ಪವನತನಯನ ಖತಿಯ ಝಾಡಿಯ
ಹವಣ ಕಂಡರು ಮಸಗಿದರು ಯಾ
ದವರ ಪಡೆಯಲಿ ಸಾಂಬ ಸಾತ್ಯಕಿ ಕಾಮ ಕೃತವರ್ಮ
ತವತವಗೆ ಪಾಂಚಾಲ ಕೇಕಯ
ನಿವಹ ಪಾಂಡವಸುತರು ಮೊದಲಾ
ದವಗಡೆಯರನುವಾಗೆ ಗಜಬಜವಾಯ್ತು ನಿಮಿಷದಲಿ (ಸಭಾ ಪರ್ವ, ೧೧ ಸಂಧಿ, ೨೫ ಪದ್ಯ)
ತಾತ್ಪರ್ಯ:
ಭೀಮನ ಕೋಪದ ಜೋರನ್ನು ಕಂಡು ಯಾದವ ಸೈನ್ಯದಲ್ಲಿ ಸಾಂಬ, ಸಾತ್ಯಕಿ, ಪ್ರದ್ಯುಮ್ನ, ಕೃತವರ್ಮ ಮೊದಲಾದವರು ಪಾಂಚಾಲರೂ ಕೇಕಯರೂ ಉಪಪಾಂಡವರೂ ಮೊದಲಾದ ವೀರರೆಲ್ಲರೂ ಯುದ್ಧಸನ್ನದ್ಧರಾದರು. ಕ್ಷಣಮಾತ್ರದಲ್ಲಿ ಭಾರೀ ಸದ್ದು ಆ ಸ್ಥಾನವನ್ನು ತುಂಬಿತು.
ಅರ್ಥ:
ಪವನ: ವಾಯು; ತನಯ: ಮಗ; ಪವನತನಯ: ಭೀಮ; ಖತಿ: ಕೋಪ; ಝಾಡಿ: ಕಾಂತಿ; ಹವಣ: ಮಿತಿ, ಅಳತೆ; ಕಂಡು: ನೋಡು; ಮಸಗು: ಹರಡು, ಕೆರಳು; ಪಡೆ: ಗುಂಪು; ತವತವಗೆ: ಅವರವರಲ್ಲಿ; ನಿವಹ: ಗುಂಪು; ಸುತ: ಮಗ; ಅನುವು: ಆಸ್ಪದ, ಅನುಕೂಲ; ಗಜಬಜ: ಗಲಾಟೆ, ಕೋಲಾಹಲ; ನಿಮಿಷ: ಕ್ಷಣ;
ಪದವಿಂಗಡಣೆ:
ಪವನತನಯನ +ಖತಿಯ +ಝಾಡಿಯ
ಹವಣ +ಕಂಡರು+ ಮಸಗಿದರು+ ಯಾ
ದವರ +ಪಡೆಯಲಿ +ಸಾಂಬ+ ಸಾತ್ಯಕಿ +ಕಾಮ +ಕೃತವರ್ಮ
ತವತವಗೆ+ ಪಾಂಚಾಲ+ ಕೇಕಯ
ನಿವಹ+ ಪಾಂಡವಸುತರು +ಮೊದಲಾ
ದವಗಡೆಯರ್+ಅನುವಾಗೆ +ಗಜಬಜವಾಯ್ತು +ನಿಮಿಷದಲಿ
ಅಚ್ಚರಿ:
(೧) ತನಯ, ಸುತ; ಪಡೆ, ನಿವಹ – ಸಮನಾರ್ಥಕ ಪದ