ಕಡುಗಿದರೆ ಕಾಲಾಗ್ನಿ ರುದ್ರನ
ಕಡುಹನಾನುವರೀತನೇ ಸೈ
ಗೆಡೆವ ರೋಮದ ಧೂಮ್ರವಕ್ತ್ರದ ಸ್ವೇದಬಿಂದುಗಳ
ಜಡಿವ ರೋಷದ ಭರದಲಡಿಗಡಿ
ಗೊಡಲನೊಲೆದು ಮಹಾಸ್ತ್ರದಲಿ ಕಡಿ
ಕಡಿದು ಬಿಸುಟನು ಗುರುಸುತನ ಸಾರಥಿಯ ರಥಹಯವ (ಕರ್ಣ ಪರ್ವ, ೧೪ ಸಂಧಿ, ೨೦ ಪದ್ಯ)
ತಾತ್ಪರ್ಯ:
ಕೋಪಗೊಂಡು ಕಾಳಗಕ್ಕಿಳಿದರೆ ಪ್ರಳಯಕಾಲದ ರುದ್ರನ ಅಬ್ಬರವನ್ನು ಯಾರು ತಾನೆ ತಾಳಿಯಾರು? ರೋಮಗಳು ಜೋತು ಬಿದ್ದು, ಮುಖ ಕಪ್ಪಾಗಿ, ಬೆವರಿನ ಹನಿಗಳಿಯುತ್ತಿರಲು, ಕೋಪೋದ್ರಿಕ್ತನಾದ ಅರ್ಜುನನು ಮೈತೂಗಿ ಮಹಾಸ್ತ್ರ ಪ್ರಯೋಗ ಮಾಡಿ ಅಶ್ವತ್ಥಾಮನ ಸಾರಥಿ ರಥ ಕುದುರೆಗಳನ್ನು ಕಡಿದು ಬಿಟ್ಟನು.
ಅರ್ಥ:
ಕಡುಗು: ಶಕ್ತಿಗುಂದು; ಕಾಲಾಗ್ನಿ: ಪ್ರಳಯಕಾಲದ ಬೆಂಕಿ; ರುದ್ರ: ಶಿವನ ಅವತಾರ; ಕಡು: ವಿಶೇಷವಾಗಿ, ಹೆಚ್ಚಾಗಿ; ಆನು: ಯಾರು; ಅರಿ: ತಿಳಿ; ಸೈಗೆಡೆ:ಅಡ್ಡಬೀಳು, ನಮಸ್ಕರಿಸು; ರೋಮ: ಕೂದಲು; ಧೂಮ್ರ:ಬೂದುಬಣ್ಣ, ಹೊಗೆಯ ಬಣ್ಣ; ವಕ್ತ್ರ: ಮುಖ; ಸ್ವೇದ: ಬೆವರು; ಬಿಂದು: ಹನಿ; ಜಡಿ: ಗದರಿಸು, ಬೆದರಿಸು; ರೋಷ: ಕೋಪ; ಭರದ: ವೇಗ, ಆವೇಶ; ಅಡಿಗಡಿ: ಮತ್ತೆ ಮತ್ತೆ; ಒಡಲು: ದೇಹ; ಒಲೆ: ತೂಗಾಡು; ಮಹಾಸ್ತ್ರ: ಶ್ರೇಷ್ಠವಾದ ಆಯುಧ; ಕಡಿ: ಸೀಳು; ಬಿಸುಟು: ಹೊರಹಾಕು; ಗುರುಸುತ: ಅಚಾರ್ಯರ ಮಗ (ಅಶ್ವತ್ಥಾಮ); ಸಾರಥಿ: ರಥವನ್ನು ಓಡಿಸುವವ; ರಥ: ಬಂಡಿ; ಹಯ: ಕುದುರೆ;
ಪದವಿಂಗಡಣೆ:
ಕಡುಗಿದರೆ +ಕಾಲಾಗ್ನಿ +ರುದ್ರನ
ಕಡುಹನ್+ಆನುವರ್+ಈತನೇ +ಸೈ
ಗೆಡೆವ +ರೋಮದ +ಧೂಮ್ರವಕ್ತ್ರದ +ಸ್ವೇದಬಿಂದುಗಳ
ಜಡಿವ +ರೋಷದ +ಭರದಲ್+ಅಡಿಗಡಿಗ್
ಒಡಲನ್+ಒಲೆದು +ಮಹಾಸ್ತ್ರದಲಿ +ಕಡಿ
ಕಡಿದು +ಬಿಸುಟನು +ಗುರುಸುತನ +ಸಾರಥಿಯ +ರಥ+ಹಯವ
ಅಚ್ಚರಿ:
(೧) ಅರ್ಜುನನ ವೀರಾವೇಶವನ್ನು ವಿವರಿಸುವ ಪದ್ಯ – ಜಡಿವ ರೋಷದ ಭರದಲಡಿಗಡಿ
ಗೊಡಲನೊಲೆದು ಮಹಾಸ್ತ್ರದಲಿ ಕಡಿಕಡಿದು ಬಿಸುಟನು ಗುರುಸುತನ ಸಾರಥಿಯ ರಥಹಯವ