳಿಕೆಂದ

ಅಚ್ಚರಿ:
(೧) ದುರ್ಯೋಧನನ ಕಣ್ಣೀರಿನ ವರ್ಣನೆ – ಕಣ್ಣೆವೆಯ ಕಿರುವನಿ ಮುತ್ತುಗಳ ಕೇವಣಿಯ
(೨) ಶಕುನಿಯ ಪ್ರೀತಿಯ ತೋರಿಕೆ – ನೃಪೋತ್ತಮನೆ ಬಾ ಕಂದ ಬಾಯೆಂದಪ್ಪಿ ಕೌರವನ
(೩) ಶಕುನಿಯ ಸಂತೈಸುವ ಬಗೆ – ಕಿತ್ತು ಬಿಸುಡುವೆನಹಿತರನು ನಿನಗಿತ್ತೆನಿಂದ್ರಪ್ರಸ್ಥಪುರವನು

ಪದ್ಯ ೧೫: ದುರ್ಯೋಧನನು ತನ್ನ ಮಾವನಿಗೆ ಏನು ಹೇಳಿದ?

ಲೇಸು ಬಿಜಯಂಗೈಯಿ ನೀವೆ
ನ್ನಾಸರಾಗ್ನಿಯನೇಕೆ ಕೆಣಕುವಿ
ರಾಸುರವಿದೇಕೆನ್ನೊಡನೆ ಸೈರಿಸುವುದುಪಹತಿಯ
ಈಸು ನುಡಿವರೆ ಮಾವಯೆನುತ ಮ
ಹೀಶ ಕಂಬನಿದುಂಬ ನೆನಹಿನ
ಬೀಸರಕೆ ಬಿಸುಸುಯ್ದು ಧೊಪ್ಪನೆ ಕೆಡೆದನವನಿಯಲಿ (ಸಭಾ ಪರ್ವ, ೧೩ ಸಂಧಿ, ೧೫ ಪದ್ಯ)

ತಾತ್ಪರ್ಯ:
ದುರ್ಯೋಧನನು ನಿಟ್ಟುಸಿರು ಬಿಟ್ಟು ಕಂಬನಿದುಂಬಿ ಒಳ್ಳೆಯದು, ನೀವು ನನ್ನಲ್ಲಿ ಒಳಹೊಕ್ಕು ಧೃಡವಾಗಿ ನೀಮ್ತ ಮತ್ಸರದ ಬೆಂಕಿಯನ್ನು ಏಕೆ ಕೆಣಕುತ್ತೀರಿ? ತಾವು ಇಲ್ಲಿಂದ ಹೊರಟುಹೋಗಬಹುದು. ನಾನು ನಿಮಗೆ ಮಾತನಾಡಿ ತೊಂದರೆಯನ್ನುಂಟುಮಾಡಿದ್ದರೆ, ಅದನ್ನು ಸಹಿಸಿಕೊಳ್ಳಿ. ನನಗೆ ನೋವನ್ನುಂಟುಮಾಡುವ ಇಂತಹ ಮಾತುಗಳನ್ನು ಆಡಬಹುದೇ ಮಾವ ಎಂದು ಭೂಮಿಯ ಮೇಲೆ ಧೊಪ್ಪನೆ ಬಿದ್ದನು.

ಅರ್ಥ:
ಲೇಸು: ಒಳಿತು; ಬಿಜಯಂಗೈ: ದಯಮಾಡಿಸು; ಆಸರ: ಆಶ್ರಯ; ಅಗ್ನಿ: ಬೆಂಕಿ; ಕೆಣಕು: ರೇಗಿಸು, ಪ್ರಚೋದಿಸು; ಉಪಹತಿ: ಹೊಡೆತ, ಕೇಡು; ಸೈರಿಸು: ತಾಳು, ಸಹಿಸು; ಈಸು: ಇಷ್ಟು; ನುಡಿ: ಮಾತು; ಮಾವ: ತಾಯಿಯ ಸಹೋದರ; ಮಹೀಶ: ರಾಜ; ಕಂಬನಿ: ಕಣ್ಣೀರು; ತುಂಬಿ: ಪೂರ್ಣ; ನೆನಹು: ಜ್ಞಾಪಕ, ನೆನಪು; ಬೀಸರ: ವ್ಯರ್ಥವಾದುದು, ನಿರರ್ಥಕವಾದುದು; ಬಿಸುಸುಯ್ಲು: ನಿಟ್ಟುಸಿರು; ಧೊಪ್ಪನೆ: ಜೋರಾಗಿ; ಕೆಡೆ: ಬೀಳು; ಅವನಿ: ಭೂಮಿ;

