ಪದ್ಯ ೨೫: ಭೀಮನ ಕೋಪವು ಯಾರನ್ನು ಯುದ್ಧಕ್ಕೆ ಸನ್ನದ್ಧ ಮಾಡಿತು?

ಪವನತನಯನ ಖತಿಯ ಝಾಡಿಯ
ಹವಣ ಕಂಡರು ಮಸಗಿದರು ಯಾ
ದವರ ಪಡೆಯಲಿ ಸಾಂಬ ಸಾತ್ಯಕಿ ಕಾಮ ಕೃತವರ್ಮ
ತವತವಗೆ ಪಾಂಚಾಲ ಕೇಕಯ
ನಿವಹ ಪಾಂಡವಸುತರು ಮೊದಲಾ
ದವಗಡೆಯರನುವಾಗೆ ಗಜಬಜವಾಯ್ತು ನಿಮಿಷದಲಿ (ಸಭಾ ಪರ್ವ, ೧೧ ಸಂಧಿ, ೨೫ ಪದ್ಯ)

ತಾತ್ಪರ್ಯ:
ಭೀಮನ ಕೋಪದ ಜೋರನ್ನು ಕಂಡು ಯಾದವ ಸೈನ್ಯದಲ್ಲಿ ಸಾಂಬ, ಸಾತ್ಯಕಿ, ಪ್ರದ್ಯುಮ್ನ, ಕೃತವರ್ಮ ಮೊದಲಾದವರು ಪಾಂಚಾಲರೂ ಕೇಕಯರೂ ಉಪಪಾಂಡವರೂ ಮೊದಲಾದ ವೀರರೆಲ್ಲರೂ ಯುದ್ಧಸನ್ನದ್ಧರಾದರು. ಕ್ಷಣಮಾತ್ರದಲ್ಲಿ ಭಾರೀ ಸದ್ದು ಆ ಸ್ಥಾನವನ್ನು ತುಂಬಿತು.

ಅರ್ಥ:
ಪವನ: ವಾಯು; ತನಯ: ಮಗ; ಪವನತನಯ: ಭೀಮ; ಖತಿ: ಕೋಪ; ಝಾಡಿ: ಕಾಂತಿ; ಹವಣ: ಮಿತಿ, ಅಳತೆ; ಕಂಡು: ನೋಡು; ಮಸಗು: ಹರಡು, ಕೆರಳು; ಪಡೆ: ಗುಂಪು; ತವತವಗೆ: ಅವರವರಲ್ಲಿ; ನಿವಹ: ಗುಂಪು; ಸುತ: ಮಗ; ಅನುವು: ಆಸ್ಪದ, ಅನುಕೂಲ; ಗಜಬಜ: ಗಲಾಟೆ, ಕೋಲಾಹಲ; ನಿಮಿಷ: ಕ್ಷಣ;

ಪದವಿಂಗಡಣೆ:
ಪವನತನಯನ +ಖತಿಯ +ಝಾಡಿಯ
ಹವಣ +ಕಂಡರು+ ಮಸಗಿದರು+ ಯಾ
ದವರ +ಪಡೆಯಲಿ +ಸಾಂಬ+ ಸಾತ್ಯಕಿ +ಕಾಮ +ಕೃತವರ್ಮ
ತವತವಗೆ+ ಪಾಂಚಾಲ+ ಕೇಕಯ
ನಿವಹ+ ಪಾಂಡವಸುತರು +ಮೊದಲಾ
ದವಗಡೆಯರ್+ಅನುವಾಗೆ +ಗಜಬಜವಾಯ್ತು +ನಿಮಿಷದಲಿ

ಅಚ್ಚರಿ:
(೧) ತನಯ, ಸುತ; ಪಡೆ, ನಿವಹ – ಸಮನಾರ್ಥಕ ಪದ

ನಿಮ್ಮ ಟಿಪ್ಪಣಿ ಬರೆಯಿರಿ