ಪದ್ಯ ೮೧: ಕೃಷ್ಣನು ಯಾರಿಗೆ ಪಟ್ಟವನ್ನು ಕಟ್ಟಿದನು?

ಗೋಳಿಡುತ ಬಂದೆರಗಿದರು ಶಿಶು
ಪಾಲ ತನುಜರು ಕೃಷ್ಣನಂಘ್ರಿಗೆ
ಲಾಲಿಸಿದನನಿಬರನು ಸಂತೈಸಿದನು ಕರುಣದಲಿ
ಮೇಲು ಪೋಗಿನ ವಿಧಿವಿಹಿತ ಕ
ರ್ಮಾಳಿಗಳ ಮಾಳ್ದವನ ಮಗಗೆ ಕೃ
ಪಾಳು ಪಟ್ಟದ ಸೇಸೆದಳಿದನು ವೀರನಾರಯಣ (ಸಭಾ ಪರ್ವ, ೧೧ ಸಂಧಿ, ೮೧ ಪದ್ಯ)

ತಾತ್ಪರ್ಯ:
ಶಿಶುಪಾಲನ ಸಾವಿನ ಬಳಿಕ ಅವನ ಮಕ್ಕಳು ಅಳುತ್ತಾ ಕೃಷ್ಣನ ಬಳಿಗೆ ಬಂದು ಅವನ ಪಾದಗಳಿಗೆ ನಮಸ್ಕರಿಸಿದರು. ಕೃಷ್ಣನು ಅವರನ್ನು ಪ್ರೀತಿಯಿಂದ ಪೋಷಿಸಿ ಅವರ ಮೊರೆಯನ್ನು ಕೇಳಿ ಸಮಾಧಾನ ಪಡಿಸಿ, ಶಿಶುಪಾಲನ ಅಂತ್ಯಕ್ರಿಯೆಗಳನ್ನು ಮಾಡಿಸಿ ಅವನ ಮಗನಿಗೆ ಪಟ್ಟಾಭಿಷೇಕವನ್ನು ಮಾಡಿಸಿದನು.

ಅರ್ಥ:
ಗೋಳು: ಅಳು, ದುಃಖ; ಬಂದು: ಆಗಮಿಸು; ಎರಗು: ಬಾಗು, ನಮಸ್ಕರಿಸು; ತನುಜ: ಮಕ್ಕಳು; ಅಂಘ್ರಿ: ಪಾದ; ಲಾಲಿಸು: ಅಕ್ಕರೆಯನ್ನು ತೋರಿಸು; ಅನಿಬರು: ಅಷ್ಟುಜನ; ಸಂತೈಸು: ಸಮಾಧಾನ ಪಡಿಸು; ಕರುಣ: ದಯೆ; ಪೋಗು: ಹೋಗು, ಗಮಿಸು; ವಿಧಿ: ಆಜ್ಞೆ, ಆದೇಶ, ನಿಯಮ; ವಿಹಿತ: ಯೋಗ್ಯ, ಹೊಂದಿಸಿದ; ಕರ್ಮ: ಕಾರ್ಯದ ಫಲ; ಧರ್ಮ; ಆಳಿ: ಗುಂಪು, ಸಾಲು; ಮಾಳ್ದು: ಮಾಡಿ, ಆಚರಿಸಿ; ಮಗ: ಸುತ; ಕೃಪಾಳು: ಕರುಣಿ; ಪಟ್ಟ: ಸ್ಥಾನ; ಸೇಸೆ: ಮಂಗಳಾಕ್ಷತೆ; ನಾರಯಣ: ಕೃಷ್ಣ;

ಪದವಿಂಗಡಣೆ:
ಗೋಳಿಡುತ+ ಬಂದ್+ಎರಗಿದರು +ಶಿಶು
ಪಾಲ +ತನುಜರು +ಕೃಷ್ಣನ್+ಅಂಘ್ರಿಗೆ
ಲಾಲಿಸಿದನ್+ಅನಿಬರನು +ಸಂತೈಸಿದನು +ಕರುಣದಲಿ
ಮೇಲು +ಪೋಗಿನ +ವಿಧಿವಿಹಿತ +ಕ
ರ್ಮಾಳಿಗಳ +ಮಾಳ್ದವನ +ಮಗಗೆ +ಕೃ
ಪಾಳು +ಪಟ್ಟದ +ಸೇಸೆದಳಿದನು +ವೀರನಾರಯಣ

ಅಚ್ಚರಿ:
(೧) ತನುಜ, ಮಗ – ಸಮನಾರ್ಥಕ ಪದ
(೨) ಕೃಷ್ಣನ ಪ್ರೇಮ – ಲಾಲಿಸಿದನನಿಬರನು ಸಂತೈಸಿದನು ಕರುಣದಲಿ; ಮಾಳ್ದವನ ಮಗಗೆ ಕೃ
ಪಾಳು ಪಟ್ಟದ ಸೇಸೆದಳಿದನು ವೀರನಾರಯಣ

ನಿಮ್ಮ ಟಿಪ್ಪಣಿ ಬರೆಯಿರಿ