ಪದವಿಂಗಡಣೆ:
ಲೇಸು +ಬಿಜಯಂಗೈಯಿ +ನೀವೆನ್
ಆಸರಾಗ್ನಿಯನೇಕೆ +ಕೆಣಕುವಿರ್
ಆಸುರವಿದೇಕ್+ಎನ್ನೊಡನೆ +ಸೈರಿಸುವುದ್+ಉಪಹತಿಯ
ಈಸು +ನುಡಿವರೆ+ ಮಾವ+ಎನುತ +ಮ
ಹೀಶ+ ಕಂಬನಿ+ತುಂಬ +ನೆನಹಿನ
ಬೀಸರಕೆ+ ಬಿಸುಸುಯ್ದು +ಧೊಪ್ಪನೆ +ಕೆಡೆದನ್+ಅವನಿಯಲಿ

ಅಚ್ಚರಿ:
(೧) ದುರ್ಯೋಧನನ ಬೇಸರ ಸ್ಥಿತಿ – ಮಹೀಶ ಕಂಬನಿದುಂಬ ನೆನಹಿನ ಬೀಸರಕೆ ಬಿಸುಸುಯ್ದು ಧೊಪ್ಪನೆ ಕೆಡೆದನವನಿಯಲಿ

ಪದ್ಯ ೧೪: ಶಕುನಿ ದುರ್ಯೋಧನನಿಗೆ ಯಾವ ವಿಚಾರ ಬೇಡವೆಂದು ಹೇಳಿದನು?

ಅವರು ಪಿತ್ರಾರ್ಜಿತದ ರಾಜ್ಯ
ಪ್ರವರಪಾತ್ರರು ನಿನ್ನಸೂಯೆಯ
ಕವಲು ಮನದ ಕುಠಾರ ಬುದ್ಧಿಯ ಕಲುಷ ಭಾವನೆಯ
ವಿವರಣೆಯನವರೆತ್ತ ಬಲ್ಲರು
ಶಿವ ಶಿವಾ ಭುವನೈಕಮಾನ್ಯರ
ನವಗಡಿಸಲಂಗೈಸಿದೈ ಮಾಣೆಂದನಾ ಶಕುನಿ (ಸಭಾ ಪರ್ವ, ೧೩ ಸಂಧಿ, ೧೪ ಪದ್ಯ)

ತಾತ್ಪರ್ಯ:
ದುರ್ಯೋಧನನ ಮನಸ್ಥಿತಿಯನ್ನರಿತ ಶಕುನಿಯು ಅವನನ್ನು ಸಂತೈಸಿಸಲು, ಎಲೈ ದುರ್ಯೋಧನ ಅವರು ಪ್ರಿತ್ರಾರ್ಜಿತ ಆಸ್ತಿಗೆ ಹಕ್ಕುದಾರರು ನಿನ್ನ ಅಸೂಯೆಯಿಂದ ತುಂಬಿದ ಕೊಡಲಿ ಬುದ್ಧಿಯ, ಕವಲಾದ ಮನಸ್ಸಿನ ಕಲ್ಮಷದಿಂದ ತುಂಬಿದ ಭಾವನೆಯ ರೀತಿಯನ್ನು ಆವರೇನು ಬಲ್ಲರು? ಶಿವ ಶಿವಾ ಸಮಸ್ತಲೋಕಕ್ಕೂ ಮಾನ್ಯರಾದ ಪಾಂಡವರನ್ನು ಎದುರಿಸಲು ಸಿದ್ಧನಾದೆಯಲ್ಲವೇ? ಈ ಬುದ್ಧಿಯು ಬೇಡ, ಬಿಟ್ಟುಬಿಡು ಎಂದು ಶಕುನಿಯು ದುರ್ಯೋಧನನಿಗೆ ಹೇಳಿದನು.

