ಅನುಜ ತನುಜರು ಸಹಿತ ಕುಂತೀ
ತನಯ ದೂರಕೆ ಕಳುಹಿ ಮರಳಿದು
ಮನೆಗೆ ಬಂದನು ಕೃಷ್ಣವಿರಹ ವಿಶಾಲ ಖೇದದಲಿ
ಮುನಿಪ ವೇದವ್ಯಾಸ ಧೌಮ್ಯರ
ನನುಸರಿಸಿ ದಾಹಿಸುವ ದುಗುಡವ
ನನಿತುವನು ಬಿನ್ನವಿಸಿದನು ಮಿಡಿಮಿಡಿದು ಕಂಬನಿಯ (ಸಭಾ ಪರ್ವ, ೧೨ ಸಂಧಿ, ೨೫ ಪದ್ಯ)
ತಾತ್ಪರ್ಯ:
ತನ್ನ ತಮ್ಮಂದಿರು, ಮಕ್ಕಳೊಡನೆ ಧರ್ಮಜನು ಶ್ರೀಕೃಷ್ನನನ್ನು ಬಹುದೂರದವರೆಗೆ ಕಳುಹಿಸಿ ಮನಗೆ ಬಂದನು. ಕೃಷ್ಣನ ಅಗಲಿಕೆಯ ಮಹಾದುಃಖವು ಅವನನ್ನು ಆವರಿಸಿತು. ವೇದವ್ಯಾಸ ಧೌಮ್ಯರೆದುರಿನಲ್ಲಿ ಮತ್ತೆ ಮತ್ತೆ ಕಣ್ಣಿರುಗರೆದು ತನ್ನ ದುಃಖವನ್ನು ಹೇಳಿಕೊಂಡನು.
ಅರ್ಥ:
ಅನುಜ: ತಮ್ಮ; ತನುಜ: ಮಗ; ಸಹಿತ: ಜೊತೆ; ತನಯ: ಮಗ; ದೂರ: ಬಹಳ ಅಂತರ; ಕಳುಹಿ: ಬೀಳ್ಕೊಟ್ಟು; ಮರಳು: ಹಿಂದಿರುಗು; ಮನೆ: ಆಲಯ; ಬಂದು: ಆಗಮಿಸು; ವಿರಹ: ವಿಯೋಗ; ವಿಶಾಲ: ತುಂಬ; ಖೇದ: ದುಃಖ; ಮುನಿ: ಋಷಿ; ಅನುಸರಿಸು: ಹಿಂಬಾಲಿಸು, ಕೂಡಿಸು; ದಾಹಿಸು: ಸುಡು; ದುಗುಡ: ದುಃಖ; ಅನಿತು: ಅಷ್ಟು; ಬಿನ್ನವಿಸು: ವಿಜ್ಞಾಪಿಸು; ಮಿಡಿಮಿಡಿ: ಕಣ್ಣೀರನ್ನು ಹೊಮ್ಮಿಸು; ಕಂಬನಿ: ಕಣ್ಣೀರು;
ಪದವಿಂಗಡಣೆ:
ಅನುಜ +ತನುಜರು +ಸಹಿತ +ಕುಂತೀ
ತನಯ+ ದೂರಕೆ+ ಕಳುಹಿ +ಮರಳಿದು
ಮನೆಗೆ +ಬಂದನು +ಕೃಷ್ಣ+ವಿರಹ+ ವಿಶಾಲ+ ಖೇದದಲಿ
ಮುನಿಪ +ವೇದವ್ಯಾಸ +ಧೌಮ್ಯರನ್
ಅನುಸರಿಸಿ+ ದಾಹಿಸುವ +ದುಗುಡವನ್
ಅನಿತುವನು+ ಬಿನ್ನವಿಸಿದನು +ಮಿಡಿಮಿಡಿದು +ಕಂಬನಿಯ
ಅಚ್ಚರಿ:
(೧) ಅನುಜ, ತನುಜ – ಪ್ರಾಸ ಪದ
(೨) ತನುಜ, ತನಯ – ಸಮನಾರ್ಥಕ ಪದ
(೩) ಅತೀವ ದುಃಖವನ್ನು ತಿಳಿಸುವ ಪರಿ – ವಿಶಾಲ ಖೇದ, ಮಿಡಿಮಿಡಿದು ಕಂಬನಿಯ