ನಿನ್ನ ಜೂಜಿನ ವಿಲಗದಲಿ ಸಂ
ಪನ್ನ ರಾಜ್ಯವ ಬಿಸುಟು ನಿನ್ನಯ
ಬೆನ್ನಲಡವಿಯಲಾಡಿದೆವು ಹನ್ನೆರಡು ವರ್ಷದಲಿ
ಮನ್ನಿಸಿದೆ ಲೇಸಾಗಿ ಕೌರವ
ರಿನ್ನು ಕೊಡುವರೆ ನಿನಗೆ ರಾಜ್ಯವ
ನಿನ್ನ ಹಿಡಿದೇ ಭೀಮ ಬದುಕಲಿ ಎಂದನಾ ಪಾರ್ಥ (ಕರ್ಣ ಪರ್ವ, ೧೭ ಸಂಧಿ, ೩೦ ಪದ್ಯ)
ತಾತ್ಪರ್ಯ:
ನೀನು ಒಪ್ಪಿಕೊಂಡು ಸೋತ ಜೂಜಾಟದ ದೆಸೆಯಿಂದ, ರಾಜ್ಯವನ್ನು ಕಳೆದುಕೊಂಡು ನಿನ್ನ ಬೆನ್ನಹಿಂದೆ ಹನ್ನೆರಡು ವರ್ಷಗಳ ಕಾಲ ಅಡವಿಯಲ್ಲಿ ಅಲೆದಾಡಿದೆವು. ನಮ್ಮನ್ನು ಚೆನ್ನಾಗಿ ಗೌರವಿಸಿದೆ! ಇನ್ನು ಕೌರವರು ನಿನಗೆ ರಾಜ್ಯವನ್ನು ಕೊಡುವವರೇ? ಬೇಕಿದ್ದರೆ ಭೀಮನು ನಿನ್ನನ್ನು ಅನುಸರಿಸಲಿ ಎಂದು ಅರ್ಜುನನು ತನ್ನ ಮಾತನ್ನು ಮೊನಚುಗೊಳಿಸಿದನು.
ಅರ್ಥ:
ಜೂಜು: ಪಂದ್ಯ; ವಿಲಗ: ಹೊಂದಿಕೆಯಿಲ್ಲದಿರುವಿಕೆ; ಸಂಪನ್ನ: ಸಜ್ಜನ, ಸತ್ಪುರುಷ; ರಾಜ್ಯ: ರಾಷ್ಟ್ರ; ಬಿಸುಟು: ಹೊರಹಾಕು; ಬೆನ್ನು: ಹಿಂದೆ; ಅಡವಿ: ಕಾಡು; ಆಡು: ಅಲೆದಾಡು; ವರ್ಷ: ಸಂವತ್ಸರ; ಮನ್ನಿಸು: ಗೌರವಿಸು; ಲೇಸು: ಒಳಿತು; ಕೊಡು: ನೀಡು; ಹಿಡಿ: ಹಿಡಿಕೆ, ಕಾವು; ಬದುಕು: ಜೀವಿಸು;
ಪದವಿಂಗಡಣೆ:
ನಿನ್ನ +ಜೂಜಿನ +ವಿಲಗದಲಿ +ಸಂ
ಪನ್ನ +ರಾಜ್ಯವ +ಬಿಸುಟು +ನಿನ್ನಯ
ಬೆನ್ನಲ್+ಅಡವಿಯಲ್+ಆಡಿದೆವು +ಹನ್ನೆರಡು +ವರ್ಷದಲಿ
ಮನ್ನಿಸಿದೆ +ಲೇಸಾಗಿ +ಕೌರವ
ರಿನ್ನು +ಕೊಡುವರೆ +ನಿನಗೆ +ರಾಜ್ಯವ
ನಿನ್ನ+ ಹಿಡಿದೇ +ಭೀಮ +ಬದುಕಲಿ+ ಎಂದನಾ +ಪಾರ್ಥ
ಅಚ್ಚರಿ:
(೧) ಅಹಾ ಚೆನ್ನಾಗಿ ನಮ್ಮನ್ನು ಗೌರವಿಸಿದೆ ಎಂದು ಹಳಿಯುವ ಪರಿ – ಮನ್ನಿಸಿದೆ ಲೇಸಾಗಿ
(೨) ನಾನು ನಿನ್ನ ಜೊತೆ ಬರುವುದಿಲ್ಲ ಎಂದು ಹೇಳುವ ಪರಿ – ನಿನ್ನ ಹಿಡಿದೇ ಭೀಮ ಬದುಕಲಿ