ಸೋತು ನಡೆವುದು ಹಿರಿಯರಲಿ ಸಂ
ಪ್ರೀತಿಯನು ಸುಜನರಲಿ ನಿರ್ಮಳ
ನೀತಿಯನು ಪರಿವಾರ ಪುರಜನ ನಾಡು ಬೀಡಿನಲಿ
ಖ್ಯಾತಿಯನು ಧರ್ಮದಲಿ ವೈರಿ
ವ್ರಾತದಲಿ ಪೌರುಷವನಖಿಳ
ಜ್ಞಾತಿಗಳಲೆಚ್ಚರಿಕೆಯೊಳಗಿಹುದೆಂದನಸುರಾರಿ (ಸಭಾ ಪರ್ವ, ೧೨ ಸಂಧಿ, ೧೯ ಪದ್ಯ)
ತಾತ್ಪರ್ಯ:
ಹಿರಿಯರಲ್ಲಿ ವಿನಯ, ಸಜ್ಜನರಲ್ಲಿ ಪ್ರೀತಿ, ಪರಿವಾರ, ಊರಿನವರು, ರಾಜ್ಯದ ಎಲ್ಲಾ ಪ್ರದೇಶದವರಲ್ಲೂ ನಿರ್ಮಲವಾದ ನೀತಿಯನ್ನು ಅನುಸರಿಸಬೇಕು. ಧರ್ಮದ ಆಚರಣೆ ಮಾಡುವವನೆಂಬ ಕೀರ್ತಿಯನ್ನು ಪಡೆಯಬೇಕು. ವೈರಿಗಳೊಡನೆ ಪೌರುಷವನ್ನು ತೋರಿಸಬೇಕು. ದಾಯಾದಿಗಳೊಡನೆ ಎಚ್ಚರದಿಂದಿರಬೇಕು ಎಂದು ಶ್ರೀಕೃಷ್ಣನು ಉಪದೇಶಿಸಿದನು.
ಅರ್ಥ:
ಸೋತು: ಪರಾಭವ; ನಡೆ: ಮುಂದೆ ಹೋಗು; ಹಿರಿಯರು: ದೊಡ್ಡವರು; ಸಂಪ್ರೀತಿ: ಒಲವು, ಪ್ರೀತಿ; ಸುಜನ: ಒಳ್ಳೆಯ ಜನ; ನಿರ್ಮಳ: ಶುಭ್ರ, ಸ್ವಚ್ಛತೆ; ನೀತಿ: ಮಾರ್ಗ ದರ್ಶನ, ಮುನ್ನಡೆಸುವಿಕೆ; ಪರಿವಾರ: ಬಂಧುಜನ; ಪುರಜನ: ಊರಿನ ಜನರು; ನಾಡು: ಊರು, ರಾಷ್ಟ್ರ; ಬೀಡು: ಗುಂಪು; ಖ್ಯಾತಿ: ಪ್ರಸಿದ್ಧ; ಧರ್ಮ: ಧಾರಣೆ ಮಾಡಿದುದು, ಆಚಾರ; ವೈರಿ: ಹಗೆ, ಶತ್ರು; ವ್ರಾತ: ಗುಂಪು; ಪೌರುಷ: ಶೌರ್ಯ, ಪರಾಕ್ರಮ; ಅಖಿಳ: ಎಲ್ಲಾ; ಜ್ಞಾತಿ: ದಾಯಾದಿ; ಎಚ್ಚರ: ಜೋಪಾನ, ಹುಷಾರು; ಅಸುರಾರಿ: ರಾಕ್ಷಸರ ವೈರಿ (ಕೃಷ್ಣ);
ಪದವಿಂಗಡಣೆ:
ಸೋತು +ನಡೆವುದು +ಹಿರಿಯರಲಿ +ಸಂ
ಪ್ರೀತಿಯನು +ಸುಜನರಲಿ +ನಿರ್ಮಳ
ನೀತಿಯನು +ಪರಿವಾರ +ಪುರಜನ+ ನಾಡು +ಬೀಡಿನಲಿ
ಖ್ಯಾತಿಯನು+ ಧರ್ಮದಲಿ +ವೈರಿ
ವ್ರಾತದಲಿ+ ಪೌರುಷವನ್+ಅಖಿಳ
ಜ್ಞಾತಿಗಳಲ್+ಎಚ್ಚರಿಕೆಯೊಳಗ್+ಇಹುದೆಂದನ್+ಅಸುರಾರಿ
ಅಚ್ಚರಿ:
(೧) ಜೋಡಿ ಅಕ್ಷರದ ಪದಗಳು – ಸಂಪ್ರೀತಿಯನು ಸುಜನರಲಿ; ನಿರ್ಮಳ ನೀತಿಯನು; ಪರಿವಾರ ಪುರಜನ
(೨) ಪ್ರೀತಿ, ಜ್ಞಾತಿ, ನೀತಿ, ಖ್ಯಾತಿ – ಪ್ರಾಸ ಪದಗಳು