ಪದ್ಯ ೫೭: ಸಂಜಯನು ಯಾವ ವಿಷಯವನ್ನು ಸಂತಸದಿಂದ ಹೇಳಿದನು?

ಅದ್ದು ದುಮ್ಮಾನದಲಿ ಹೊಡೆಮಗು
ಳೆದ್ದುದೀ ಕುರುಸೇನೆ ತಡಿಯಲಿ
ಬಿದ್ದುದತಿಸಂತೋಷಸಾರಕ್ಷೀರಜಲಧಿಯಲಿ
ಗೆದ್ದನೈ ನಿನ್ನತನೊಸಗೆಯ
ಬಿದ್ದಿನರಲೈ ನಾವು ಪರರಿಗೆ
ಬಿದ್ದುದೊಂದು ವಿಘಾತಿಯೆಂದನು ಸಂಜಯನು ನಗುತ (ಕರ್ಣ ಪರ್ವ, ೨೪ ಸಂಧಿ, ೫೭ ಪದ್ಯ)

ತಾತ್ಪರ್ಯ:
ದುಃಖದ ಮಡುವಿನಲ್ಲಿ ಮುಳುಗಿದ್ದ ಕುರುಸೇನೆಯು ದಡಕ್ಕೆ ಬಂದಿತು, ಸಂತೋಷದ ಹಾಲಿನ ಕಡಲಲ್ಲಿ ವಿಹರಿಸಿತು, ನಿನ್ನ ಕರ್ಣನು ಗೆದ್ದ, ಆ ಶುಭ ಕಾರ್ಯದಲ್ಲಿ ನಾವೂ ಅತಿಥಿಗಳು. ಪಾಂಡವರಿಗೆ ಮಹತ್ತರವಾದ ಪೆಟ್ಟು ಬಿದ್ದಿತು ಎಂದು ಸಂಜಯನು ನಗುತ ವಿವರಿಸಿದನು.

ಅರ್ಥ:
ಅದ್ದು: ತೋಯ್ದು; ದುಮ್ಮಾನ: ದುಃಖ; ಹೊಡೆ: ಪೆಟ್ಟು; ಮಗುಳೆದ್ದು: ಮತ್ತೆ ಚೇತರಿಸಿಕೋ, ಎದ್ದೇಳು; ತಡಿ: ದಡ; ಅತಿ: ಬಹಳ; ಸಂತೋಷ: ಸಂತಸ; ಸಾರ: ರಸವತ್ತಾದ; ಕ್ಷೀರಜಲಧಿ; ಹಾಲಿನ ಸಮುದ್ರ; ಗೆದ್ದು: ವಿಜಯ; ಒಸಗೆ: ಶುಭ, ಮಂಗಳಕಾರ್ಯ, ಸಂದೇಶ; ಪರರು: ಬೇರೆ; ವಿಘಾತಿ: ಪೆಟ್ಟು, ಹೊಡೆತ; ನಗು: ಸಂತಸ;

ಪದವಿಂಗಡಣೆ:
ಅದ್ದು +ದುಮ್ಮಾನದಲಿ +ಹೊಡೆ+ಮಗುಳ್
ಎದ್ದುದ್+ಈ+ ಕುರುಸೇನೆ +ತಡಿಯಲಿ
ಬಿದ್ದುದ್+ಅತಿ+ಸಂತೋಷಸಾರ+ಕ್ಷೀರ+ಜಲಧಿಯಲಿ
ಗೆದ್ದನೈ+ ನಿನಾತನ್+ಒಸಗೆಯ
ಬಿದ್ದಿನರಲೈ +ನಾವು+ ಪರರಿಗೆ
ಬಿದ್ದುದೊಂದು +ವಿಘಾತಿಯೆಂದನು +ಸಂಜಯನು +ನಗುತ

ಅಚ್ಚರಿ:
(೧) ಕುರುಸೇನೆಯ ಸಂತಸವನ್ನು ಹೇಳುವ ಪರಿ – ಮಗುಳೆದ್ದುದೀ ಕುರುಸೇನೆ ತಡಿಯಲಿ
ಬಿದ್ದುದತಿಸಂತೋಷಸಾರಕ್ಷೀರಜಲಧಿಯಲಿ

ನಿಮ್ಮ ಟಿಪ್ಪಣಿ ಬರೆಯಿರಿ