ಪದ್ಯ ೧೧: ದಕ್ಷಿಣದ ಯಾವ ರಾಜರು ಯಾಗದ ನಂತರ ಹಿಂದಿರುಗಿದರು?

ಅರಸ ಕೇಳೈ ಪಾಂಡ್ಯ ಭೂಮೀ
ಶ್ವರ ಕಳಿಂಗ ಪ್ರಮುಖ ತೆಂಕಣ
ಧರಣಿಪರ ಬಳಿಯಲಿ ಘಟೋತ್ಕಚ ಯೋಜನಾಂತರವ
ವರಕುಮಾರರು ನಿಖಿಳ ಪೃಥ್ವೀ
ಶ್ವರರನವರವರುಚಿತದಲಿ ಸತು
ಕರಿಸಿ ಮರಳಿದು ಬಂದರಿಂದ್ರಪ್ರಸ್ಥಪುರವರಕೆ (ಸಭಾ ಪರ್ವ, ೧೨ ಸಂಧಿ, ೧೧ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ದಕ್ಷಿಣದ ದೊರೆಗಳಾದ ಪಾಂಡ್ಯರಾಜ, ಕಳಿಂಗರಾಜ ಮೊದಲಾದವರನ್ನು ಘಟೋತ್ಕಚನು ಒಂದು ಯೋಜನ ದೂರ ಕಳುಹಿಸಿ ಬಂದನು. ಪಾಂಡವರ ಮಕ್ಕಳು ಎಲ್ಲಾ ರಾಜರನ್ನು ಸರಿಯಾದ ರೀತಿಯಲ್ಲಿ ಸತ್ಕರಿಸಿ ಅವರವರ ಊರುಗಳಿಗೆ ಕಳಿಸಿ ಇಂದ್ರಪ್ರಸ್ಥಪುರಕ್ಕೆ ಮರಳಿದರು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಭೂಮೀಶ್ವರ: ರಾಜ; ಪ್ರಮುಖ: ಮುಖ್ಯ; ತೆಂಕಣ: ದಕ್ಷಿಣ; ಧರಣಿಪ: ರಾಜ; ಬಳಿ: ಹತ್ತಿರ; ಯೋಜನ: ಅಳತೆಯ ಪ್ರಮಾಣ; ಅಂತರ: ದೂರ; ವರ: ಶ್ರೇಷ್ಠ; ಕುಮಾರ: ಮಕ್ಕಳು; ನಿಖಿಳ: ಎಲ್ಲಾ; ಪೃಥ್ವೀಶ್ವರ: ರಾಜ; ಉಚಿತ: ಸರಿಯಾದ; ಸತುಕರಿಸು: ಗೌರವ; ಮರಳು: ಹಿಂದಿರುಗು; ಬಂದು: ಆಗಮಿಸು; ಪುರ: ಊರು;

ಪದವಿಂಗಡಣೆ:
ಅರಸ +ಕೇಳೈ +ಪಾಂಡ್ಯ +ಭೂಮೀ
ಶ್ವರ +ಕಳಿಂಗ +ಪ್ರಮುಖ +ತೆಂಕಣ
ಧರಣಿಪರ+ ಬಳಿಯಲಿ+ ಘಟೋತ್ಕಚ +ಯೋಜನ+ಅಂತರವ
ವರಕುಮಾರರು +ನಿಖಿಳ +ಪೃಥ್ವೀ
ಶ್ವರರನ್+ಅವರವರ್+ಉಚಿತದಲಿ+ ಸತು
ಕರಿಸಿ +ಮರಳಿದು+ ಬಂದರ್+ಇಂದ್ರಪ್ರಸ್ಥ+ಪುರವರಕೆ

ಅಚ್ಚರಿ:
(೧) ಅರಸ, ಭೂಮೀಶ್ವರ, ಧರಣಿಪ, ಪೃಥ್ವೀಶ್ವರ – ರಾಜ ಪದದ ಸಮನಾರ್ಥಕ ಪದಗಳು
(೨) ೧ ಸಾಲಿನ ಮೊದಲ ಮತ್ತು ಕೊನೆ ಪದ ಸಮಾನಾರ್ಥಕ ಪದ

ನಿಮ್ಮ ಟಿಪ್ಪಣಿ ಬರೆಯಿರಿ