ಅರಸ ಕೇಳೈ ಪಾಂಡ್ಯ ಭೂಮೀ
ಶ್ವರ ಕಳಿಂಗ ಪ್ರಮುಖ ತೆಂಕಣ
ಧರಣಿಪರ ಬಳಿಯಲಿ ಘಟೋತ್ಕಚ ಯೋಜನಾಂತರವ
ವರಕುಮಾರರು ನಿಖಿಳ ಪೃಥ್ವೀ
ಶ್ವರರನವರವರುಚಿತದಲಿ ಸತು
ಕರಿಸಿ ಮರಳಿದು ಬಂದರಿಂದ್ರಪ್ರಸ್ಥಪುರವರಕೆ (ಸಭಾ ಪರ್ವ, ೧೨ ಸಂಧಿ, ೧೧ ಪದ್ಯ)
ತಾತ್ಪರ್ಯ:
ಜನಮೇಜಯ ರಾಜ ಕೇಳು, ದಕ್ಷಿಣದ ದೊರೆಗಳಾದ ಪಾಂಡ್ಯರಾಜ, ಕಳಿಂಗರಾಜ ಮೊದಲಾದವರನ್ನು ಘಟೋತ್ಕಚನು ಒಂದು ಯೋಜನ ದೂರ ಕಳುಹಿಸಿ ಬಂದನು. ಪಾಂಡವರ ಮಕ್ಕಳು ಎಲ್ಲಾ ರಾಜರನ್ನು ಸರಿಯಾದ ರೀತಿಯಲ್ಲಿ ಸತ್ಕರಿಸಿ ಅವರವರ ಊರುಗಳಿಗೆ ಕಳಿಸಿ ಇಂದ್ರಪ್ರಸ್ಥಪುರಕ್ಕೆ ಮರಳಿದರು.
ಅರ್ಥ:
ಅರಸ: ರಾಜ; ಕೇಳು: ಆಲಿಸು; ಭೂಮೀಶ್ವರ: ರಾಜ; ಪ್ರಮುಖ: ಮುಖ್ಯ; ತೆಂಕಣ: ದಕ್ಷಿಣ; ಧರಣಿಪ: ರಾಜ; ಬಳಿ: ಹತ್ತಿರ; ಯೋಜನ: ಅಳತೆಯ ಪ್ರಮಾಣ; ಅಂತರ: ದೂರ; ವರ: ಶ್ರೇಷ್ಠ; ಕುಮಾರ: ಮಕ್ಕಳು; ನಿಖಿಳ: ಎಲ್ಲಾ; ಪೃಥ್ವೀಶ್ವರ: ರಾಜ; ಉಚಿತ: ಸರಿಯಾದ; ಸತುಕರಿಸು: ಗೌರವ; ಮರಳು: ಹಿಂದಿರುಗು; ಬಂದು: ಆಗಮಿಸು; ಪುರ: ಊರು;
ಪದವಿಂಗಡಣೆ:
ಅರಸ +ಕೇಳೈ +ಪಾಂಡ್ಯ +ಭೂಮೀ
ಶ್ವರ +ಕಳಿಂಗ +ಪ್ರಮುಖ +ತೆಂಕಣ
ಧರಣಿಪರ+ ಬಳಿಯಲಿ+ ಘಟೋತ್ಕಚ +ಯೋಜನ+ಅಂತರವ
ವರಕುಮಾರರು +ನಿಖಿಳ +ಪೃಥ್ವೀ
ಶ್ವರರನ್+ಅವರವರ್+ಉಚಿತದಲಿ+ ಸತು
ಕರಿಸಿ +ಮರಳಿದು+ ಬಂದರ್+ಇಂದ್ರಪ್ರಸ್ಥ+ಪುರವರಕೆ
ಅಚ್ಚರಿ:
(೧) ಅರಸ, ಭೂಮೀಶ್ವರ, ಧರಣಿಪ, ಪೃಥ್ವೀಶ್ವರ – ರಾಜ ಪದದ ಸಮನಾರ್ಥಕ ಪದಗಳು
(೨) ೧ ಸಾಲಿನ ಮೊದಲ ಮತ್ತು ಕೊನೆ ಪದ ಸಮಾನಾರ್ಥಕ ಪದ