ಅರ್ಥ:
ಪಿತ್ರಾರ್ಜಿತ: ತಂದೆಯಿಂದ ಬಂದ; ರಾಜ್ಯ: ರಾಷ್ಟ್ರ; ಪ್ರವರ: ಪ್ರಧಾನ ವ್ಯಕ್ತಿ; ಪಾತ್ರ: ಯೋಗ್ಯತೆ, ಅರ್ಹತೆ; ಅಸೂಯೆ:ಹೊಟ್ಟೆಕಿಚ್ಚು; ಕವಲು: ಕವಲೊಡೆದ ಕೊಂಬೆ, ಭಿನ್ನತೆ; ಮನ: ಮನಸ್ಸು; ಕುಠಾರ: ಕೊಡಲಿ, ಗುದ್ದಲಿ; ಬುದ್ಧಿ: ಜಾಣ್ಮೆ; ಕಲುಷ: ಕೆಟ್ಟ; ಭಾವನೆ: ಮನಸ್ಸಿನ ಅಭಿಪ್ರಾಯ, ಆಶಯ; ವಿವರಣೆ: ವಿಸ್ತರಿಸಿ ಹೇಳುವ ವಿಚಾರ; ಬಲ್ಲರು: ತಿಳಿದವರು; ಭುವನ: ಭೂಮಿ; ಮಾನ್ಯ: ಗೌರವ; ಅವಗಡಿಸು: ಕಡೆಗಣಿಸು; ಮಾಣು: ಬೇಡ;

ಪದವಿಂಗಡಣೆ:
ಅವರು +ಪಿತ್ರಾರ್ಜಿತದ +ರಾಜ್ಯ
ಪ್ರವರಪಾತ್ರರು +ನಿನ್ನ್+ಅಸೂಯೆಯ
ಕವಲು+ ಮನದ+ ಕುಠಾರ +ಬುದ್ಧಿಯ +ಕಲುಷ +ಭಾವನೆಯ
ವಿವರಣೆಯನ್+ಅವರೆತ್ತ+ ಬಲ್ಲರು
ಶಿವ ಶಿವಾ+ ಭುವನೈಕಮಾನ್ಯರನ್
ಅವಗಡಿಸಲ್+ಅಂಗೈಸಿದೈ +ಮಾಣೆಂದನಾ +ಶಕುನಿ

ಅಚ್ಚರಿ:
(೧) ದುರ್ಯೋಧನನ ಸ್ಥಿತಿಯನ್ನು ಹೇಳುವ ಪರಿ – ಅಸೂಯೆಯ ಕವಲು ಮನದ ಕುಠಾರ ಬುದ್ಧಿಯ ಕಲುಷ ಭಾವನೆಯ
(೨) ಶಕುನಿಯು ಬುದ್ಧಿ ಹೇಳುವ ಪರಿ – ಭುವನೈಕಮಾನ್ಯರನವಗಡಿಸಲಂಗೈಸಿದೈ ಮಾಣೆಂದನಾ ಶಕುನಿ

ಪದ್ಯ ೧೩: ಯಾವ ಬಳ್ಳಿಯಂತೆ ಪಾಂಡವರ ಐಶ್ವರ್ಯವು ಹಬ್ಬಿದೆ?

ಹೇಳು ಹೇಳೇನೇನು ಪಾಂಡು ನೃ
ಪಾಲಪುತ್ರರ ವಿಭವ ವಹ್ನಿ
ಜ್ವಾಲೆಯಲಿ ಮನ ಬೆಂದುದೇ ಹರಹರ ವಿಚಿತ್ರವಲ
ಪಾಲಕನು ಧರ್ಮಜನು ಸಲೆ ಕ
ಟ್ಟಾಳುಗಳು ಭೀಮಾರ್ಜುನರು ಬೆ
ಳ್ಳಾಳ ಹಬ್ಬುಗೆಯೈಸಲೇ ಪಾಂಡವರ ಸಿರಿಯೆಂದ (ಸಭಾ ಪರ್ವ, ೧೩ ಸಂಧಿ, ೧೩ ಪದ್ಯ)

