ಅಳುಕಿದನೆ ರಥ ಮುಗ್ಗಿದರೆ ಕಳ
ವಳಿಸಿದನೆ ಶಲ್ಯಾಪಸರಣಕೆ
ಕೆಲಬಲನ ಹಾರಿದನೆ ನರನವಗಡಿಸಿ ಕಾದಿದಡೆ
ಬಲಿಮಥನ ಮಝ ಭಾಪು ಪಾಂಡವ
ಬಲದಿಶಾಪಟ ರಾಯಮದನ
ಪ್ರಳಯಹರ ಭಾಪೆಂದು ಹೊಗಳಿತು ವಂದಿಸಂದೊಹ (ಕರ್ಣ ಪರ್ವ, ೨೬ ಸಂಧಿ, ೪೯ ಪದ್ಯ)
ತಾತ್ಪರ್ಯ:
ವಂದಿ ಮಾಗಧರು ಕರ್ಣನ ಪರಾಕ್ರಮವನ್ನು ಹೊಗಳಿದರು, ರಥವು ನೆಲದಲ್ಲಿ ಹೂತರೆ ಹೆದರಿದನೇ? ಸಾರಥಿ ಶಲ್ಯನು ಬಿಟ್ಟು ಹೋದರೆ ಕಳವಳಿಸಿದನೇ? ಅರ್ಜುನನೇ ಯುದ್ಧಕ್ಕೆ ಬಂದರೂ ಅಕ್ಕಪಕ್ಕದವರ ಸಹಾಯವನ್ನು ಬೇಡಿದನೇ? ವಿಷ್ಣುವಿನಂತೆ ಅಜೇಯನು ಪಾಂಡವ ಮನ್ಮಥರಿಗೆ ಇವನೇ ಶಿವನಿದ್ದಂತೆ, ಭಲೇ ಎಂದು ಕರ್ಣನನ್ನು ಹೊಗಳಿದರು.
ಅರ್ಥ:
ಅಳುಕು: ಹೆದರು; ರಥ: ಬಂಡಿ; ಮುಗ್ಗು: ಬಾಗು, ಮಣಿ; ಕಳವಳ: ಗೊಂದಲ; ಅಪಸರಣ: ಹಿಮ್ಮೆಟ್ಟುವುದು; ಕೆಲ: ಸ್ವಲ್ಪ; ಬಲ: ಸೈನ್ಯ; ಹಾರು: ಲಂಘಿಸು, ಎದುರುನೋಡು; ನರ: ಅರ್ಜುನ; ಅವಗಡಿಸು: ಕಡೆಗಣಿಸು, ಸೋಲಿಸು; ಕಾದು: ಯುದ್ಧಮಾಡು; ಬಲಿಮಥನ: ಬಲಿಯನ್ನು ಕೊಂದವ (ವಿಷ್ಣು); ಮಝ ಭಾಪು: ಭಲೇ; ದಿಶಾಪಟ: ಶತ್ರುಗಳನ್ನು ದಿಕ್ಕುದಿಕ್ಕಿಗೆ ಓಡಿಸುವವ; ರಾಯ: ರಾಜ; ಮದನ: ಮನ್ಮಥ; ಪ್ರಳಯ:ನಾಶ, ಹಾಳು; ಹರ: ಶಿವ; ಭಾಪು: ಭಲೇ; ಹೊಗಳು: ಸ್ತುತಿ, ಕೊಂಡಾಟ; ವಂದಿ: ಹೊಗಳುಭಟ್ಟ; ಸಂದೋಹ: ಗುಂಪು;
ಪದವಿಂಗಡಣೆ:
ಅಳುಕಿದನೆ +ರಥ +ಮುಗ್ಗಿದರೆ +ಕಳ
ವಳಿಸಿದನೆ +ಶಲ್ಯ+ಅಪಸರಣಕೆ
ಕೆಲಬಲನ +ಹಾರಿದನೆ +ನರನ್+ಅವಗಡಿಸಿ+ ಕಾದಿದಡೆ
ಬಲಿಮಥನ +ಮಝ +ಭಾಪು +ಪಾಂಡವ
ಬಲ+ದಿಶಾಪಟ+ ರಾಯ+ಮದನ
ಪ್ರಳಯ+ಹರ +ಭಾಪೆಂದು +ಹೊಗಳಿತು +ವಂದಿಸಂದೊಹ
ಅಚ್ಚರಿ:
(೧) ಉಪಮಾನದ ಪ್ರಯೋಗ – ಬಲಿಮಥನ ಮಝ ಭಾಪು ಪಾಂಡವ ಬಲದಿಶಾಪಟ ರಾಯಮದನ ಪ್ರಳಯಹರ ಭಾಪೆಂದು ಹೊಗಳಿತು ವಂದಿಸಂದೊಹ