ಎಲೆ ಧನಂಜಯ ನೀನೆ ಬಲುಗೈ
ಯುಳಿದವರು ರಣಖೇಡರೇ ಕುರು
ಬಲವನೊಬ್ಬನೆ ಕೇಣಿಗೊಂಡೆನು ಕರ್ಣ ಮೊದಲಾಗಿ
ಅಳಿಕಿಸುವೆನೀಕ್ಷಣಕೆ ತನ್ನ
ಗ್ಗಳಿಕೆಯನು ನೋಡವನಿಪಾಲನ
ಬಳಲಿಕೆಯ ಸಂತೈಸು ನಡೆ ನೀನೆಂದನಾ ಭೀಮ (ಕರ್ಣ ಪರ್ವ, ೧೪ ಸಂಧಿ, ೪೦ ಪದ್ಯ)
ತಾತ್ಪರ್ಯ:
ಎಲೈ ಅರ್ಜುನ ನೀನೊಬ್ಬನೇ ವೀರ ಉಳಿದವರು ರಣಕ್ಕೆ ಹೆದರುವ ಹೇಡಿಗಳೆಂದು ನೀನು ತಿಳಿದಿರುವೆಯಾ? ಕರ್ಣನು ಸೇರಿದಂತೆ ಸಮಸ್ತ ಕುರುಸೈನ್ಯವನ್ನು ನಾನು ಗುತ್ತಿಗೆ ಪಡೆದು ಬೆದರಿಸುತ್ತೇನೆ, ನೀನು ಹೋಗಿ ಅಣ್ಣನನ್ನು ಉಪಚರಿಸು ನನ್ನ ಪರಾಕ್ರಮವನ್ನು ನೋಡು ಎಂದು ಭೀಮನು ಅರ್ಜುನನಿಗೆ ಹೇಳಿದನು.
ಅರ್ಥ:
ಬಲುಗೈ: ಪರಾಕ್ರಮಿ; ಉಳಿದ: ಮಿಕ್ಕ; ರಣ: ಯುದ್ಧ; ಖೇಡ: ಹೆದರು; ಬಲ:ಸೈನ್ಯ; ಕೇಣಿ: ಪಾಲು; ಭಾಗ, ಗುತ್ತಿಗೆ; ಮೊದಲು: ಆದಿ; ಅಳಿ: ನಾಶಮಾಡು; ಅಳುಕು: ಹೆದರಿಕೆ; ಕ್ಷಣ: ಸಮಯ; ಅಗ್ಗಳಿಕೆ: ಶ್ರೇಷ್ಠ; ನೋಡು: ವೀಕ್ಷಿಸು; ಅವನಿಪಾಲ: ರಾಜ; ಬಳಲಿಕೆ: ಆಯಾಸ; ಸಂತೈಸು: ಸಮಾಧಾನ ಪಡಿಸು; ನಡೆ: ಹೊರಡು;
ಪದವಿಂಗಡಣೆ:
ಎಲೆ +ಧನಂಜಯ +ನೀನೆ +ಬಲುಗೈ
ಯುಳಿದವರು+ ರಣಖೇಡರೇ +ಕುರು
ಬಲವನ್+ಒಬ್ಬನೆ +ಕೇಣಿಗೊಂಡೆನು +ಕರ್ಣ +ಮೊದಲಾಗಿ
ಅಳಿಕಿಸುವೆನ್+ಈಕ್ಷಣಕೆ +ತನ್ನ್
ಅಗ್ಗಳಿಕೆಯನು +ನೋಡ್+ಅವನಿಪಾಲನ
ಬಳಲಿಕೆಯ +ಸಂತೈಸು +ನಡೆ +ನೀನೆಂದನಾ +ಭೀಮ
ಅಚ್ಚರಿ:
(೧) ಅರ್ಜುನನನ್ನು ಕಾಲೆಳೆಯುವ ಬಗೆ – ನೀನೆ ಬಲುಗೈ ಯುಳಿದವರು ರಣಖೇಡರೇ