ತಾತ್ಪರ್ಯ:
ಶಕುನಿಯು ದುರ್ಯೋಧನನ ದುಗುಡವನ್ನು ತಿಳಿಯಲು ಕಾತುರನಾಗಿ, ಹೇಳು ಹೇಳು ದುರ್ಯೋಧನ, ಪಾಂಡವರ ವೈಭವದ ಬೆಂಕಿಯ ಜ್ವಾಲೆಯಲ್ಲಿ ನಿನ್ನ ಮನಸ್ಸು ಬೆಂದುಹೋಯಿತೇ? ಶಿವ ಶಿವಾ ಇದು ವಿಚಿತ್ರವಾಗಿದೆ, ಧರ್ಮರಾಯನು ಒಡೆಯ, ಭೀಮಾರ್ಜುನರು ಶೂರರು, ಅವನ ಕಟ್ಟಾಳುಗಳು, ಪಾಂಡವರ ಐಶ್ವರ್ಯವು ಲಾವಂಚದ ಬಳ್ಳಿಯಂತೆ ಹಬ್ಬಿದೆಯಲ್ಲವೇ ಎಂದು ಶಕುನಿಯು ದುರ್ಯೋಧನನಿಗೆ ಹೇಳಿದನು.

ಅರ್ಥ:
ನೃಪಾಲ: ರಾಜ; ಪುತ್ರ: ಮಕ್ಕಳು; ವಿಭವ:ಸಿರಿ, ಸಂಪತ್ತು; ವಹ್ನಿ: ಅಗ್ನಿ, ಬೆಂಕಿ; ಜ್ವಾಲೆ: ಬೆಂಕಿಯ ನಾಲಗೆ; ಮನ: ಮನಸ್ಸು; ಬೆಂದು: ಸುಟ್ಟು; ಹರ: ಶಿವ; ವಿಚಿತ್ರ: ಆಶ್ಚರ್ಯಕರವಾದುದು; ಪಾಲಕ: ರಕ್ಷಕ, ರಾಜ; ಸಲೆ: ಒಂದೇ ಸಮನೆ, ಏಕಪ್ರಕಾರವಾಗಿ; ಕಟ್ಟಾಳು: ಶೂರ, ನಂಬುಗೆಯ ಸೇವಕ; ಬೆಳ್ಳಾಳ: ಹರಡಿದ ಬಿಳಿಯ ಬಲೆ; ಹಬ್ಬುಗೆ: ವಿಸ್ತರಿಸು; ಐಸಲೆ: ಅಲ್ಲವೆ; ಸಿರಿ: ಐಶ್ವರ್ಯ;

ಪದವಿಂಗಡಣೆ:
ಹೇಳು +ಹೇಳ್+ಏನೇನು+ ಪಾಂಡು +ನೃ
ಪಾಲ+ಪುತ್ರರ +ವಿಭವ+ ವಹ್ನಿ
ಜ್ವಾಲೆಯಲಿ +ಮನ +ಬೆಂದುದೇ +ಹರಹರ+ ವಿಚಿತ್ರವಲ
ಪಾಲಕನು+ ಧರ್ಮಜನು+ ಸಲೆ+ ಕ
ಟ್ಟಾಳುಗಳು +ಭೀಮಾರ್ಜುನರು+ ಬೆ
ಳ್ಳಾಳ +ಹಬ್ಬುಗೆಯೈಸಲೇ+ ಪಾಂಡವರ+ ಸಿರಿಯೆಂದ

ಅಚ್ಚರಿ:
(೧) ಐಶ್ವರ್ಯವು ಹಬ್ಬಿದ ಬಗ್ಗೆ ಹೇಳುವ ಪರಿ – ಬೆಳ್ಳಾಳ ಹಬ್ಬುಗೆಯೈಸಲೇ ಪಾಂಡವರ ಸಿರಿಯೆಂದ